ಕೋಲಾರದ ಗಡಿಯಲ್ಲೆಲ್ಲಾ ಕೊರೊನಾ ರಣಕೇಕೆ; ಜಿಲ್ಲೆಯಲ್ಲೀಗ ಢವಢವ
ಕೋಲಾರ, ಮೇ 12: ಸದ್ಯಕ್ಕೆ ಕೋಲಾರ ಗ್ರೀನ್ ಝೋನ್ ನಲ್ಲಿದೆ. ಇದುವರೆಗೂ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗದಂತೆ ಜಿಲ್ಲಾಡಳಿತ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದೆ. ಆದರೆ ಕೋಲಾರದ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಮಾತ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಜಿಲ್ಲೆಯ ಗಡಿಭಾಗ ಹಂಚಿಕೊಂಡಿರುವ ಆಂಧ್ರ ಹಾಗೂ ತಮಿಳುನಾಡು ಗಡಿಭಾಗದಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಜೊತೆಗೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಕೂಡ ಪಾಸಿಟಿವ್ ಕೇಸ್ ಗಳು ಕಂಡುಬರುತ್ತಿವೆ. ಈ ಒಂದು ಸಂಗತಿ ಕೋಲಾರದ ಜನರಲ್ಲಿ ಭಯಕ್ಕೆ ಕಾರಣವಾಗಿದೆ. ಕೋಲಾರ ಜಿಲ್ಲೆಯ ಸುತ್ತಲೂ ಕೊರೊನಾ ರಣಕೇಕೆ ಹಾಕುತ್ತಿದ್ದು, ಈ ಕಾರಣವಾಗೇ ಜಿಲ್ಲೆಯಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಗ್ರೀನ್ ಜೋನ್ ಕೋಲಾರಕ್ಕೆ ಬಣ್ಣ ಬದಲಾಗುವ ಆತಂಕ
"ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಕೋಲಾರ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಉಳಿಸಲಾಗಿದೆ. ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣು ಇಡಲಾಗಿದೆ. ಜನರು ಕದ್ದುಮುಚ್ಚಿ ಜಿಲ್ಲೆಯೊಳಗೆ ನುಸುಳಿಕೊಂಡು ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಬೇರೆ ಜಿಲ್ಲೆಗಳು ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಜನರನ್ನು ಸ್ಕ್ರೀನಿಂಗ್ ಟೆಸ್ಟ್ ಮಾಡಿಸಿ ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ ಜಿಲ್ಲಾಧಿಕಾರಿ ಸಿ ಸತ್ಯಭಾಮ.
"1500ಕ್ಕೂ ಹೆಚ್ಚು ಜನರು ಜಿಲ್ಲೆಗೆ ಬರುವವರಿದ್ದಾರೆ. ಯಾರೇ ಬಂದರೂ ಆಯಾ ತಾಲ್ಲೂಕುಗಳಲ್ಲಿ ಕ್ವಾರಂಟೈನ್ ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ" ಎಂದರು ಅವರು.