ತೋಟಕ್ಕೆ ಬೆಂಕಿ; ಬೆಳೆದು ನಿಂತಿದ್ದ 5 ಎಕರೆ ಬಾಳೆ ಸುಟ್ಟು ಬೂದಿ
ಕೋಲಾರ, ಮಾರ್ಚ್ 18; ಕಟಾವಿಗೆ ಬಂದಿದ್ದ ಬಾಳೆ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಕೋಲಾರದಲ್ಲಿ ನಡೆದಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ಸುಟ್ಟು ಭಸ್ಮವಾಗಿದೆ.
ಸುಟ್ಟು ಕರಕಲಾಗಿರುವ ಬಾಳೆ ತೋಟ, ತೋಟವನ್ನು ಆತಂಕದಿಂದ ಕಣ್ಣೀರಿಡುತ್ತಾ ನೋಡುತ್ತಿರುವ ರೈತ, ಮತ್ತೊಂದೆಡೆ ಬೆಂಕಿಯ ಕೆನ್ನಾಲಿಗೆಗೆ ಕಪ್ಪಗಾಗಿರುವ ಬಾಳೆ ಗಿಡ ಹಾಗೂ ಬಾಳೆ ಕಾಯಿಗಳು ಈ ದೃಶ್ಯ ಕಂಡು ಬಂದಿದ್ದು ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ರೈತ ಕೃಷ್ಣಪ್ಪ ತೋಟದಲ್ಲಿ.
ಒಂದು ಜಿಲ್ಲೆ, ಒಂದು ಉತ್ಪನ್ನಕ್ಕೆ ಮೈಸೂರಿನ ಬಾಳೆ, ಕೊಡಗಿನ ಕಾಫಿ ಆಯ್ಕೆ
ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುಮಾರು 5 ಎಕರೆ ಪ್ರದೇಶದಲ್ಲಿ ಫಸಲಿಗೆ ಬಂದು ನಿಂತಿದ್ದ ಬಾಳೆ ಸಂಪೂರ್ಣವಾಗಿ ಭಸ್ಮವಾಗಿದೆ. ಕಳೆದ ರಾತ್ರಿ ಯಾರೋ ಕಿಡಿಗೇಡಿಗಳು ಪಕ್ಕದ ಜಮೀನಿನಲ್ಲಿ ಬೆಳೆದು ನಿಂತಿದ್ದ ಒಣ ಹುಲ್ಲಿಗೆ ಬೆಂಕಿ ಹೊತ್ತಿಸಿರುವ ಅನುಮಾನವಿದ್ದು, ಈ ಬೆಂಕಿ ಬಾಳೆ ತೋಟಕ್ಕೂ ಹಬ್ಬಿದೆ.
ಬಾಳೆ ಬೆಳೆಯುವ ರೈತರಿಗೆ ತೋಟಗಾರಿಕಾ ಇಲಾಖೆ ಸಲಹೆಗಳು
ಸಾಲ ಸೋಲ ಮಾಡಿ ಬೆಳೆದಿದ್ದ ಬಾಳೆ ಬೆಳೆ ಇನ್ನೇನು ಮಾರಾಟ ಮಾಡಬೇಕಿತ್ತು. ಫಸಲು ಕೈಗೆ ಬಂದು ತಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗುತ್ತೆ ಎಂದುಕೊಂಡಿದ್ದ ರೈತನ ಬಾಳೆ ತೋಟ ಬೆಂಕಿಗಾಹುತಿಯಾಗಿದೆ. ಇದು ರೈತನನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಬಾಳೆ ಬೆಳೆದು ಬಂಪರ್ ಲಾಭ ಪಡೆದ ಕೊಪ್ಪಳದ ರೈತ
ಜಿಲ್ಲೆಯಲ್ಲಿ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಈ ಮಧ್ಯೆ ಸಾಲ ಸೋಲ ಮಾಡಿ ನೀರಿಲ್ಲದ ಸಮಯದಲ್ಲೂ ಸಿಕ್ಕ ಅಲ್ಪಸ್ವಲ್ಪ ಪ್ರಮಾಣದ ನೀರಿನಲ್ಲಿ ಬೆಳೆ ಬೆಳೆದಿದ್ದರು. ಇಷ್ಟೆಲ್ಲಾ ಸಂಕಷ್ಟದ ಮಧ್ಯೆ ಬೆಳೆ ಬೆಳೆದ ಲಾಭದ ನಿರೀಕ್ಷೆಯಲ್ಲಿದ್ದ ರೈತನ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಬಾಳೆ ತೋಟ ಮಾತ್ರವಲ್ಲದೆ ತೋಟದಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಿಪ್ ಹಾಗೂ ಸ್ಪಿಂಕ್ಲರ್ ಸಹ ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದ ಸ್ಥಳೀಯರು ಕೃಷ್ಣಪ್ಪ ಜೊತೆಗೆ ಬೆಂಕಿ ನಂದಿಸುವ ಕಾರ್ಯ ಮಾಡಿದರೂ ಸುಮಾರು 90 ಟನ್ನಷ್ಟು ಇಳುವರಿ ನಷ್ಟವಾಗಿದೆ.
Recommended Video
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬೆಳೆ ನಷ್ಟ ಕುರಿತು ಪ್ರಕರಣ ದಾಖಲಾಗಿದೆ. ವಿಷಯ ತಿಳಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಬಾಳೆ ತೋಟಕ್ಕೆ ಭೇಟಿ ನೀಡಿದೆ. ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.