ಐಫೋನ್ ಕಾರ್ಖಾನೆಯಲ್ಲಿ 21 ಸಾವಿರ ಐಫೋನ್ ಧ್ವಂಸ
ಕೋಲಾರ, ಡಿಸೆಂಬರ್ 12: ಕೋಲಾರ ಜಿಲ್ಲೆ ನರಸಾಪುರದ ಸಮೀಪದ ಐಫೋನ್ಕಾರ್ಖಾನೆ, ವಿಸ್ಟ್ರಾನ್ ಕಂಪನಿ ವಿರುದ್ಧ ತಿರುಗಿಬಿದ್ದಿರುವ ಕಾರ್ಮಿಕರು 21 ಸಾವಿರ ಐಪೋನ್ ಹಾಗೂ ಕೋಟ್ಯಂತರ ಮೌಲ್ಯದ ಉಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಸಾವಿರಾರು ನೌಕರರು ಕಂಪನಿ ವಾಹನ ಮತ್ತು ಕಟ್ಟಡಗಳಿಗೂ ಕಲ್ಲು ಬೀಸಿ ಛಿದ್ರ ಮಾಡಿದ್ದಾರೆ. ಸಿಕ್ಕ ವಸ್ತುಗಳಿಗೆ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆಗಮಿಸುತ್ತಿದ್ದಂತೆ ಎಲ್ಲಾ ಕಾರ್ಮಿಕರು ಪರಾರಿಯಾಗಿದ್ದಾರೆ.
Recommended Video
ಬೆಳಗ್ಗೆ ಐದು ಗಂಟೆಗೆ ರಾತ್ರಿ ಪಾಳಿಯಲ್ಲಿದ್ದ ಐದು ಸಾವಿರ ಕಾರ್ಮಿಕರು ಹಾಗೂ ಬೆಳಗ್ಗೆ ಪಾಳಿಗೆ ಬಂದಿದ್ದ ನಾಲ್ಕು ಸಾವಿರ ನೌಕರರು ಸೇರಿ ಏಕಾಏಕಿ ಕಂಪನಿಗೆ ಕಲ್ಲು ಹೊಡೆದು ಜಖಂಗೊಳಿಸಿದ್ದಾರೆ. ಕಂಪನಿಯಲ್ಲಿದ್ದ ಸಾವಿರಾರು ಕೋಟಿ ಮೌಲ್ಯದ ಐಫೋನ್ ಗಳನ್ನು ಜಜ್ಜಿ ನಿರುಪಯುಕ್ತಗೊಳಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ನೌಕರರು ಪರಾರಿಯಾಗಿದ್ದಾರೆ. ರಸ್ತೆ ಬದಿ ಸಿಕ್ಕಿದ್ದ ಸುಮಾರು ನೂರು ಕಾರ್ಮಿಕರನ್ನು ಬಂಧಿಸಿದ್ದಾರೆ.
ಸರಿಯಾಗಿ ವೇತನ ನೀಡದ ಆರೋಪ: ಐಫೋನ್ ಉತ್ಪಾದನಾ ಘಟಕದಲ್ಲಿ ನೌಕರರ ದಾಂಧಲೆ
2018 ರಲ್ಲಿ ಕಂಪನಿ ಆರಂಭ:
ಕೋಲಾರ ನರಸಾಪುರದ ಸಮೀಪ 2018 ರಲ್ಲಿ ಐಫೋನ್ ತಯಾರಿಕಾ ಘಟಕ ಆರಂಭವಾಗಿತ್ತು. ವಿಸ್ಟ್ರಾನ್ ಕಂಪನಿ ಹೆಸರಿನ ಕಂಪನಿಯಲ್ಲಿ ಆರಂಭಿಕ ಐದು ಸಾವಿರ ಮಂದಿ ಕೆಲಸ ನಿರ್ವಹಿಸುತ್ತಿದ್ದರು. ಹೊರ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೀಡಲು ಕ್ರಿಯೇಟೀವ ಇಂಜಿನಿಯರ್ಸ್, ನೀಡ್ಸ್, ಐಕ್ಯ ಸೇರಿದಂತೆ ನಾಲ್ಕು ಕಂಪನಿಗಳಿಗೆ ಹೊರ ಗುತ್ತಿಗೆ ನೀಡಲಾಗಿತ್ತು. ಉತ್ಪಾದನಾ ಪ್ರಮಾಣ ಹೆಚ್ಚಿಸಿದ್ದ ಕಂಪನಿಯಲ್ಲಿ ಬರೋಬ್ಬರಿ ಹನ್ನೆರಡು ಸಾವಿರ ನೌಕರರು ಕೆಲಸ ನಿರ್ವಹಿಸುತ್ತಿದ್ದರು. ಕನಿಷ್ಠ 20 ರಿಂದ 30 ಸಾವಿರ ವರೆಗೂ ನೌಕರರಿಗೆ ವೇತನ ನೀಡುತ್ತಿದ್ದರು.
