ನಕಲಿ ಜಾತಿ ಪ್ರಮಾಣಪತ್ರ: ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಅಸಿಂಧು
ಬೆಂಗಳೂರು, ಏಪ್ರಿಲ್ 25: ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಕೋಲಾರ ಜಿಲ್ಲೆ, ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ಜಾತಿ ಪ್ರಮಾಣ ಪತ್ರ ನಕಲಿ ಎಂದಿರುವ ನ್ಯಾಯಾಲಯ ಅವರ ಪ್ರಮಾಣಪತ್ರವನ್ನು ರದ್ದುಗೊಳಿಸಿದೆ. ಜೊತೆಗೆ ಶಾಸಕತ್ವವನ್ನೂ ಅಸಿಂಧುಗೊಳಿಸಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ತಾವು ಬುಡಗ ಜಂಗಮ (ಎಸ್ಸಿ) ಜಾತಿಗೆ ಸೇರಿದವರು ಎಂದು ಹೇಳಿ ಅವರು ಜಾತಿ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು. ಪಕ್ಷೇತರರಾಗಿ 2013ರಲ್ಲಿ ಸ್ಪರ್ಧಿಸಿದ್ದ ಅವರು 73,146 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ಅಭ್ಯರ್ಥಿ ಎನ್. ಮುನಿಅಂಜಪ್ಪರನ್ನು ಸುಮಾರು 34 ಸಾವಿರ ಮತಗಳಿಂದ ಭರ್ಜರಿಯಾಗಿ ಸೋಲಿಸಿ ಶಾಸಕರಾಗಿದ್ದರು.
ಮುಳಬಾಗಲು ಕ್ಷೇತ್ರ ಉದ್ಧಾರ ಮಾಡುವುದಕ್ಕೆ ಇನ್ಯಾರು ಎದ್ದುಬರಬೇಕೋ
ಆದರೆ ಚುನಾವಣೆಯಲ್ಲಿ ಸೋತ ಎಂ. ಮುನಿಅಂಜಪ್ಪ ಕೋರ್ಟ್ ಮೆಟ್ಟಿಲೇರಿದರು. ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಮೀಸಲು ಕ್ಷೇತ್ರದಿಂದ ಮಂಜುನಾಥ್ ಸ್ಪರ್ಧಿಸಿದ್ದಾರೆ ಎಂದು ತಕರಾರು ತೆಗೆದಿದ್ದರು. ಮತ್ತು ಇದಕ್ಕೆ ಬೇಕಾದ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.
ಬರೋಬ್ಬರಿ ಐದು ವರ್ಗಳ ಕಾಲ ಈ ಪ್ರಕರಣದ ವಿಚಾರಣೆ ನಡೆದು ಇಂದು ನ್ಯಾಯಾಲಯ ತೀರ್ಪು ನೀಡಿದೆ.
ಅಭ್ಯರ್ಥಿ ಕಳೆದುಕೊಂಡ ಕಾಂಗ್ರೆಸ್
ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದ ಕೊತ್ತನೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿತ್ತು. ಕಳೆದ ಬಾರಿ 34 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರಿಂದ, ಜೊತೆಗೆ ಕಾಂಗ್ರೆಸ್ ಟಿಕೆಟ್ ನಿಂದ ಬೇರೆ ಸ್ಪರ್ಧಿಸಿದ್ದರಿಂದ ಈ ಬಾರಿ ಅವರ ಗೆಲುವು ಸುಲಭ ಎಂದುಕೊಳ್ಳಲಾಗಿತ್ತು. ಆದರೆ ಜಾತಿ ಪ್ರಮಾಣಪತ್ರ ರದ್ದಾಗಿ ಅವರೀಗ ಚುನಾವಣೆಗೇ ಸ್ಪರ್ಧಿಸುವಂತಿಲ್ಲ.
ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಯನ್ನು ಕಳೆದುಕೊಂಡಿದೆ. ಹೊಸ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲುಸುವಂತೆಯೂ ಇಲ್ಲ. ಹೀಗೆ ಗೆಲ್ಲುವ ಕ್ಷೇತ್ರವೊಂದನ್ನು 'ಕೈ'ಚೆಲ್ಲಿದಂತಾಗಿದೆ.