ಕರ್ನಾಟಕ : ಬರಪೀಡಿತ ಮೂರು ಜಿಲ್ಲೆಗಳಲ್ಲಿ ಮೋಡ ಬಿತ್ತನೆ
ಕೋಲಾರ, ಆಗಸ್ಟ್ 28 : ಕರ್ನಾಟಕದ 22 ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಅಪಾರವಾದ ಹಾನಿಯಾಗಿದೆ. ಆದರೆ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ.
ಈ ಮೂರು ಜಿಲ್ಲೆಗಳಲ್ಲಿ ಮೋಡ ಬಿತ್ತನೆ ನಡೆಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಇದುವರೆಗೂ 78 ಗಂಟೆಗಳ ಕಾಲ ಮೋಡ ಬಿತ್ತನೆ ನಡೆದಿದೆ. ಈಗ ಈ ಮೂರು ಜಿಲ್ಲೆಗಳತ್ತ ಗಮನ ಹರಿಸಲಾಗಿದೆ.
ಮೋಡ ಬಿತ್ತನೆ ಮೊದಲ ಫಲಾನುಭವಿ 'ರಾಮನಗರ' ಜಿಲ್ಲೆ
ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಎರಡು ಕೇಂದ್ರಗಳನ್ನು ಮಾಡಿಕೊಂಡು ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭಿಸಲಾಗಿತ್ತು. ಮೈಸೂರು ಸುತ್ತಮುತ್ತ ಹೆಚ್ಚು ಮಳೆಯಾಗಿದ್ದರಿಂದ ಅಲ್ಲಿದ್ದ ವಿಮಾನವನ್ನು ಹುಬ್ಬಳ್ಳಿಗೆ ಕಳಿಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ಮೋಡ ಬಿತ್ತನೆ, ಕೃತಕ ಮಳೆ?
ಈಗ ಹುಬ್ಬಳ್ಳಿಯಲ್ಲಿರುವ ವಿಮಾನವನ್ನು ಕರೆಸಿಕೊಂಡು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಜುಲೈ 27ರಂದು ಮೋಡ ಬಿತ್ತನೆಗೆ ಚಾಲನೆ ನೀಡಲಾಗಿತ್ತು, ಇನ್ನೂ ಎರಡು ತಿಂಗಳ ಕಾಲ ಇದು ಮುಂದುವರೆಯಲಿದೆ.
ಮೋಡ ಬಿತ್ತನೆ ಬಗ್ಗೆ ಮಾಹಿತಿ ಕೊಟ್ಟ ಕೃಷ್ಣ ಬೈರೇಗೌಡ
ತಜ್ಞರ ತಂಡ ಭೇಟಿ : ರಾಜ್ಯದಲ್ಲಿ ಮೋಡ ಬಿತ್ತನೆ ಯಶಸ್ವಿಯಾಗಿದೆಯೇ? ಎಂಬ ಬಗ್ಗೆ ವರದಿ ನೀಡಲು ನಾಲ್ವರು ತಜ್ಞರ ತಂಡ ರಚನೆಯಾಗಿದೆ. ಪುಣೆಯ ಐಐಟಿಎಂನ ಮೂವರು ವಿಜ್ಞಾನಿಗಳು ಹಾಗೂ ಹವಾಮಾನ ಇಲಾಖೆಯ ಒಬ್ಬ ಅಧಿಕಾರಿಯ ತಂಡ ಈ ಕುರಿತು ಪರಿಶೀಲನೆ ನಡೆಸಿದ್ದು, ಶೀಘ್ರವೇ ವರದಿ ಕೊಡಲಿದೆ.
ಈ ವರ್ಷ ಮುಂಗಾರು ಮಳೆ ತಡವಾದ ಕಾರಣ ಸರ್ಕಾರ ಮೋಡ ಬಿತ್ತನೆಗೆ ಟೆಂಡರ್ ಕರೆದಿತ್ತು. 45 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ವರ್ಷಕ್ಕೆ 300 ಗಂಟೆ ಮೋಡ ಬಿತ್ತನೆ ಮಾಡಲು ಒಪ್ಪಂದವಾಗಿತ್ತು. ಆದರೆ, ರಾಜ್ಯದ 22 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಮೋಡ ಬಿತ್ತನೆಗೆ ತಡೆ ಬಿದ್ದಿದೆ.