ಕೋಲಾರದ ಪ್ರಸಿದ್ಧ ಚಿಕ್ಕತಿರುಪತಿ ದೇಗುಲದಲ್ಲಿ ಎರಡು ದಿನ ಪ್ರವೇಶ ನಿರ್ಬಂಧ
ಕೋಲಾರ, ಜುಲೈ 2: ಕೊರೊನಾ ಸೋಂಕಿತ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣ, ಮಾಲೂರು ತಾಲೂಕಿನ ಪ್ರಸಿದ್ಧ ಚಿಕ್ಕತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇನ್ನು ಮುಂದೆ ಶನಿವಾರ, ಭಾನುವಾರ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
Recommended Video
ರಾಜ್ಯಾದ್ಯಂತ ಇಂದಿನಿಂದ ಭಕ್ತರಿಗೆ ತೆರೆದುಕೊಂಡ ದೇಗುಲಗಳು...
ದೇಗುಲವನ್ನು ಈ ಎರಡೂ ದಿನ ಮುಚ್ಚುವಂತೆ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ದೇವಸ್ಥಾನದ ಅರ್ಚಕರು ಹಾಗೂ ಗ್ರಾಮಸ್ಥರು ಶನಿವಾರ ಹಾಗೂ ಭಾನುವಾರ ದೇವಾಲಯ ಪ್ರವೇಶ ನಿರ್ಬಂಧಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆಷಾಢದಲ್ಲಿ ಶನಿವಾರ, ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಿಕ್ಕತಿರುಪತಿ ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನದಿಂದ 2 ಕಿ.ಮೀ ದೂರದಲ್ಲೇ ನಾಲ್ಕು ಪಾಸಿಟಿವ್ ಪ್ರಕರಣಗಳು ಬಂದಿವೆ. ಜೊತೆಗೆ ಆಂಧ್ರ ಹಾಗೂ ತಮಿಳುನಾಡು ಭಾಗದಿಂದಲೂ ಹೆಚ್ಚಿನ ಭಕ್ತರು ಇಲ್ಲಿಗೆ ಬರುತ್ತಾರೆ. ಹಾಗೆಯೇ ಸಾಮಾಜಿಕ ಅಂತರ ಪಾಲನೆಯೂ ಆಗುತ್ತಿಲ್ಲ. ಕೆಲವರು ಮಾಸ್ಕ್ ಧರಿಸುತ್ತಿಲ್ಲ. ಈ ಕಾರಣಗಳಿಂದ ಮನವಿ ಸಲ್ಲಿಸಲಾಗಿತ್ತು.