ಮಾಲೂರಿನಲ್ಲಿ ಮಗನ ತಿಥಿ ಊಟ ತಿಂದು ಸಾವನ್ನಪ್ಪಿದ ತಂದೆ
ಕೋಲಾರ, ಮಾರ್ಚ್ 17: ಮಗನ ತಿಥಿ ಊಟ ತಿಂದು ತಂದೆ ಸಾವನ್ನಪ್ಪಿ, ತಾಯಿ ಹಾಗೂ ಮಗಳು ಆಸ್ಪತ್ರೆ ಸೇರಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಿಥಿ ಊಟ ತಿಂದು ಮೃತಪಟ್ಟಿರುವ ವ್ಯಕ್ತಿಯನ್ನು ಕೊಂಡನಹಳ್ಳಿ ಗ್ರಾಮದ ಮುನಿಯಪ್ಪ (48) ಎನ್ನಲಾಗಿದೆ. ಮುನಿಯಪ್ಪ ಪತ್ನಿ ನಾರಾಯಣಮ್ಮ (40) ಹಾಗೂ ಮಗಳು ಶೈಲಜಾ (20) ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಭಾನುವಾರ, ಮಾರ್ಚ್ 15ರಂದು ತಮ್ಮ ಮನೆ ಮಗನ ತಿಥಿ ಕಾರ್ಯ ನೆರವೇರಿಸಿ ಈ ಮನೆಯ ಮೂವರು ತಿಥಿ ಊಟ ಮಾಡಿದ್ದಾರೆ. ಆದರೆ ಊಟ ಮಾಡಿದ ಕೆಲವೇ ಕ್ಷಣಗಳಲ್ಲಿ ಮುನಿಯಪ್ಪ ಸಾವನ್ನಪ್ಪಿದ್ದಾರೆ.
ಅನಾರೋಗ್ಯದಿಂದ ಮೃತಪಟ್ಟಿದ್ದ ಮಗ
ಮಾಲೂರು ತಾಲೂಕಿನ ಕೊಂಡನಹಳ್ಳಿ ಗ್ರಾಮದ ಮುನಿಯಪ್ಪ ಎಂಬುವರ ಮಗನಾದ ಮುನಿಕೃಷ್ಣ (18)ಗೆ ಅನಾರೋಗ್ಯ ಕಾಡುತ್ತಿತ್ತು. ಜೊತೆಗೆ ಆತ ಮಾನಸಿಕ ಅಸ್ವಸ್ಥನಾಗಿದ್ದ. ಅನಾರೋಗ್ಯದಿಂದಾಗಿ ಕಳೆದ ಮಂಗಳವಾರ ಮೃತಪಟ್ಟಿದ್ದ. ಗ್ರಾಮದ ಹೊರವಲಯದಲ್ಲಿ ಆತನ ಅಂತ್ಯಸಂಸ್ಕಾರ ಮಾಡಲಾಗಿತ್ತು. ಭಾನುವಾರ ಮುನಿಕೃಷ್ಣನ ತಿಥಿ ಕಾರ್ಯ ನಡೆದಿತ್ತು.
ಕುಂದಾಪುರದ ಬಸ್ಸಲ್ಲಿ ಹೃದಯಾಘಾತ ಪ್ರಕರಣ: ಡಿಸಿಗೆ ತಾಯಿ ಪತ್ರ
ಮಗನ ತಿಥಿ ದಿನವೇ ಸತ್ತ ತಂದೆ
ಭಾನುವಾರ ಮಗನ ತಿಥಿ ಕಾರ್ಯದಲ್ಲಿ ಬೆಳಿಗ್ಗೆ ತಿಥಿಯ ಊಟ ಮಾಡಿದ ಮುನಿಯಪ್ಪ ಒದ್ದಾಡಲು ಆರಂಭಿಸಿದ್ದಾರೆ. ತಿಥಿ ಊಟ ಮಾಡಿದ್ದ ಪತ್ನಿ ನಾರಾಯಣಮ್ಮ ಹಾಗೂ ಮಗಳೂ ಅಸ್ವಸ್ಥರಾಗಿದ್ದಾರೆ. ಕೂಡಲೇ ಈ ಮೂವರನ್ನೂ ಸ್ಥಳೀಐ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಆ ವೇಳೆಗಾಗಲೇ ಮುನಿಯಪ್ಪ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಮಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಂತ್ಯಸಂಸ್ಕಾರ ತಡೆದ ಪೊಲೀಸರು
ಸದ್ಯ ನಾರಾಯಣಮ್ಮ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ವಾಪಸ್ಸು ಮನೆಗೆ ಬಂದಿದ್ದಾರೆ. ಆದರೆ ಮಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾಳೆ. ಎಲ್ಲೆಡೆ ಕೊರೊನಾ ಭೀತಿ ಕಾಡುತ್ತಿರುವ ಹಿನ್ನೆಲೆ ಮೃತಪಟ್ಟ ಮುನಿಯಪನನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿ ಇನ್ನೇನು ಕಾರ್ಯ ಮುಗಿಸುವ ವೇಳೆಗೆ ಮಾಸ್ತಿ ಠಾಣೆಯ ಪೊಲೀಸರು ಸ್ಥಳಕ್ಕೆ ಹೋಗಿ ಕಾರ್ಯವನ್ನು ತಡೆದು ಸ್ಥಳದಲ್ಲಿದ್ದ ಸಂಬಂಧಿಕರ ಮನವೊಲಿಸಿ ಶವವನ್ನು ಕೋಲಾರದ ಜಿಲ್ಲಾಸ್ಪತ್ರೆಯ ಪೋಸ್ಟ್ ಮಾರ್ಟನ್ ಗೆ ಕಳುಹಿಸಿದ್ದಾರೆ.
ಹುಬ್ಬಳ್ಳಿಯ ಸ್ವಿಮ್ಮಿಂಗ್ ಪೂಲ್ ನಲ್ಲಿ ನೋಡನೋಡುತ್ತಲೇ ಸತ್ತ ಯುವಕ
ಆಹಾರದ ಸಮಸ್ಯೆಯಿಂದ ಸಾವು
ಫುಡ್ ಪಾಯ್ಸನ್, ವಿಷಾಹಾರ ಸೇವನೆಯಿಂದ ಮುನಿಯಪ್ಪ ಮೃತಪಟ್ಟಿರುವುದಾಗಿ ಪರೀಕ್ಷೆ ವೇಳೆ ದೃಢವಾಗಿದೆ. ಮಗಳಿಗೂ ಅಪಾಯ ಉಂಟಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾಸ್ತಿ ಠಾಣೆಯ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.