ವರ್ಷಗಳ ನಂತರ ಅಕ್ಕಪಕ್ಕ ಕೂತು ಮಾತನಾಡಿದ ಎಸ್ಸೆಂ ಕೃಷ್ಣ, ಸಿದ್ದರಾಮಯ್ಯ
Recommended Video
ಕೋಲಾರ, ಫೆಬ್ರವರಿ 3: ಆ ಭೇಟಿ ಬಹಳ ಅಪರೂಪದ ಮೇಲಾಗಿತ್ತು. ಜತೆಗೆ ಹಲವರ ಹುಬ್ಬೇರುವಂತೆ ಮಾಡಿತು. ಅದು ಯಾರ ಭೇಟಿ ಹಾಗೂ ಎಲ್ಲಿ ಆಗಿದ್ದು ಎಂದು ಹೇಳದಿದ್ದರೆ ಹೇಗೆ? ಮಾಜಿ ಮುಖ್ಯಮಂತ್ರಿ ಹಾಗೂ ಸದ್ಯಕ್ಕೆ ಬಿಜೆಪಿಯಲ್ಲಿರುವ ಎಸ್ಸೆಂ ಕೃಷ್ಣ ಹಾಗೂ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೋಲಾರದಲ್ಲಿ ಒಟ್ಟಿಗೆ ಕಾಣಿಸಿಕೊಂಡು, ಭಾನುವಾರ ಮಾತುಕತೆ ನಡೆಸಿದರು.
ಕೋಲಾರದಲ್ಲಿ ಮಾಜಿ ಸಚಿವ, ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಂದಿದ್ದ ಎಸ್ಸೆಂ ಕೃಷ್ಣ ಹಾಗೂ ಸಿದ್ದರಾಮಯ್ಯ, ಪ್ರವಾಸಿ ಮಂದಿರದಲ್ಲಿ ಭೇಟಿಯಾದರು. ಅಷ್ಟೇ ಅಲ್ಲ, ಪರಸ್ಪರರು ಕುಶಲೋಪರಿ ವಿಚಾರಿಸಿದರು.
ಕುತೂಹಲ ಮೂಡಿಸಿದ ಯಡಿಯೂರಪ್ಪ, ಎಸ್.ಎಂ.ಕೃಷ್ಣ ಭೇಟಿ
ಸಿದ್ದರಾಮಯ್ಯ ಮುಖ್ಯಮಂತ್ರಿ ಅಗಿದ್ದ ಅವಧಿಯಲ್ಲಿ ಅವರ ವಿರುದ್ಧ ಎಸ್ಸೆಂ ಕೃಷ್ಣ ಸಾರ್ವಜನಿಕವಾಗಿಯೇ ಹಲವು ಸಲ ಬೇಸರ ವ್ಯಕ್ತಪಡಿಸಿದ್ದರು. ಯಾವಾಗ ಸಾರ್ವಜನಿಕವಾಗಿ ಹೀಗೆ ಹೇಳತೊಡಗಿದರೋ ಆಗ ಮುಜುಗರ ತಪ್ಪಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಅವರು ಕೃಷ್ಣರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು. ಒಂದು ಹಂತದಲ್ಲಿ ಅಸಮಾಧಾನ ಬುಗಿಲೆದ್ದು, ಎಸ್ಸೆಂ ಕೃಷ್ಣ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದರು.
ಕೃಷ್ಣ ಅವರು ಕಾಂಗ್ರೆಸ್ ತೊರೆದ ನಂತರ ಸಿದ್ದರಾಮಯ್ಯರನ್ನು ಭೇಟಿ ಆಗಿರಲಿಲ್ಲ. ಬಹಳ ಕಾಲದ ನಂತರ ಕೋಲಾರ ಪ್ರವಾಸಿ ಮಂದಿರದಲ್ಲಿ ಇಬ್ಬರು ನಾಯಕರ ಭೇಟಿ ಆಯಿತು. ಒಟ್ಟಿಗೆ ಚಹಾ ಸೇವಿಸಿದರು. ಪರಸ್ಪರರು ಕೈ ಕುಲುಕಿದರು. ಇನ್ನು ಜನ್ಮಶತಮಾನೋತ್ಸವ ವೇದಿಕೆಯಲ್ಲೂ ಪರಸ್ಪರರು ಜತೆಯಲ್ಲೇ ಕುಳಿತು, ಮಾತನಾಡುತ್ತಿದ್ದುದು ಕಂಡುಬಂತು.
ಎಸ್ ಎಂ ಕೃಷ್ಣ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿದ್ದೇಕೆ?
ಎಸ್ಸೆಂ ಕೃಷ್ಣ ಅವರು ಮಾಧ್ಯಮದವರ ಜತೆಗೆ ಮಾತನಾಡಿ, ಸದ್ಯಕ್ಕಂತೂ ನಾನು ರಾಜಕೀಯದಿಂದ ದೂರ ಇದ್ದೀನಿ. ನನ್ನ ಭವಿಷ್ಯವೇ ನನಗೆ ಗೊತ್ತಿಲ್ಲ. ಇನ್ನು ಈ ಸಮ್ಮಿಶ್ರ ಸರಕಾರದ ಭವಿಷ್ಯದ ಬಗ್ಗೆ ಏನು ಹೇಳಲಿ? ಮಂಡ್ಯ ಲೋಕಸಭಾ ಕ್ಷೇತ್ರದ ಸ್ಪರ್ಧೆ ಆಯಾ ಪಕ್ಷಕ್ಕೆ ಸೇರಿದ ವಿಚಾರ. ಈ ಬಾರಿಯ ಮಧ್ಯಂತರ ಬಜೆಟ್ ಉತ್ತಮವಾಗಿದೆ ಎಂದು ಅವರು ಹೇಳಿದರು.