ನಾಲ್ಕು ತಿಂಗಳ ಹಿಂದೆ ಸಮಸ್ಯೆ:
ಕರೋನಾ ಬಳಿಕ ಕೆಲ ಕಾಲ ಸ್ಥಗಿತಗೊಳಿಸಿದ್ದ ಕಂಪನಿ ಮತ್ತೆ ಕಾರ್ಯ ಆರಂಭಿಸಿತ್ತು. ನಾಲ್ಕು ತಿಂಗಳ ಹಿಂದೆ ವೇತನದಲ್ಲಿ ಭಾರೀ ವ್ಯತ್ಯಯ ಆಗಿತ್ತು. ಶೇ. 50 ರಷ್ಟು ವೇತನ ಕಡಿತ ಮಾಡಿದ್ದರು. ಈ ಬಗ್ಗೆ ಕಂಪನಿ ಗಮನಕ್ಕೆ ತಂದಾಗ, ಹೊರ ಗುತ್ತಿಗೆ ಕಂಪನಿಗಳು ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಾಲ್ಕು ತಿಂಗಳಾದರೂ ಸಮಸ್ಯೆ ಇತ್ಯರ್ಥ ಮಾಡಿರಲಿಲ್ಲ.
ಕೆಲಸದ ಅವಧಿ ಹೆಚ್ಚಳ:
ಕರೋನಾ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಕೆಲಸದ ಅವಧಿಯನ್ನು ಎಂಟು ತಾಸು ಬದಲಿಗೆ ಹನ್ನೆರಡು ತಾಸು ಮಾಡಲಾಗಿತ್ತು. ಇಷ್ಟಾಗಿಯೂ ವೇತನ ಹೆಚ್ಚಿಸಿರಲಿಲ್ಲ. ಬದಲಿಗೆ ಎಂಟು ತಾಸಿಗೆ ಕೊಡುತ್ತಿದ್ದ ವೇತನದಲ್ಲೂ ಶೇ. ನಲವತ್ತು ರಷ್ಟು ವೇತನ ಕಡಿತ ಮಾಡಿದ್ದರು. ಹನ್ನೆರಡು ತಾಸು ಕೆಲಸ ಮಾಡಿಸಿಕೊಂಡು ಎಂಟು ತಾಸಿನ ಸಂಬಳ ಸರಿಯಾಗಿ ನೀಡುತ್ತಿರಲಿಲ್ಲ. ಕಾನೂನು ಪ್ರಕಾರ ಹೆಚ್ಚುವರಿ ಭತ್ಯೆ ನೀಡಬೇಕಿತ್ತು. ಹನ್ನೆರಡು ತಾಸು ಕೆಲಸದಿಂದ ಕಾರ್ಮಿಕರು ಬೇಸತ್ತಿದ್ದರು. ಅದಕ್ಕೆ ತಕ್ಕ ವೇತನ ಕೂಡ ನೀಡಿರಲಿಲ್ಲ. ಇದು ಕಾರ್ಮಿಕರಲ್ಲಿ ಭಾರೀ ಸಿಟ್ಟು ಹುಟ್ಟು ಹಾಕಿತ್ತು ಎಂದು ಹೆಸರು ಹೇಳಲು ಇಚ್ಚಿಸದ ನೌಕರ ಒನ್ ಇಂಡಿಯಾ ಕನ್ನಡಗೆ ತಿಳಿಸಿದ್ದಾರೆ.
