ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ವಿಧಿವಶ: ಎಚ್.ಡಿ ಕುಮಾರಸ್ವಾಮಿ ಸಂತಾಪ
ಚಿಕ್ಕಬಳ್ಳಾಪುರ ಏಪ್ರಿಲ್ 15: ಕೋಲಾರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ವಿಧಿವಶರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮನೆಯಲ್ಲಿ ಬೆಳಗ್ಗೆ 6.45ಕ್ಕೆ ಹೃದಯಾಘಾತದಿಂದ ಕುಸಿದು ಬಿದ್ದು ಜಿ.ವಿಶ್ರೀರಾಮರೆಡ್ಡಿ ನಿಧನರಾಗಿದ್ದಾರೆ. ತಕ್ಷಣವೇ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶ್ರೀರಾಮರೆಡ್ಡಿ ನಿಧನರಾಗಿರುವ ಬಗ್ಗೆ ಬೆಳಗ್ಗೆ 7.28ಕ್ಕೆ ವೈದ್ಯರು ಮಾಹಿತಿ ನೀಡಿದ್ದಾರೆ.
ಸಿಪಿಐಎಂ ಪಕ್ಷದಿಂದ ಎರಡು ಭಾರಿ ಶಾಸಕರಾಗಿದ್ದ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತಿಯಾಗಿದ್ದರು. ಇತ್ತೀಚೆಗೆ ಸಿಪಿಐಎಂ ಪಕ್ಷ ತೊರೆದು ತಮ್ಮದೇ ಪ್ರಜಾ ಸಂಘರ್ಷ ಸಮಿತಿ ಸ್ಥಾಪನೆ ಮಾಡಿದ್ದರು. ಸಾಮಾಜಿಕ ಹೋರಾಟ ಆರಂಭಿಸಿದ್ದರು. ಸಮಾಜದ ಸುಧಾರಣೆಗಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದರು. ಜಿ.ವಿ.ಎಸ್ ನಿಧನದಿಂದ ಅಪಾರ ಬೆಂಬಲಿಗರಲ್ಲಿ ದುಃಖ ಮಡುಗಟ್ಟಿದೆ. ಆಸ್ಪತ್ರೆ ಬಳಿ ಬೆಂಬಲಿಗರು ಜಮಾಹಿಸುತ್ತಿದ್ದಾರೆ. ಜಿ.ವಿ.ಶ್ರೀರಾಮರೆಡ್ಡಿ ಅವರ ಅಗಲಿಕೆಗೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಗತಿಪರ ಚಿಂತಕರು, ಕೃಷಿ-ಕಾರ್ಮಿಕರ ಪರ ಹೋರಾಟಗಾರರು ಹಾಗೂ ಮಾಜಿ ಶಾಸಕರಾದ ಕಾಮ್ರೇಡ್ ಜಿ.ವಿ.ಶ್ರೀರಾಮರೆಡ್ಡಿ ಅವರ ನಿಧನದ ಸುದ್ದಿ ನನಗೆ ತೀವ್ರ ದುಃಖ ಉಂಟು ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಸಿಪಿಎಂ (ಐ) ಪಕ್ಷದಿಂದ ಎರಡು ಬಾರಿ ಬಾಗೇಪಲ್ಲಿ ಕ್ಷೇತ್ರದಿಂದ ಆಯ್ಕೆ ಆಗಿದ್ದ ಅವರು, ಮಾದರಿ ಜನಪ್ರತಿನಿಧಿಯಷ್ಟೇ ಅಲ್ಲ, ಅತ್ಯುತ್ತಮ ಸಂಸದೀಯ ಪಟುವೂ ಹೌದು. ಶ್ರೀರಾಮರೆಡ್ಡಿ ಅವರ ಅಗಲಿಕೆಯಿಂದ ರಾಜ್ಯದಲ್ಲಿ ನಡೆಯುತ್ತಿರುವ ವೈಚಾರಿಕಪರ ಹೋರಾಟದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಶ್ರೀರಾಮರೆಡ್ಡಿ ಅವರ ಅಗಲಿಕೆಯಿಂದ ರಾಜ್ಯದಲ್ಲಿ ನಡೆಯುತ್ತಿರುವ ವೈಚಾರಿಕಪರ ಹೋರಾಟದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. 2/2
— H D Kumaraswamy (@hd_kumaraswamy) April 15, 2022
ಜೊತೆಗೆ ಜಿ.ವಿ.ಶ್ರೀರಾಮರೆಡ್ಡಿ ಅಗಲಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. 2018ರ ಚುನಾವಣೆಯಲ್ಲಿ 51,697 ಮತಗಳನ್ನು ಪಡೆದು ಅವರು ಸೋಲು ಕಂಡಿದ್ದರು. ತಮ್ಮ ಜನಪರ ನಿಲುವುಗಳಿಂದ ಪ್ರಸಿದ್ಧಿ ಪಡೆದಿದ್ದ ಜಿ. ವಿ. ಶ್ರೀರಾಮ ರೆಡ್ಡಿ ಸಿಪಿಐ(ಎಂ) ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಸರ್ಕಾರದ ಜನ ವಿರೋಧಿ ನೀತಿಯನ್ನು ಕಟುವಾಗಿ ಟೀಕಿಸುತ್ತಿದ್ದರು.
ಬಾಗೇಪಲ್ಲಿ ಸಿಪಿಐ(ಎಂ) ಪಕ್ಷವನ್ನು ಸಂಘಟನೆ ಮಾಡಿ 1999, 2004ರಲ್ಲಿ ಬಾಗೇಪಲ್ಲಿಯಿಂದ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ನ ಎಸ್. ಎನ್. ಸುಬ್ಬಾರೆಡ್ಡಿ ವಿರುದ್ಧ ಕಣಕ್ಕಿಳಿದ್ದರು. 51,697 ಮತಗಳನ್ನು ಪಡೆದು ಸೋಲು ಕಂಡಿದ್ದರು. 2018ರಲ್ಲಿ ಪಕ್ಷದ ತತ್ವ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡರು ಎಂಬ ಕಾರಣಕ್ಕೆ ಸಿಪಿಐ(ಎಂ) ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿತ್ತು. ಬಳಿಕವೂ ಅವರು ಜನರನ್ನು ಸೇರಿಸಿ ಹಲವು ಹೋರಾಟ ಮಾಡಿದ್ದರು.