ಹಗರಣ ಹೈಪ್ ಮಾಡಿ ನಂತರ ಕೋಲ್ಡ್ ಸ್ಟೋರೇಜ್ಗೆ: ಎಚ್ಡಿಕೆ ಟೀಕೆ
ಕೋಲಾರ/ಬಂಗಾರಪೇಟೆ, ಏಪ್ರಿಲ್ 24: "ಈಗ ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿದೆ. ನಾಲ್ಕು ದಿನಗಳ ಕಾಲ ಅವುಗಳನ್ನು ಮಾಧ್ಯಮಗಳಲ್ಲಿ ಹೈಪ್ ಮಾಡಿ ಆ ಮೇಲೆ ಗುಂಡಿ ತೋಡಿ ಮುಚ್ಚಲಾಗುತ್ತಿದೆ," ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.
ಜನತಾ ಜಲಧಾರೆಯ ಪ್ರಯುಕ್ತ ಬಂಗಾರಪೇಟೆ ತಾಲೂಕಿನ ಯರಗೋಳ್ ಜಲಾಶಯದಲ್ಲಿ ಜಲ ಸಂಗ್ರಹ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡದರು. "ಈಗ ಪೊಲೀಸ್ ಇಲಾಖೆಯಲ್ಲಿ ನಡೆದಿರುವ ಪಿಎಸ್ಐ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಒಂದು ವಾರದ ಕಾಲ ಅವರನ್ನು ಬಂಧಿಸಿದೆವು, ಇವರನ್ನು ಬಂಧಿಸಿದೆವು ಎಂದು ಪ್ರಚಾರ ಮಾಡಿ, 15-20 ದಿನ ಆದ ಮೇಲೆ ಅದನ್ನು ಕೋಲ್ಡ್ ಸ್ಟೋರೇಜ್ʼಗೆ ಹಾಕುತ್ತಾರೆ," ಎಂದು ಆರೋಪ ಮಾಡಿದರು.
ಸಹಕಾರ ಇಲಾಖೆಯಲ್ಲಿ ಲಂಚಾವತಾರ!! ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಎಚ್ಡಿಕೆ
"ಇಂಥ ಅಪರಾಧಗಳನ್ನು ಯಾರದ್ದೋ ಕುಮ್ಮಕ್ಕಿನಿಂದ ವ್ಯವಸ್ಥಿತವಾಗಿ ನಡೆಸುವ ಅಪರಾಧಿಗಳನ್ನು ಬಲಿ ಹಾಕಬೇಕು. ಅದುಬಿಟ್ಟು ಅಮಾಯಕರನ್ನು ಬಲಿಪಶು ಮಾಡುವ ಕೆಲಸ ಆಗಬಾರದು," ಎಂದು ಮಾಜಿ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
"ಪೊಲೀಸ್ ಇಲಾಖೆಯ ಮುಖ್ಯಸ್ಥರ ನಿರ್ಲಕ್ಷದಿಂದಲೂ ಪರೀಕ್ಷಾ ಅಕ್ರಮ ಆಗಿರಬಹುದು ಎಂದ ಮಾಜಿ ಮುಖ್ಯಮಂತ್ರಿಗಳು; ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲೂ ನೇಮಕಾತಿ ವಿಷಯದಲ್ಲಿ ಅಕ್ರಮಗಳು ನಡೆಯುಚತ್ತಲೇ ಇವೆ. ಹಣ ನೀಡಿದರೆ ಕೆಲಸ, ಇಲ್ಲವೆಂದರೆ ಇಲ್ಲ. ಕೆಲವೆಡೆ ಹಣ ಕೊಟ್ಟರೂ ಕೆಲಸ ಸಿದ ಅಭ್ಯರ್ಥಿಗಳು ಅಲೆಯುತ್ತಿದ್ದಾರೆ," ಎಂದು ಕುಮಾರಸ್ವಾಮಿ ದೂರಿದರು.
"ನೇಮಕ ಅಕ್ರಮಗಳ ಬಗ್ಗೆ ಸರಕಾರಗಳು ಪಾಠ ಕಲಿಯುತ್ತಿಲ್ಲ. ಇವೆಲ್ಲ ಸ್ವಲ್ಪ ದಿನ ಚರ್ಚೆ ಆಗುತ್ತವೆ. ಆಮೇಲೆ ಅವುಗಳನ್ನು ಪಕ್ಕಕ್ಕೆ ಇಡಲಾಗುತ್ತದೆ. ನಾಲ್ಕು ದಿನ ತನಿಖೆ ನಡೆಸಿದಂತೆ ನಾಟಕ ಆಡಿ ಆಮೇಲೆ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ. ವ್ಯವಸ್ಥೆ ಹಾಳು ಮಾಡುವವರನ್ನು ಸುಮ್ಮನೆ ಬಿಟ್ಟಿದ್ದಾರೆ. 15 ದಿವಸ ಇದಕ್ಕೆ ಭರ್ಜರಿ ಪ್ರಚಾರ ಕೊಟ್ಟು ಬಳಿಕ ಇಡೀ ಪ್ರಕರಣವನ್ನು ಕೋಲ್ಡ್ ಸ್ಟೋರೇಜಿಗೆ ತಳ್ಳಿಬಿಡುತ್ತಾರೆ," ಎಂದು ಹೇಳಿದರು.
"ವ್ಯವಸ್ಥೆಯನ್ನು ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಣ ತಿಂದು ತೇಗಿದವರು ಆರಾಮಾಗಿ ಪೊಗದಸ್ತಾಗಿ ಬೆಳೆಯಲು ಬಿಟ್ಟಿದ್ದಾರೆ. ಡ್ರಗ್ಸ್ ಹಗರಣ ಏನಾಗಿದೆ ಎನ್ನುವುದನ್ನು ನೋಡಿ. ದೊಡ್ಡದಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದವರು ಎಲ್ಲಿದ್ದಾರೆ? ಸುಮ್ಮನೆ ಆರೋಪ ಮಾಡುತ್ತಾರೆ, ಆಮೇಲೆ ಸೈಲಂಟ್ ಆಗುತ್ತಾರೆ. ಇದೇ ರೀತಿ ಎಲ್ಲ ಪ್ರಕರಣಗಳನ್ನು ಗುಂಡಿ ತೋಡಿ ಮುಚ್ಚುತ್ತಿದ್ದಾರೆ," ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ
"ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು; ನಮ್ಮ ತಂದೆ ಹೆಸರಿನಲ್ಲಿ ಆಣೆ-ಪ್ರಮಾಣದ ಮಾಡಿ ಎಂದು ಕೇಳುತ್ತಾರೆ. ಈ ಮಹಾನುಭಾವ ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಾಗ ನಾನು ಅನಿವಾರ್ಯವಾಗಿ ಬಿಜೆಪಿ ಜತೆ ಸೇರಿ ಸರಕಾರ ಮಾಡಿದೆ. ಹಾಗಂತ ನಾನೆಂದೂ ಕೋಮುವಾದಕ್ಕೆ ಅವಕಾಶ ಕೊಡಲಿಲ್ಲ. ಬಿಜೆಪಿ ಅಜೆಂಡಾಗಳಿಗೆ ಬೆಂಬಲ ನೀಡಲಿಲ್ಲ. ನನ್ನ ವಧಿಯಲ್ಲಿ ಎಲ್ಲಿಯೂ ಯಾವುದೇ ರೀತಿಯ ಗಲಭೆಗಳು ನಡೆಯಲಿಲ್ಲ. ಕೊಲೆಗಳು ಆಗಲಿಲ್ಲ," ಎಂದು ಟಾಂಗ್ ಕೊಟ್ಟರು.
"ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಗಳಾಗಿದ್ದಾಗ ಎಷ್ಟು ಕೊಲೆಗಳು ನಡೆದವು? ಎಷ್ಟು ರಾಜಕೀಯ ಕೊಲೆಗಳು ಆದವು ಗೊತ್ತಾ? ಎಂದು ಪ್ರಶ್ನೆ ಮಾಡಿದ ಮಾಜಿ ಸಿಎಂ; ನಮ್ಮ ಪಕ್ಷವನ್ನು ಮುಗಿಸುವ ಅವರ ವ್ಯರ್ಥ ಪ್ರಯತ್ನ ಎಂದಿಗೂ ಈಡೇರುವುದಿಲ್ಲ," ಎಂದರು.
ರಾಜಕೀಯ ವಿಶೇಷ: ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದ ಎಚ್.ಡಿ. ಕುಮಾರಸ್ವಾಮಿ
"ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಮಮತಾ ಬ್ಯಾನರ್ಜಿ ಮಂತ್ರಿ ಆಗಿದ್ದರು. ಬಿಜೆಪಿ ಸರಕಾರದಲ್ಲಿ ಅವರು ಕೆಲಸ ಮಾಡಿದ್ದರು. ಅವರನ್ನೇಕೆ ಬಿಜೆಪಿ ಬಿ ಟೀಂ ಅನ್ನಲ್ಲ ಈ ವ್ಯಕ್ತಿ. ನಾವು ಬಿಜೆಪಿ ಸರಕಾರದ ಜತೆ ಸರಕಾರ ಮಾಡಿದರೂ ನಮ್ಮ ಜಾತ್ಯತೀತ ನಿಲುವನ್ನು ಕಾಪಾಡಿಕೊಂಡಿದ್ದೇವೆ. ನಮ್ಮ ಜಾತ್ಯಾತೀತ ತತ್ತ್ವವನ್ನು ಯಾರಿಗೂ ಮಾರಾಟ ಮಾಡಿಲ್ಲ. ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಸಂಚು ರೂಪಿಸಿದ್ದಾರೆ," ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.
Recommended Video
ಪಕ್ಷದ ಮುಖಂಡರಾದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಮಾಜಿ ಶಾಸಕ ವೆಂಕಟಶಿವಾ ರೆಡ್ಡಿ, ಮುಖಂಡರಾದ ಮಲ್ಲೇಶ್, ಶ್ರೀನಾಥ್, ರಾಮೇಗೌಡ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.