ತಹಶೀಲ್ದಾರ್ ನಿಧನ; ಬಂಗಾರಪೇಟೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ
ಕೋಲಾರ, ಜುಲೈ 10: ನಿನ್ನೆ ಜುಲೈ 9ರಂದು ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರು ಚಾಕು ಇರಿತದಿಂದ ಮೃತಪಟ್ಟಿದ್ದು, ಇಂದು ಅವರ ನಿಧನದ ಹಿನ್ನೆಲೆಯಲ್ಲಿ ಕೋಲಾರದ ಬಂಗಾರಪೇಟೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ನಿನ್ನೆ ಗುರುವಾರ ಬಂಗಾರಪೇಟೆಯ ಕಳವಂಚಿ ಗ್ರಾಮದಲ್ಲಿ ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಸುತ್ತಿದ್ದ ಸಂದರ್ಭ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರಿಗೆ ನಿವೃತ್ತ ಶಿಕ್ಷಕ ವೆಂಕಟಪತಿ ಎಂಬುವರು ಚಾಕುವಿನಿಂದ ಇರಿದಿದ್ದು, ತಹಶೀಲ್ದಾರ್ ಮೃತಪಟ್ಟಿದ್ದರು.
ಚಾಕು ಇರಿತ; ಕೋಲಾರದ ಬಂಗಾರಪೇಟೆ ತಹಶೀಲ್ದಾರ್ ಸಾವು
ಇಂದು ಅವರ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಕೆಗೆ ಬಂಗಾರಪೇಟೆ ವ್ಯಾಪ್ತಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದು, ಬಂಗಾರಪೇಟೆ ತಹಶೀಲ್ದಾರ್ ಕಚೇರಿ ಮುಂಭಾಗ ತಹಶೀಲ್ದಾರ್ ಅವರ ಭಾವಚಿತ್ರವಿಟ್ಟು ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಸರ್ಕಾರಿ ನೌಕರರು, ಶಾಸಕರು ಹಾಗೂ ಜನಪ್ರತಿನಿಧಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ರಜೆ ಘೋಷಿಸುತ್ತಿದ್ದಂತೆ ಸರ್ಕಾರಿ ನೌಕರರು ಕಚೇರಿಗಳನ್ನು ಬಂದ್ ಮಾಡಿಸಿ ಎಲ್ಲ ನೌಕರರನ್ನು ಪ್ರತಿಭಟನೆಯಲ್ಲಿ ಭಾಗಿ ಆಗುವಂತೆ ಮನವಿ ಮಾಡಿದರು. ಅಧ್ಯಕ್ಷ ಷಡಾಕ್ಷರಿ ಸೂಚನೆ ಮೇರೆಗೆ ಪ್ರತಿಭಟನೆಯನ್ನು ನಡೆಸಲಾಯಿತು.