ಕೋಲಾರ ಟಿಕೆಟ್: ಸ್ವಪಕ್ಷೀಯರಿಂದಲೇ ಕೆ ಎಚ್ ಮುನಿಯಪ್ಪಗೆ ಎದುರಾದ ಕಂಟಕ
Recommended Video
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಚೌಕಾಸಿ ನಡೆಯುತ್ತಿದ್ದ ಸಂದರ್ಭದಲ್ಲಿ ಜೆಡಿಎಸ್ ಹನ್ನೆರಡು ಸೀಟು ಡಿಮಾಂಡ್ ಮಾಡುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಅದರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರವೂ ಸೇರಿತ್ತು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಹಾಲೀ ಕಾಂಗ್ರೆಸ್ ಸಂಸದರಿರುವ ಕ್ಷೇತ್ರವಿದು, ಜೊತೆಗೆ ಹಾಲೀ ಇಬ್ಬರೂ ಸಂಸದರು (ವೀರಪ್ಪ ಮೊಯ್ಲಿ ಮತ್ತು ಕೆ ಎಚ್ ಮುನಿಯಪ್ಪ) ಕಾಂಗ್ರೆಸ್ ಹೈಕಮಾಂಡ್ ನಿಷ್ಠರು ಕೂಡಾ..
ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?
ಜೆಡಿಎಸ್, ಕೋಲಾರ ಕ್ಷೇತ್ರಕ್ಕೆ ಪ್ರಯತ್ನಿಸುತ್ತಿದೆ ಎನ್ನುವುದನ್ನು ಅರಿತ ಕೆ ಎಚ್ ಮುನಿಯಪ್ಪ ದೆಹಲಿಯಲ್ಲೇ ಬೀಡು ಬಿಟ್ಟಿದ್ದರು. ಕೋಲಾರ ಕಾಂಗ್ರೆಸ್ ಘಟಕದಲ್ಲಿ ಮುನಿಯಪ್ಪ ವಿರುದ್ದ ಅಪಸ್ವರವಿದೆ ಎನ್ನುವುದರ ಬಗ್ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸಭೆಯಲ್ಲಿ ಹೇಳಿದಾಗ, ವೇಣು ವಿರುದ್ದವೇ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದು ಗೌಪ್ಯವಾಗಿಯೇನೂ ಉಳಿದಿರಲಿಲ್ಲ.
ಕೋಲಾರದ ಎಲ್ಲಾ ಶಾಸಕರು ನನ್ನ ಪರವಾಗಿದ್ದಾರೆಂದು ಅಂದು ದೆಹಲಿಯಲ್ಲಿ ಪ್ರತಿಪಾದಿಸಿದ್ದ ಮುನಿಯಪ್ಪ ವಿರುದ್ದ, ಕೋಲಾರ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು, ನಿಯೋಗದೊಂದಿಗೆ ದೆಹಲಿಗೆ ತೆರಳಿ ದೂರು ನೀಡಿ ಬಂದಿದ್ದಾರೆ. ಇದರಿಂದಾಗಿ, ಸದ್ಯದ ಮಟ್ಟಿಗೆ ದೇವರು ಕೊಟ್ಟರೂ, ಪೂಜಾರಿ ಬಿಡ ಎನ್ನುವ ಪರಿಸ್ಥಿತಿ ಮುನಿಯಪ್ಪನವರಿಗೆ ಎದುರಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ ವಿರುದ್ದ ಹೆಚ್ಚಿನ ಅಪಸ್ವರವಿಲ್ಲ
ಚಿಕ್ಕಬಳ್ಳಾಪುರ ಕಾಂಗ್ರೆಸ್ ಘಟಕದಲ್ಲಿ ಮೊಯ್ಲಿ ವಿರುದ್ದ ಹೆಚ್ಚಿನ ಅಪಸ್ವರವಿಲ್ಲದಿದ್ದರೂ, ಕೋಲಾರ ಕಾಂಗ್ರೆಸ್ ನಲ್ಲಿ ಎರಡು ಬಣವಿರುವುದು ಇಂದು ನಿನ್ನೆಯದಲ್ಲ. ಅಲ್ಲಿ ಕೆ ಎಚ್ ಮುನಿಯಪ್ಪ ಬಣ ಮತ್ತು ಸ್ಪೀಕರ್ ರಮೇಶ್ ಕುಮಾರ್ ಬಣದ ರಾಜಕೀಯಗಳೇ ಪ್ರತ್ಯೇಕ... ಪ್ರತ್ಯೇಕ.. ಆದರೂ, ಲೋಕಸಭಾ ಚುನಾವಣೆಯ ವೇಳೆ ಪಕ್ಷದ ಪರವಾಗಿ ಒಗ್ಗೂಡುವುದು ಅವರ ವಿಶೇಷತೆ ಎನ್ನುವುದು ಮುನಿಯಪ್ಪ ಸತತವಾಗಿ ಗೆದ್ದುಬರುತ್ತಿರುವುದೇ ಸಾಕ್ಷಿ.
