ಕುರುಡುಮಲೆ ಗಣಪನಿಗೆ ಹರಕೆ ತೀರಿಸಿದ ಸುರೇಶ್ ಕುಮಾರ್
ಕೋಲಾರ, ಆಗಸ್ಟ್ 11: ಕೊರೊನಾ ಸೋಂಕಿನ ಆತಂಕದ ಮಧ್ಯೆಯೂ, ಟೀಕೆ ಆಕ್ಷೇಪಣೆ ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆ, ಫಲಿತಾಂಶ ನಿರ್ವಿಘ್ನವಾಗಿ ನೆರವೇರಿದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ಗಣಪನ ದರ್ಶನ ಪಡೆದು ಸಚಿವ ಸುರೇಶ್ ಕುಮಾರ್ ಹರಿಕೆ ತೀರಿಸಿದ್ದಾರೆ.
Recommended Video
ಇದೀಗ ಮನಸ್ಸು ನಿರಾಳವಾಯಿತು, ಕುರುಡುಮಲೆ ವಿನಾಯಕನ ಮಂದಿರಕ್ಕೆ ಹೋಗಿ ಭಗವಂತನಿಗೆ ಶರಣಾದೆ ಅಂತ ಸುರೇಶ್ ಕುಮಾರ್ ಹೇಳಿಕೊಂಡಿದ್ದಾರೆ. ಕೊರೊನಾ ಸೋಂಕಿನ ಮಧ್ಯೆ ಹಟ ತೊಟ್ಟವರಂತೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಿಸಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ನಿನ್ನೆ ಫಲಿತಾಂಶವನ್ನೂ ಖುದ್ದು ಅವರೇ ಪ್ರಕಟಿಸಿ ಸಮಾಧಾನದ ನಿಟ್ಟುಸಿರುಬಿಟ್ಟರು. ಶಿಕ್ಷಣ ಸಚಿವರಾಗಿ ಸುರೇಶ್ ಕುಮಾರ್ ಪಟ್ಟ ಶ್ರಮಕ್ಕೆ ಎಲ್ಲೆಡೆಯಿಂದ ಇದೀಗ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.
SSLC ಜಿಲ್ಲಾವಾರು ಫಲಿತಾಂಶ: ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ
ಯಾವೊಬ್ಬ ವಿದ್ಯಾರ್ಥಿಯೂ ಆತಂಕ ಎದುರಿಸದೇ, ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಪ್ಪಾ ಎಂದು ಸಚಿವ ಸುರೇಶ್ ಕುಮಾರ್ ಅವರು ಈ ಮುನ್ನ ಕೋಲಾರದ ಮುಳಬಾಗಿಲಿನ ಕುರುಡುಮಲೆ ಗಣಪನಿಗೆ ಹರಿಕೆ ಹೊತ್ತಿದ್ದರು. ಹೀಗಾಗಿ ಎಲ್ಲವೂ ಸುಸೂತ್ರವಾಗಿ ನೆರವೇರಿದ್ದರಿಂದ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಿ, ಭುಜದ ಮೇಲಿನ ಭಾರ ಇಳಿದವರಂತೆ ಕೋಲಾರ ಜಿಲ್ಲೆಯ ಮುಳಬಾಗಿಲು ಕಡೆಗೆ ಬಂದಿದ್ದರು.
ಇಲ್ಲಿನ ಇತಿಹಾಸ ಪ್ರಸಿದ್ದ ಕುರುಡುಮಲೆ ಗಣೇಶ ದೇಗುಲಕ್ಕೆ ದಂಪತಿ ಸಮೇತ ಆಗಮಿಸಿ ಹರಿಕೆ ತೀರಿಸಿದರು. ಗಣಪನಿಗೆ ಪೋಷಕರು, ಶಿಕ್ಷಕರ ಪರ ಸಾಷ್ಟಾಂಗ ನಮಸ್ಕಾರ ಹಾಕಿದರು. ಬಹು ನಿರೀಕ್ಷಿತ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಯಿತು. ನನ್ನ ಮನಸ್ಸು ನಿರಾಳವಾಯಿತು. ಕುರುಡುಮಲೆ ವಿನಾಯಕ ಮಂದಿರಕ್ಕೆ ಬಂದು ಭಗವಂತನಿಗೆ ಶರಣಾದೆ ಎಂದರು ಸುರೇಶ್ ಕುಮಾರ್.