ಕೋಲಾರದ ಸಲೂನ್ ನಲ್ಲಿ ಕಟಿಂಗ್ ಮಾಡಿಸಿಕೊಂಡಿದ್ದವರಿಗೆ ನಡುಕ, ಕಾರಣ ಕೊರೊನಾ...
ಕೋಲಾರ, ಜೂನ್ 01: ಕೋಲಾರದ ಬಂಗಾರಪೇಟೆಯ ಸಲೂನ್ ಶಾಪ್ ಒಂದರಲ್ಲಿ ಕಟಿಂಗ್ ಮಾಡಿಸಿಕೊಂಡಿದ್ದ ಜನರಿಗೀಗ ನಡುಕ ಶುರುವಾಗಿದೆ. ಕಾರಣ ಇಷ್ಟೆ. ನಿನ್ನೆ ಈ ಸಲೂನ್ ಗೆ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.
ಕ್ವಾರಂಟೈನ್ ಮುಗಿಸಿಕೊಂಡು ಊರಿಗೆ ಬಂದು ಸಲೂನ್ ಶಾಪ್ ನಲ್ಲಿ ನಿನ್ನೆ ಕಟಿಂಗ್ ಮಾಡಿಸಿಕೊಂಡಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ಜಿಲ್ಲೆಯಲ್ಲೇ ಬಹಳಷ್ಟು ಆತಂಕ ತಂದೊಡ್ಡಿದೆ. ಮಲೇಷಿಯಾದಿಂದ ಬೆಂಗಳೂರಿಗೆ ಬಂದು, ಕ್ವಾರಂಟೈನ್ ಮುಗಿಸಿಕೊಂಡು ವರದಿ ಬರುವ ಮುನ್ನವೇ ಹೀಗೆ ತಿರುಗಾಡಿದ್ದೇ ದೊಡ್ಡ ಯಡವಟ್ಟಾಗಿದೆ.
ಮಲೇಷಿಯಾದಿಂದ ವಾಪಸ್ ಆಗಿದ್ದ ವ್ಯಕ್ತಿ
ಮಲೇಷಿಯಾದಿಂದ ಮೇ 22ರಂದು ವಾಪಸ್ ಬಂದಿದ್ದ 35 ವರ್ಷದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಹದಿನಾಲ್ಕು ದಿನಗಳ ಕ್ವಾರಂಟೈನ್ ನಲ್ಲಿದ್ದರು. ಮೇ 30ರಂದು ಮತ್ತೆ ಪರೀಕ್ಷೆಗೆ ಒಳಗಾಗಿದ್ದು, ನಿನ್ನೆ ಸಂಜೆ ಬಂಗಾರಪೇಟೆಗೆ ವಾಪಸ್ ಆಗಿದ್ದಾರೆ. ಭಾನುವಾರ ಬೆಳಿಗ್ಗೆ ಅಲ್ಲಿನ ಕಟಿಂಗ್ ಶಾಪ್ ಒಂದರಲ್ಲಿ ಕಟಿಂಗ್ ಮಾಡಿಸಿಕೊಂಡಿದ್ದಾರೆ. ಆ ವ್ಯಕ್ತಿಯ ಪರೀಕ್ಷಾ ವರದಿ ಬಂದಿದ್ದು, ಅವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.
ಕೋಲಾರದಲ್ಲಿ ಕೊರೊನಾ ಆತಂಕ ತಂದ ಮಹಾರಾಷ್ಟ್ರ ವೃದ್ಧನ ಸಾವು
ಕಟಿಂಗ್ ಶಾಪ್ ಗೆ ಬಂದಿದ್ದವರ ಕಥೆಯೇನು?
ನಿನ್ನೆ ಸಲೂನ್ ಶಾಪ್ ಗೆ ಬಂದಿದ್ದ ಈ ವ್ಯಕ್ತಿಯಲ್ಲಿ ಸೋಂಕು ದೃಢಪಡುತ್ತಿದ್ದಂತೆ ಕಟಿಂಗ್ ಗೆಂದು ಬಂದಿದ್ದ ಜನರಲ್ಲೂ ಭಯ ಶುರುವಾಗಿದೆ. ಸೋಂಕಿತ ವ್ಯಕ್ತಿ ಕಟಿಂಗ್ ಮಾಡಿದವನ ಜೊತೆ ಸಂಪರ್ಕಕ್ಕೆ ಬಂದಿದ್ದಾನೆ. ಕಟಿಂಗ್ ಮಾಡಿದವನು 15 ಜನರ ಜೊತೆ ಸಂಪರ್ಕಕ್ಕೆ ಬಂದಿದ್ದಾನೆ. ಇನ್ನುಳಿದ ಪ್ರಾಥಮಿಕ ಸಂಪರ್ಕ ಹೊಂದಿರುವವರಿಗಾಗಿ ಆರೋಗ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ಕಟಿಂಗ್ ಶಾಪ್ ಗೆ ಹೋದವರಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಮನವಿ
ಸೋಂಕು ಇರುವುದು ದೃಢಪಡುತ್ತಿದ್ದಂತೆ ಆ ವ್ಯಕ್ತಿಯನ್ನು ಬೆಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಲೂನ್ ಶಾಪ್ ಗೆ ಹೋಗಿದ್ದವರು ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಸ್ಥಳೀಯ ಪುರಸಭೆ ಸದಸ್ಯ ಅರಿವು ಮೂಡಿಸುತ್ತಿದ್ದಾರೆ.
ಶಿವಮೊಗ್ಗ, ಹಾಸನ ಬಳಿಕ ಕೋಲಾರ ಜಿಲ್ಲೆಗೆ ಅಪ್ಪಳಿಸಿದ ಕೊರೊನಾ
ವಿವೇಕಾನಂದ ನಗರ ಕಂಟೈನ್ಮೆಂಟ್ ಝೋನ್ ಘೋಷಣೆ
ಬಂಗಾರಪೇಟೆಯ ವಿವೇಕಾನಂದ ನಗರದ ಈ ವ್ಯಕ್ತಿಯಲ್ಲಿ ಸೋಂಕು ದೃಢಪಡುತ್ತಿದ್ದಂತೆಯೇ ನಗರವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಸಲೂನ್ ಶಾಪ್ ಇಟ್ಟುಕೊಂಡ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.