ಕೋಲಾರ: ಪಕ್ಷೇತರರಾಗಿ ಡಿಕೆ ರವಿ ತಾಯಿ ಸ್ಪರ್ಧೆ ಖಚಿತ
ಕೋಲಾರ, ಡಿಸೆಂಬರ್ 28: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವಿಗೆ ನ್ಯಾಯ ಸಿಗಬೇಕಿದೆ. ಇದಕ್ಕಾಗಿ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ಎಂದು ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಗುರುವಾರದಂದು ಘೋಷಿಸಿದ್ದಾರೆ.
ಯಾವ ಪಕ್ಷದ ಬೆಂಬಲ ಕೋರುತ್ತಾರೆ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಪಕ್ಷೇತರರಾಗಿ ವಿಧಾನಸಭೆ ಚುನಾವಣೆ 2018ರಲ್ಲಿ ಸ್ಪರ್ಧಿಸಲಿದ್ದಾರೆ.
ಕುತಂತ್ರದಿಂದ ನನ್ನ ಮಗನನ್ನು ಕೊಂದಿದ್ದಾರೆ: ಡಿಕೆ ರವಿ ತಾಯಿ ಗೌರಮ್ಮ
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಗೌರಮ್ಮ, 'ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕಿದೆ, ಅವನು ಮಾಡಿದ ಒಳ್ಳೆ ಕಾರ್ಯವನ್ನು ಮುಂದುವರೆಸಲು ಅವಕಾಶ ಕೊಡಿ ಎಂದು ಜನರನ್ನು ಕೇಳಿಕೊಳ್ಳುತ್ತೇನೆ' ಎಂದಿದ್ದಾರೆ
"ನನ್ನ ಮಗನ ಸಾವು ಸಂಭವಿಸಿದ್ದು ಆತ್ಮಹತ್ಯೆಯಿಂದ ಅಲ್ಲ. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂಥವನೇ ಅಲ್ಲ. ನನ್ನ ಮಗ ಕೊಲೆಯಾಗಿದ್ದಾನೆ. ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ' ಎಂದು ಗೌರಮ್ಮ ಮತ್ತೊಮ್ಮೆ ನೋವು ತೋಡಿಕೊಂಡರು.
ರವಿ ಕೇಸ್: ಸಾವಿನಿಂದ ಸಿಬಿಐ ತನಿಖೆ ತನಕ ಟೈಮ್ ಲೈನ್
ರವಿ ಅವರ ಸಾವಿನ ಕುರಿತಾಗಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಕೋಲಾರದಲ್ಲಿ ಡಿ.ಕೆ. ರವಿ ಕೆಲಸ ಮಾಡಿದ್ದು, ಜನಾನುರಾಗಿಯಾಗಿದ್ದರು.ಕೋಲಾರದಿಂದ ಗೌರಮ್ಮ ಅವರು ಸ್ಪರ್ಧಿಸಿ, ನ್ಯಾಯಕ್ಕಾಗಿ ಹೋರಾಟ ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯ.
ಕೋಲಾರ ಡಿಸಿ ಆಗಿದ್ದೇ ಜೀವಕ್ಕೆ ಮುಳುವಾಯಿತೆ?
ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಆಗಲಿ ಯಾವ ಪಕ್ಷಗಳಿಂದ ಡಿಕೆ ರವಿ ಪ್ರಕರಣದಲ್ಲಿ ನ್ಯಾಯ ಸಿಗಲಿಲ್ಲ. ಹೀಗಾಗಿ, ಜನರ ಬೆಂಬಲವನ್ನು ನೇರವಾಗಿ ಪಡೆದು ಕಣಕ್ಕಿಳಿಯಲು ಗೌರಮ್ಮ ಅವರು ನಿರ್ಧರಿಸಿದ್ದಾರೆ ಎಂದು ಲಕ್ಷ್ಮಣ್ ಅವರು ಹೇಳಿದ್ದಾರೆ.
ಕಮರ್ಷಿಯಲ್ ಟ್ಯಾಕ್ಸ್ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರ ಶವ ಮಾರ್ಚ್ 16, 2015ರಂದು ಬೆಂಗಳೂರಿನ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಸಿಬಿಐ ತನಿಖೆ ಕೈಗೊಂಡರೂ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ.