ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವಕ್ಷೇತ್ರಕ್ಕೆ ಬಂದ ಎಚ್.ನಾಗೇಶ್ ಹೇಳಿದ್ದೇನು?
ಕೋಲಾರ, ಜನವರಿ 14: ಬುಧವಾರ ನಡೆದ ಸಚಿವ ಸಂಪುಟ ವಿಸ್ತರಣೆಯ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಅವರ ಮನವೊಲಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಗುರುವಾರ ಮಾಜಿ ಸಚಿವ ಎಚ್.ನಾಗೇಶ್ ಅವರು ಸ್ವಕ್ಷೇತ್ರ ಮುಳಬಾಗಿಲಿಗೆ ಬರುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಲಾಯಿತು. ಅಂಬೇಡ್ಕರ್ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಪಟಾಕಿ ಸಿಡಿಸಿ, ಮಾಜಿ ಸಚಿವ ಎಚ್.ನಾಗೇಶ್ ಅವರನ್ನು ಬೆಂಬಲಿಗರು ಮೆರವಣಿಗೆ ಮಾಡಿದರು. ಮುಳಬಾಗಿಲು ಪಟ್ಟಣದ ಬಸ್ ನಿಲ್ದಾಣದ ವೃತ್ತದಿಂದ ಮೆರವಣಿಗೆ ಮಾಡಲಾಯಿತು.
ನಂತರ ಕೋಲಾರದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ನಾಗೇಶ್, ನಾನು ಅಚಾನಕ್ಕಾಗಿ ಶಾಸಕನಾದವನು, ಒಂದೊಳ್ಳೆ ಅವಕಾಶ ಸಿಕ್ಕಿ ಸಚಿವನೂ ಆದೆ. ಸದ್ಯ ಸಿಎಂ ಅವರಿಗೆ ಸಾಕಷ್ಟು ಒತ್ತಡಗಳಿರುವುದರಿಂದ ರಾಜೀನಾಮೆ ಪಡೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನನ್ನ ಬೆಂಬಲ ಕೂಡ ಮುಖ್ಯಮಂತ್ರಿಗಳಿಗೆ ಬೇಕಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ ಮೊದಲನೇ ಮಂತ್ರಿ ನಾನು. ನಾನು ರಾಜೀನಾಮೆ ಕೊಟ್ಟಾಗ ಸಾಕಷ್ಟು ಜನ ಆಡಿಕೊಂಡರು. ಸರ್ಕಾರ ರಚನೆಯಾದಾಗ ಒಳ್ಳೆಯ ಖಾತೆ ಕೊಟ್ಟಿದ್ದರು, ಅದಕ್ಕೆ ನಾನು ಅಭಾರಿ ಎಂದು ಹೇಳಿದರು.
ಸಚಿವ ನಾಗೇಶ್ ರಾಜೀನಾಮೆ; ಸ್ವ ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಂಭ್ರಮ!
ನನಗೆ ಈಗಲೂ ಸಿಎಂ ಮಾತು ಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಸಂಪುಟ ದರ್ಜೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿ ಸಿಕ್ಕಿರುವುದು ತೃಪ್ತಿ ತಂದಿದೆ. ರಾಜ್ಯಾದಾದ್ಯಂತ ಸಮುದಾಯದ ಜನರ ಸೇವೆ ಮಾಡುತ್ತೇನೆ. ಯಾರೇ ಜಿಲ್ಲಾ ಉಸ್ತುವಾರಿ ಸಚಿವರಾದರೂ ಅವರಿಗೆ ನನ್ನ ಬೆಂಬಲ ಇರುತ್ತದೆ ಎಂದರು.
ಮಿತ್ರ ಮಂಡಳಿಯ ಸಾಕಷ್ಟು ಮಂದಿಗೆ ನನ್ನ ರಾಜೀನಾಮೆ ನೋವು ತಂದಿದೆ. ಈ ಬಗ್ಗೆ ಈಗಾಗಲೇ ಎಚ್.ವಿಶ್ವನಾಥ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನನಗೆ ಮತ್ತು ಮುನಿರತ್ನಗೆ ಅವಕಾಶ ನೀಡುವ ನಿರೀಕ್ಷೆ ಇದೆ. ನಾನು ರಾಜಿನಾಮೆ ನೀಡಿದಾಗ ಬಾಂಬೆ ಮಿತ್ರ ಮಂಡಳಿ ಮುಖ್ಯಮಂತ್ರಿಯವರಲ್ಲಿ ಅತಂಕ ವ್ಯಕ್ತಪಡಿಸಿದರು.
ಮುಂದೆ ನಮಗೂ ಈ ರೀತಿಯಾಗತ್ತಾ ಅಂತಾ ನಮ್ಮ ಬಾಂಬೆ ಮಿತ್ರ ಮಂಡಳಿ ಸಿಎಂ ಅವರಲ್ಲಿ ಆತಂಕ ವ್ಯಕ್ತಪಡಿಸಿದಾಗ, ಸಿಎಂ ಅವರು ನನ್ನಲ್ಲಿ ವಿಶ್ವಾಸವಿಡಿ ಎಂಬ ಮಾತು ಕೊಟ್ಟಿದ್ದಾರೆ. ನಮ್ಮ ಮುಂಬೈ ಮಿತ್ರ ಮಂಡಳಿ ಒಂದಾಗಿಯೇ ಇದ್ದೇವೆ, ನಮ್ಮಲ್ಲಿ ಒಡಕಿಲ್ಲ ಎಂದು ಮಾಜಿ ಸಚಿವ ಎಚ್.ನಾಗೇಶ್ ಕೋಲಾರದಲ್ಲಿ ತಿಳಿಸಿದರು.