ಮುನಿಯಪ್ಪ, ಏಳು ಬಾರಿ ಸತತವಾಗಿ ಗೆದ್ದು ಬಂದಿರುವುದು
ಸೋಲಿಲ್ಲದ ಸರದಾರನೆಂದೇ ಹೆಸರಾಗಿರುವ ಕೆ ಎಚ್ ಮುನಿಯಪ್ಪ, ಏಳು ಬಾರಿ ಸತತವಾಗಿ ಗೆದ್ದು ಬಂದಿರುವುದು ಮತ್ತೆ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಕೂಡಾ.. ಚುನಾವಣೆಯ ವೇಳೆ, ಅಪ್ರತಿಮ ರಾಜಕೀಯ ನಡೆಯನ್ನು ಇಡುವ ಮುನಿಯಪ್ಪ ವಿರೋಧಿಗಳನ್ನು ಹಣೆಯುವಲ್ಲಿ ನಿಸ್ಸೀಮರು. ಆದರೆ, ಈ ಬಾರಿ ಕೊಂಚ ವ್ಯತಿರಿಕ್ತ ಸನ್ನಿವೇಶ ಮುನಿಯಪ್ಪನವರಿಗೆ ಎದುರಾದಂತೆ ಕಾಣುತ್ತಿದೆ ಎನ್ನುವುದು ಕೋಲಾರದ ಗ್ರೌಂಡ್ ರಿಪೋರ್ಟ್.
20 ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಕೊತ್ತೂರು ಮಂಜುನಾಥ್ ಎಚ್ಚರಿಕೆಯನ್ನು ನೀಡಿದ್ದಾರೆ
ಕೋಲಾರ ಜಿಲ್ಲೆ ಮುಳಬಾಗಿಲಿನ ಪ್ರಮುಖ ರಾಜಕೀಯ ಮುಖಂಡ ಕೊತ್ತೂರು ಮಂಜುನಾಥ್, ಕೆಲವು ದಿನಗಳ ಹಿಂದೆ ಬಹಿರಂಗವಾಗಿಯೇ ಮುನಿಯಪ್ಪ ವಿರುದ್ದ ಕಿಡಿಕಾರಿದ್ದರು. ಅವರ ವಿರುದ್ದದ ವಿಡಿಯೋವನ್ನು ರಿಲೀಸ್ ಮಾಡುತ್ತೇನೆ ಎಂದು ಕೊತ್ತೂರು ಈಗಾಗಲೇ ಗುಡುಗಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ಕೊತ್ತೂರು ಸಲ್ಲಿಸಿದ್ದ ಜಾತಿಪ್ರಮಾಣ ಪತ್ರವನ್ನು ಕೋರ್ಟ್ ಅಸಿಂಧುಗೊಳಿಸಿತ್ತು, ಹಾಗಾಗಿ ಕಣದಿಂದ ಅವರು ಹಿಂದಕ್ಕೆ ಸರಿಯಬೇಕಾಯಿತು. ಇದರ ಹಿಂದೆ ಮುನಿಯಪ್ಪನವರ ಕೈವಾಡವಿರುವ ವಿಡಿಯೋವನ್ನು ನಾನು ಚುನಾವಣೆಯ ವೇಳೆ ಬಿಡುಗಡೆ ಮಾಡುತ್ತೇನೆಂದು ಕೊತ್ತೂರು ಮಂಜುನಾಥ್ ಎಚ್ಚರಿಕೆಯನ್ನು ನೀಡಿದ್ದಾರೆ. ಡಿಕೆಶಿ ಆಪ್ತವಲಯದಲ್ಲಿರುವ ಕೊತ್ತೂರು ಅವರನ್ನು ಟ್ರಬಲ್ ಶೂಟರ್, ಕಂಟ್ರೋಲ್ ಮಾಡಿದರೂ ಆಶ್ಚರ್ಯವಿಲ್ಲ.
