ಮದ್ಯ ಬಿಟ್ಟು ಕೌನ್ಸಿಲಿಂಗ್ ತೆಗೆದುಕೊಳ್ಳಿ ಎಂದ ಅಬಕಾರಿ ಸಚಿವರು
ಕೋಲಾರ, ಏಪ್ರಿಲ್ 25: ಲಾಕ್ ಡೌನ್ ಆದಾಗಿನಿಂದ ಮದ್ಯದಂಗಡಿಗಳಿಗೆ ನಿಷೇಧ ಹೇರಲಾಗಿದೆ. ಏಪ್ರಿಲ್ 14ರ ನಂತರ ಮದ್ಯದ ಮಳಿಗೆಗಳು ತೆರೆಯಬಹುದೆಂಬ ನಿರೀಕ್ಷೆ ಮದ್ಯಪ್ರಿಯರಲ್ಲಿತ್ತು. ಆದರೆ ಮೇ 3ರವರೆಗೂ ಮತ್ತೆ ಲಾಕ್ ಡೌನ್ ವಿಸ್ತರಣೆಯಾದ್ದರಿಂದ ಆ ನಿರೀಕ್ಷೆಯೂ ಸುಳ್ಳಾಯಿತು.
ಮೇ 3ರವರೆಗೂ ಮದ್ಯದಂಗಡಿಗಳನ್ನು ತೆರೆಯಲು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಎಚ್.ನಾಗೇಶ ಅವರು ಹೇಳಿದ್ದರು. ಇದೀಗ ಅವರು ಮತ್ತೊಂದು ಸಲಹೆಯನ್ನು ನೀಡಿದ್ದಾರೆ. ವೈದ್ಯರಿಂದ ಸಲಹೆ ಪಡೆದುಕೊಂಡು ಈ ಚಟವನ್ನು ಬಿಟ್ಟುಬಿಡಿ ಎಂದು ಮದ್ಯವ್ಯಸನಿಗಳಿಗೆ ಸಚಿವರು ಕಿವಿ ಮಾತು ಹೇಳಿದ್ದಾರೆ.
ಬಾರ್ ಬಾಗಿಲು ಸೀಲ್; ಕೋಲಾರದಲ್ಲಿ ಹಿಂಬಾಗಿಲಿನಿಂದ ಮದ್ಯ ವ್ಯವಹಾರ
"ವೈದ್ಯರಿಂದ ಸಲಹೆ ಪಡೆದುಕೊಂಡು ಚಟವನ್ನು ಬಿಟ್ಟು ಬಿಡಿ. ಮದ್ಯವ್ಯಸನಿಗಳೇ ಬೇರೆ ಮದ್ಯಪ್ರಿಯರೇ ಬೇರೆ" ಎಂದು ವಿಶ್ಲೇಷಣೆ ನೀಡಿದ್ದಾರೆ. ಇದೇ ಸಮಯದಲ್ಲಿ ತಾಳ್ಮೆಯಿಂದ ಇದ್ದು, ಚಟ ತ್ಯಜಿಸಿ ವೈದ್ಯರ ಜೊತೆ ಕೌನ್ಸಿಲಿಂಗ್ ಮಾಡಿಸಿಕೊಳ್ಳಿ" ಎಂದು ಹೇಳಿದ್ದಾರೆ.
"ಮೇ 3 ವರೆಗೂ ಪ್ರಧಾನಿಗಳ ಮಾತಿಗೆ ಗೌರವಿಸಿ ಸಹಕರಿಸಿ. ಜನರ ಸುರಕ್ಷತೆಗಾಗಿಯೇ ಮದ್ಯ ಬಂದ್ ತೀರ್ಮಾನ ಮಾಡಲಾಗಿದೆ. ಮದ್ಯ ಬಿಟ್ಟು ಕುಟುಂಬದ ಜೊತೆ ಚೆನ್ನಾಗಿ ಆರೋಗ್ಯವಾಗಿರಿ" ಎಂದು ಬುದ್ಧಿಮಾತು ಹೇಳಿದ್ದಾರೆ. ಇನ್ನು ಈ ಸಮಯದಲ್ಲಿ ಹೆಚ್ಚಿರುವ ಕಳ್ಳಭಟ್ಟಿ ದಂಧೆಯನ್ನೂ ಹತೋಟಿಗೆ ತರಲು ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.