ವೇತನದಲ್ಲಿ ಮೋಸ
:ಕಳೆದ ಮೂರು ನಾಲ್ಕು ತಿಂಗಳಿನಿಂದ ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿರಲಿಲ್ಲ. ಮೂರು ತಿಂಗಳಿನಿಂದ ಪ್ರತಿ ಕಾರ್ಮಿಕನ ವೇತನದಲ್ಲಿ ಭಾರೀ ಕಡಿಮೆ ಬೀಳುತ್ತಿತ್ತು. ನನಗೆ ಇಪ್ಪತ್ತು ಸಾವಿರ ವೇತನ ನೀಡಬೇಕಿತ್ತು. ಆದರೆ ಆರು ಸಾವಿರ ಕಡಿಮೆ ಹಾಕಿದ್ದಾರೆ. ಕೇಳಿದರೆ ಸರಿ ಪಡಿಸುವುದಾಗಿ ಹೇಳಿದ್ದರು. ಮೂರು ತಿಂಗಳಾದರೂ ಸಮಸ್ಯೆ ಇತ್ಯರ್ಥ ಮಾಡಿರಲಿಲ್ಲ. ಕಂಪನಿಯಲ್ಲಿ ಕೆಲಸ ಮಾಡುವ ಹನ್ನೆರಡು ಸಾವಿರ ಕಾರ್ಮಿಕರಿಗೂ ವೇತನದಲ್ಲಿ ಮೋಸ ಆಗಿತ್ತು. ಕೆಲವರಿಗೆ ವೇತನವೇ ಹಾಕಿಲ್ಲ. ಇನ್ನೂ ಕೆಲವರಿಗೆ ಮೂರು ಸಾವಿರ, ಐದು ಸಾವಿರ ವೇತನ ಹಾಕಿದ್ದಾರೆ. ಹನ್ನೆರಡು ತಾಸು ಕೆಲಸ ಮಾಡಿದವರಿಗೆ ಮೂರು ಸಾವಿರ ಸಂಬಳ ಕೊಟ್ಟರೆ ಹೇಗೆ ? ಇದರ ಬಗ್ಗೆ ಅನೇಕ ಸಲ ಆಡಳಿತ ಮಂಡಳಿ ಜತೆ ಮಾತುಕತೆ ಮಾಡಿದರೂ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ಎಲ್ಲರೂ ಸೇರಿ ಶಾಂತಿಯುತ ಹೋರಾಟ ನಡೆಸಲು ತೀರ್ಮಾನಿಸಿದ್ದರು. ಹೀಗೆ ಆಗುತ್ತೆ ಅಂತ ಯಾವ ನೌಕರನೂ ಭಾವಿಸಿರಲಿಲ್ಲ ಎಂದು ಬೆಳಗಿನ ಪಾಳಿಗೆ ಹೋಗಿದ್ದ ನೌಕರ ತಿಳಿಸಿದ್ದಾರೆ.