ಜೆಡಿಎಸ್-ಕಾಂಗ್ರೆಸ್ಗೆ ಎಷ್ಟು ಸೀಟು?, ಮಾ.16ರಂದು ಅಧಿಕೃತ ಘೋಷಣೆ
ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ದೂರು
ಮುನಿಯಪ್ಪ ನಿರೀಕ್ಷಿಸದೇ ಇದ್ದ ಬೆಳವಣಿಗೆಯೊಂದರಲ್ಲಿ, ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಬಂಗಾರುಪೇಟೆ ಶಾಸಕ ನಾರಾಯಣಸ್ವಾಮಿ, ಪಕ್ಷೇತರರಾಗಿ ಗೆದ್ದಿದ್ದರೂ ಕಾಂಗ್ರೆಸ್ ಜೊತೆಗಿರುವ ಮುಳಬಾಗಲು ಶಾಸಕ ಎಚ್ ನಾಗೇಶ್, ಶಿಢ್ಲಘಟ್ಟ ಶಾಸಕ ಮುನಿಯಪ್ಪ, ಇವರ ಜೊತೆಗೆ ಕೊತ್ತೂರು ಮಂಜುನಾಥ್ ಮತ್ತು ಜಿಲ್ಲೆಯ ಪ್ರಮುಖ ಮುಖಂಡರು ದೆಹಲಿಗೆ ತೆರಳಿ ಮುನಿಯಪ್ಪಗೆ ಟಿಕೆಟ್ ನೀಡದಂತೇ ಮನವಿ ಸಲ್ಲಿಸಿದ್ದಾರೆ ಎನ್ನುವ ಖಚಿತ ಮಾಹಿತಿಯಿದೆ. ಹೈಕಮಾಂಡ್ ಇವರ ಮನವಿಗೆ ಬೆಲೆಕೊಡುತ್ತೋ, ಇಲ್ಲವೋ, ಚುನಾವಣೆಯ ಹೊಸ್ತಿಲಲ್ಲಿ ಮುನಿಯಪ್ಪನವರಿಗೆ ಆದ ಹಿನ್ನಡೆ ಇದು ಎಂದೇ ಹೇಳಲಾಗುತ್ತಿದೆ.
ಮುನಿಯಪ್ಪ ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ
ಮುನಿಯಪ್ಪ ಕ್ಷೇತ್ರದ ಇತರ ಜನಪ್ರತಿನಿಧಿಗಳು, ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ಅವರಿಗೆ ಟಿಕೆಟ್ ನೀಡಿದರೆ, ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹೈಕಮಾಂಡಿಗೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿಯೇ ವೇಣುಗೋಪಾಲ್ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದ್ದದ್ದು. ಕೋಲಾರದಲ್ಲಿ ಸದ್ಯಕ್ಕೆ ಕೆ ಎಚ್ ಮುನಿಯಪ್ಪನವರನ್ನು ಮೀರಿಸುವ ಅಭ್ಯರ್ಥಿ ಇಲ್ಲದೇ ಇರುವುದರಿಂದ, ಕಾಂಗ್ರೆಸ್ ಅವರಿಗೇ ಟಿಕೆಟ್ ನೀಡಬಹುದು. ಆದರೆ, ಪಕ್ಷದೊಳಗಿನ ಭಿನ್ನಮತವನ್ನು ಹೇಗೆ ಶಮನಗೊಳಿಸುತ್ತಾರೆ ಎನ್ನುವುದು ಸವಾಲಿನ ವಿಷಯ.