1ರಿಂದ 5ನೇ ತರಗತಿ ಪ್ರಾರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?
ಕೋಲಾರ, ಮಾರ್ಚ್ 12: ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5ನೇ ತರಗತಿಗಳ ಪ್ರಾರಂಭಕ್ಕೆ ಒತ್ತಡವಿದೆ, ಆದರೆ ರಾಜ್ಯದಲ್ಲಿ ಮತ್ತೆ ಕೋವಿಡ್ ಪರಿಸ್ಥಿತಿ ಬದಲಾವಣೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
Recommended Video
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ""10 ದಿನಗಳ ಹಿಂದೆ ದೈನಂದಿನ ಕೊರೊನಾ ಸೋಂಕಿನ ಸಂಖ್ಯೆ 350ಕ್ಕೆ ಇಳಿದಿತ್ತು, ಆದರೆ ಈಗ 700ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ಸಲಹೆ ಮೇರೆಗೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ'' ಎಂದು ಹೇಳಿದರು.
ಶಾಲೆ ಆರಂಭ: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸುರೇಶ್ ಕುಮಾರ್ ಎಚ್ಚರಿಕೆ!
""ಖಾಸಗಿ ಶಾಲೆಯಲ್ಲಿ ಈಗಾಗಲೇ ತರಗತಿ ಆರಂಭಿಸಿರುವ ಮಾಹಿತಿ ಬಂದಿದೆ. ಮಕ್ಕಳ ಯೋಗಕ್ಷೇಮಕ್ಕಾಗಿ ಸರ್ಕಾರ ಶೈಕ್ಷಣಿಕ ವರ್ಷ ಆರಂಭಿಸಿಲ್ಲ. ಇದನ್ನು ಎಲ್ಲರೂ ಪಾಲಿಸಿ, ಗೌರವಿಸಬೇಕು'' ಎಂದು ಮನವಿ ಮಾಡಿದರು.
1 ರಿಂದ 5ನೇ ತರಗತಿ ಆರಂಭಿಸಿರುವ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮವಹಿಸುತ್ತೇವೆ. ಈ ಕುರಿತು ಉಚ್ಛ ನ್ಯಾಯಾಲಯದಲ್ಲಿ ಚಾಲೆಂಜ್ ಮಾಡಿದ್ದಾರೆ. ಹೈಕೋರ್ಟ್ ನಲ್ಲಿ ಮಾ.24ರಂದು ವಿಚಾರಣೆ ಇದೆ ಎಂದರು.
ಕೋವಿಡ್ ಕಾರಣದಿಂದ ಶಿಕ್ಷಣ ಇಲಾಖೆಗೆ ಅನುದಾನ ಕಡಿಮೆ ಆಗಿದೆ. ಮಧ್ಯಾಹ್ನದ ಬಿಸಿ ಊಟ ಪ್ರಾರಂಭಕ್ಕೆ ಪತ್ರ ಬರೆದಿದ್ದೇನೆ, ಕೇಂದ್ರದಿಂದ ಹಸಿರು ನಿಶಾನೆ ಬಂದಿಲ್ಲ. ಇಂದು ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆತಂಕ ಎದುರಾಗಿದೆ. ಪುನಃ ಲಾಕ್ ಡೌನ್ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಕೊರೊನಾ ವಿಚಾರದಲ್ಲಿ ನಮ್ಮ ರಾಜ್ಯದ ನಿರ್ವಹಣೆ ತುಂಬಾ ಅಚ್ಚುಕಟ್ಟಾಗಿದೆ. ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದ ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಕ್ರಮವಹಿಸಿದ್ದೇವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಕೋಲಾರದ ಮಾಲೂರಿನಲ್ಲಿ ತಿಳಿಸಿದರು.