ಇಬ್ಬರಿಂದ ದಾಂಧಲೆ:
ವೇತನ ಕಡಿತ ಹಾಗೂ ಕೆಲಸದ ಅವಧಿ ಬಗ್ಗೆ ಕಾರ್ಮಿಕರಲ್ಲಿ ಅಸಮಾಧಾನ ಮೂಡಿತ್ತೇ ವಿನಃ ಧ್ವಂಸ ಮಾಡುವ ಬಗ್ಗೆ ಯಾರೂ ಮಾತನಾಡಿಕೊಂಡಿರಲಿಲ್ಲ. ರಾತ್ರಿ ಪಾಳಿ ಮುಗಿದು ಬೆಳಗ್ಗೆ 5.30 ಕ್ಕೆ ಬೆಳಗಿನ ಪಾಳಿ ಶೂರುವಾಗಬೇಕಿತ್ತು. ಕಡಿತಗೊಂಡ ವೇತನ ಪಾವತಿಸದ ಬಗ್ಗೆ ಕಾರ್ಮಿಕರು ಮಾತನಾಡುತ್ತಿದ್ದರು. ಅದರಲ್ಲಿ ಇಬ್ಬರು ಗಲಾಟೆಗೆ ಪ್ರಚೋದಿಸಿ ಕಂಪನಿ ಒಳಗಿನ ಕುರ್ಚಿ ಹಾಗೂ ಲ್ಯಾ ಪ್ ಟಾಪ್ ಒಡೆದು ಹಾಕಿದರು. ಇದರಿಂದ ಪ್ರೇರಣೆಗೊಂಡು ಸುಮಾರು ಎಂಟು ಸಾವಿರ ಕಾರ್ಮಿಕರು ದಾಂಧಲೆ ನಡೆಸಿದರು. ಯಾಕೆ ಹೀಗೆ ಮಾಡುತ್ತಿದ್ದೇವೆ ಎಂಬ ಅರಿವೂ ಇಲ್ಲದೇ ಸಿಕ್ಕ ಸಿಕ್ಕ ವಸ್ತುಗಳನ್ನು ಪುಡಿ ಮಾಡಿದರು. ಇದೇ ಸಮಯಕ್ಕೆ ಕಚೇರಿಗೂ ಕಲ್ಲು ತೂರಿ, ಸಿಕ್ಕ ಸಿಕ್ಕ ಕಡೆ ಬೆಂಕಿ ಹಚ್ಚಿದರು. ನೋಡ ನೋಡುತ್ತಿದ್ದಂತೆ ಕಂಪನಿ ಸಂಪೂರ್ಣ ಛಿದ್ರವಾಗಿದೆ ಎಂದು ಕೆಲಸಗಾರರು ಘಟನೆ ಬಗ್ಗೆ ವಿವರಿಸಿದ್ದಾರೆ.
ಪ್ರೊಡೆಕ್ಷನ್ ಲೈನ್ ದ್ವಂಸ:
ಕಂಪನಿಯ ಪ್ರೊಡೆಕ್ಷನ್ ಲೈನ್ ಪೂರ್ಣ ಧ್ವಂಸವಾಗಿದೆ. ಕಂಪನಿಯಲ್ಲಿದ್ದ ಇಪ್ಪತ್ತೊಂದು ಸಾವಿರ ಐಪೋನ್ ಕೆಲವನ್ನು ಧ್ವಂಸ ಮಾಡಿದ್ದಾರೆ. ಇನ್ನೂ ಕೆಲವನ್ನು ದೋಚಿಕೊಂಡು ಹೋಗಿದ್ದಾರೆ. ಹೊಸ ಲ್ಯಾಪ್ ಟಾಪ್ ಗಳನ್ನು ನುಜ್ಜು ಗುಜ್ಜು ಮಾಡಿದ್ದು, ಅವನ್ನೂ ಕೆಲವರು ಹೊತ್ತೊಯ್ದಿದ್ದಾರೆ. ಕಂಪನಿಯ ಕಾರುಗಳಿಗೆ, ಉಪಕರಣ ಯಾವುದನ್ನೂ ಬಿಟ್ಟಿಲ್ಲ. ಬಹುತೇಕ ಕಂಪನಿ ಪುನಃ ಕಾರ್ಯಾರಂಭ ಆಗದ ರೀತಿಯಲ್ಲಿ ಜಖಂಗೊಳಿಸಿದ್ದಾರೆ.