ಕೆ.ಸಿ ವ್ಯಾಲಿ ಯೋಜನೆ ನೀರು ಬಿಡದಿದ್ದಕ್ಕೆ ಕಾಂಗ್ರೆಸ್ ಶಾಸಕ ಗರಂ
ಕೋಲಾರ, ಫೆಬ್ರವರಿ 26: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆಯ ನೀರು ನಿರೀಕ್ಷಿತ ಮಟ್ಟದಲ್ಲಿ ಹರಿಯದ ಹಿನ್ನೆಲೆಯಲ್ಲಿ ಮಾಲೂರಿನ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಆಕ್ರೋಶ ಹೊರಹಾಕಿದ್ದಾರೆ.
ಕೋಲಾರ ತಾಲೂಕಿನ ನರಸಾಪುರ ಬಳಿ ಇರುವ ಪಂಪ್ ಹೌಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ನೀರು ಪಂಪ್ ಮಾಡಲಾಗ್ತಿದೆ ? ಯಾವ ಕೆರೆಗಳಿಗೆ ನೀರು ಹರಿದಿದೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಮಾಲೂರಿನ ಈ ದೇಗುಲಕ್ಕೆ ಬಾಗಿಲೂ ಇಲ್ಲ, ಅರ್ಚಕರೂ ಇಲ್ಲ...
ಬಳಿಕ ಜಿಲ್ಲಾಧಿಕಾರಿಗಳಿಗೆ ಹಾಗೂ ಕೆ.ಸಿ ವ್ಯಾಲಿ ಅಧ್ಯಕ್ಷರು ಆಗಿರುವ ಮಂಜುನಾಥ್ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ ಶಾಸಕ ನಂಜೇಗೌಡ, ಮಾಲೂರು ತಾಲೂಕಿಗೆ ಏಕೆ ಕೆ.ಸಿ ವ್ಯಾಲಿ ನೀರು ಹರಿಸುತ್ತಿಲ್ಲ, ಬೇಸಿಗೆ ಕಾಲ ಬಂದಿದೆ ಕೂಡಲೇ ನಮ್ಮ ಪಾಲಿನ ನೀರನ್ನು ಹರಿಸಬೇಕು ಎಂದು ಮನವಿ ಆಗ್ರಹಿಸಿದರು.
ಬೆಂಗಳೂರಿನ ಬೆಳ್ಳಂದೂರು ಕೆರೆಯಿಂದ ಕೋಲಾರದ ಲಕ್ಷ್ಮೀಸಾಗರ ಕೆರೆಗೆ ೨೭೦ ದಶಲಕ್ಷ ಲೀಟರ್ ನೀರನ್ನು ಪ್ರತಿದಿನ ಎರಡು ಹಂತದಲ್ಲಿ ಶುದ್ದೀಕರಿಸಿ ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದಾದ ಬಳಿಕ ನರಸಾಪುರ ಕೆರೆ ಮೂಲಕ ಕೋಲಾರ, ಮಾಲೂರು ಮತ್ತು ಶ್ರೀನಿವಾಸಪುರ ತಾಲೂಕಿನ ಕೆರೆಗಳಿಗೆ ನೀರನ್ನು ಪಂಪ್ ಹೌಸ್ ಮೂಲಕ ಹರಿಸಲಾಗುತ್ತಿದೆ ಎಂದರು.
ಚರಂಡಿ ನೀರಲ್ಲಿ ಚಿನ್ನದಂಥ ಬೆಳೆ ತೆಗೆದ ಕೋಲಾರದ ಯುವ ರೈತ
ಕೆಲವು ತಿಂಗಳ ಹಿಂದೆ ಕೋಲಾರದ ನರಸಾಪುರ ಕೆರೆಯಿಂದ ಮಾಲೂರು ತಾಲೂಕಿನ ಭಾಗಕ್ಕೆ 60 ದಶಲಕ್ಷ ಲೀಟರ್ ನೀರನ್ನ ಹರಿಸಲು ಅಧಿಕೃತವಾಗಿ ಚಾಲನೆ ನೀಡಿದ್ದರು. ಈಗ ಏಕಾಏಕಿ ಒಪ್ಪಂದದಂತೆ ಮಾಲೂರಿಗೆ ನೀರು ಹರಿಸದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನರಸಾಪುರ ಕೆರೆಯಿಂದ ಮಾಲೂರಿನ ಶಿವಾರಪಟ್ಟಣ ಕೆರೆ ತುಂಬಿ ಅಲ್ಲಿಂದ ನೀರನ್ನು ಪಂಪ್ ಮಾಡಲು ಪಂಪ್ ಹೌಸ್ ಸಹ ನಿರ್ಮಾಣ ಮಾಡಲಾಗಿದೆ. ಆದರೆ ನಿಗದಿತ ಪ್ರಮಾಣದಲ್ಲಿ ನೀರು ಇಲ್ಲಿಯವರೆಗೂ ಬಂದಿಲ್ಲ ಎಂದು ದೂರಿದರು. ಮಾಲೂರು ಕ್ಷೇತ್ರದ ಜನರು ನೀರಿಲ್ಲದೇ ಪರಿತಪಿಸುವಂತೆ ಆಗಿದೆ ಎಂದು ಅಸಮಾಧಾನಗೊಂಡರು.
ಇನ್ನು ಐದು ದಿನದಲ್ಲಿ ತಾಲೂಕಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ 10 ಸಾವಿರು ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೆ.ವೈ. ನಂಜೇಗೌಡ ಎಚ್ಚರಿಕೆ ನೀಡಿದರು. ಬಳಿಕ ಸಂಸದ ಮುನಿಸ್ವಾಮಿ ವಿರುದ್ಧವೂ ಹರಿಹಾಯ್ದ ಶಾಸಕ ಕೆ.ವೈ ನಂಜೇಗೌಡ ನೀವು ಸಹ ಮಾಲೂರಿನ ತಾಲೂಕಿನವರು, ಸ್ವಲ್ಪ ಮುತುವಜಿ೯ ವಹಿಸಿ ನಮ್ಮ ಪಾಲಿನ ನೀರನ್ನು ಹರಿಸಲು ಸಹಕರಿಸಬೇಕು,ಇದರಲ್ಲಿ ರಾಜಕೀಯ ಮಾಡಬಾರದು ಎಂದು ಕಿವಿ ಮಾತು ಹೇಳಿದರು.