ಮೇ.15ರವರೆಗೂ ಮದ್ಯ ಡೌಟ್? ಅಬಕಾರಿ ಸಚಿವರು ಏನಂತಾರೆ...
ಕೋಲಾರ, ಏಪ್ರಿಲ್ 27: "ಪ್ರಧಾನ ಮಂತ್ರಿ ಮೋದಿ ಅವರ ಜೊತೆ ನಡೆದ ಸಭೆಯಲ್ಲಿ ಏನು ತೀರ್ಮಾನ ಆಗಿದೆ ಎಂಬುದು ತಿಳಿದಿಲ್ಲ. ಮೇ 3ನೇ ತಾರೀಖು ಸ್ಪಷ್ಟವಾಗಿ ತಿಳಿಯಲಿದೆ" ಎಂದು ಮದ್ಯದಂಗಡಿ ತೆರೆಯುವ ಕುರಿತು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಪ್ರಧಾನಿ ಮೋದಿ ಅವರು ಭಾರತ ಲಾಕ್ ಡೌನ್ ಮುಂದುವರಿಸಬೇಕೇ ಬೇಡವೇ ಎಂಬುದರ ಬಗ್ಗೆ ದೇಶದ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ್ದು, ಕರ್ನಾಟಕದಲ್ಲಿ ಮೇ.15ರವರೆಗೂ ಲಾಕ್ ಡೌನ್ ಮುಂದುವರಿಸಲು ಬಿಎಸ್ ವೈ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಮೇ.15ರವರೆಗೂ ಮದ್ಯಪಾನ ನಿಷೇಧ ಮುಂದುವರಿಕೆ ಸಾಧ್ಯತೆ ಇದೆ ಎನ್ನಲಾಗಿದೆ.
ಮದ್ಯ ಬಿಟ್ಟು ಕೌನ್ಸಿಲಿಂಗ್ ತೆಗೆದುಕೊಳ್ಳಿ ಎಂದ ಅಬಕಾರಿ ಸಚಿವರು
ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಸಚಿವರು, ''ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಗ್ರೀನ್ ಜೋನ್ ನಲ್ಲಿ ರಿಲ್ಯಾಕ್ಸ್ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲಾಗಿತ್ತು. ಮೇ 3 ನೇ ತಾರೀಖಿನ ಬಳಿಕ ರಿಲ್ಯಾಕ್ಸ್ ಮಾಡುವಂತೆ ಮನವಿ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ. "ಖಜಾನೆ ಸಹ ಖಾಲಿಯಾಗಿದೆ. ಸಂಬಳ ಕೊಡೋದಕ್ಕೂ ಹಣ ಬೇಕಾಗಿದೆ. ಆದರೆ ಪಂಜಾಬ್ ರಾಜ್ಯದ ಬೇಡಿಕೆಯನ್ನು ಪ್ರಧಾನಿ ನಿರಾಕರಿಸಿದ್ದಾರೆ. ಇದು ಕರ್ನಾಟಕ ರಾಜ್ಯಕ್ಕೂ ಅನ್ವಯ ಆಗಬಹುದು" ಎಂದಿದ್ದಾರೆ.
ರಾಜ್ಯದಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟದ ಬಗ್ಗೆ ಪ್ರತಿಕ್ರಿಯಿಸಿ, "ದುಬಾರಿ ಬೆಲೆಗೆ ಮಾರುತ್ತಿದ್ದ ಕೆಲವರ ಬಾರ್ ಲೈಸನ್ಸ್ ರದ್ದು ಮಾಡಿದ್ದೇವೆ. ಅಂಥವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ" ಎಂದು ಎಚ್ಚರಿಸಿದರು.