ಕೋಲಾರದಲ್ಲಿ ಜನರಿಗೆ ತರಕಾರಿ, ಹಣ್ಣು ಫ್ರೀ ಕೊಟ್ಟ ರೈತರು
ಕೋಲಾರ, ಮಾರ್ಚ್ 2: ಬೆಂಗಳೂರು ಸೇರಿದಂತೆ ವಿದೇಶಗಳಿಗೆ ಹೂವು, ಹಾಲು, ಹಣ್ಣು-ತರಕಾರಿಗಳನ್ನು ನೀಡುವ ಚಿನ್ನದ ನಾಡಿನ ರೈತರಿಗೆ ರಾಜ್ಯ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಕೋಲಾರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿಂದು ವಿನೂತನ ಪ್ರತಿಭಟನೆ ನಡೆಯಿತು.
ರಾಜ್ಯ ಬಜೆಟ್ ನಲ್ಲಿ ಕೋಲಾರದಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ವಿದರ್ಭ ಮಾದರಿಯ ವಿಶೇಷ ಪ್ಯಾಕೇಜ್ ಅನ್ನು ಜಿಲ್ಲೆಗೆ ಘೋಷಣೆ ಮಾಡುವಂತೆ ಒತ್ತಾಯಿಸಿ ಕೋಲಾರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮಾಡಲಾಯಿತು.
ಭೂ ಒತ್ತುವರಿ ಖಂಡಿಸಿ 21 ರೈತರಿಂದ 'ಜಮೀನು ಸಮಾಧಿ ಸತ್ಯಾಗ್ರಹ'
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನೂರಾರು ಕೆ.ಜಿ. ತರಕಾರಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ಅಲ್ಲದೆ ಹಣ್ಣು-ತರಕಾರಿಗಳನ್ನು ಉಚಿತವಾಗಿ ಜನರಿಗೆ ಹಂಚುವ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆಯನ್ನು ಮಾಡಿ, ಮುಂದಿನ ಬಜೆಟ್ ನಲ್ಲಿ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದರು.
ಯಾವುದೇ ನದಿ ನಾಲೆಗಳಿಲ್ಲದ ಹಿನ್ನೆಲೆಯಲ್ಲಿ ಮುಂದಿನ ರಾಜ್ಯ ಬಜೆಟ್ ನಲ್ಲಿ ಕೋಲಾರ ಜಿಲ್ಲೆಗೆ ಹೆಚ್ಚಿನ ನೀರಾವರಿ ಯೋಜನೆಗಳನ್ನು, ಅದರಲ್ಲೂ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿ ಮಾಡುವುದು ಪ್ರಮುಖ ಒತ್ತಾಯವಾಗಿತ್ತು. ಜಿಲ್ಲೆಯ ಜೀವನಾಡಿಯಾಗಿರುವ ಹೈನೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಲಿನ ಪ್ರೋತ್ಸಾಹ ಧನವನ್ನು ಹೆಚ್ಚಿಸಿ ಉತ್ಪಾದನೆಗೆ ಹೆಚ್ಚು ಒತ್ತು ನೀಡುವುದು, ರೇಷ್ಮೆ ಆಮದು ಶುಲ್ಕ ಹೆಚ್ಚಿಸುವಂತೆ ಮನವಿ ಮಾಡಿದರು. ವಿಶ್ವ ಪ್ರಸಿದ್ಧಿಯಾಗಿರುವ ಇಲ್ಲಿನ ಮಾವು ಹಾಗೂ ಟೊಮೆಟೊ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಹೆಚ್ಚು ಒತ್ತು ನೀಡಿವಂತೆ ಒತ್ತಾಯ ಮಾಡಿದರು.