ಅತ್ಯಾಚಾರಿಗಳ ಪಾಲಿನ ಸಿಂಹಸ್ವಪ್ನ ಕೋಲಾರದ ಈ ನ್ಯಾಯಾಧೀಶೆ...
ಕೋಲಾರ, ಫೆಬ್ರವರಿ 16: ಅದು ಅತ್ಯಾಚಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ನ್ಯಾಯಪೀಠ, ಅಲ್ಲಿಂದ ಅತ್ಯಾಚಾರಿಗಳು ತಪ್ಪಿಸಿಕೊಳ್ಳೋದು ಅಸಾಧ್ಯ. ತಡಮಾಡದೆ ಶಿಕ್ಷೆ ವಿಧಿಸುವ ಮೂಲಕ ಇಂದು ದೇಶದ ಗಮನ ಸೆಳೆದಿರುವ ನ್ಯಾಯಪೀಠವದು, ತಮ್ಮ ನಿರ್ದಾಕ್ಷಿಣ್ಯ ಆದೇಶದ ಮೂಲಕವೇ ನೂರು ಮೆಟ್ಟಿಲೇರಿದ ಅಪರೂಪದ ತೀರ್ಪಿನ ಕುರಿತ ಸ್ಟೋರಿ ಇಲ್ಲಿದೆ..
ಅದು ನೊಂದ ಮಹಿಳೆಯರ ಪಾಲಿನ ಕಣ್ಣೊರೆಸುವ ಕ್ಷೇತ್ರ, ಅನ್ಯಾಯಕ್ಕೊಳಗಾದ ಸಂತ್ರಸ್ಥೆಯರಿಗೆ ನ್ಯಾಯದ ಮೂಲಕ ಸಮಾಧಾನ ನೀಡುವ ನ್ಯಾಯಪೀಠ, ಅತ್ಯಾಚಾರವೆಸಗಿದ ಅಪರಾಧಿಗಳಿಗೆ ಸೆರೆಮನೆ ಖಾಯಂ ಆಗಿ ಮೀಸಲಿಟ್ಟ ಆದೇಶ, ಹೀಗೆ ಹತ್ತಾರು ನೊಂದ ಜೀವಗಳಿಗೆ ತ್ವರಿತ ಹಾಗೂ ನಿಷ್ಠುರ ತೀರ್ಪಿನ ಮುಖಾಂತರ ಸಾಂತ್ವನ ಹೇಳುವ ನ್ಯಾಯ ಪೀಠವಿರೋದು ಕೋಲಾರದಲ್ಲಿ.
ಇವರೇ ದೇಶದ ಅತ್ಯಂತ್ಯ ಕಿರಿಯ ನ್ಯಾಯಾಧೀಶರು: ಇದು ಹೊಸ ದಾಖಲೆ
ಹೌದು. ಕೋಲಾರ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್.ರೇಖಾ ರವರ ನಿರ್ದಾಕ್ಷಿಣ್ಯ ಹಾಗೂ ನಿಷ್ಠುರ ತೀರ್ಪು ಇಂದು ದೇಶದ ಗಮನ ಸೆಳೆಯುತ್ತಿದೆ. ಕೇವಲ ಎರಡು ವರ್ಷಗಳಲ್ಲಿ ಬರೋಬ್ಬರಿ 100 ಪೋಕ್ಸೋ ಪ್ರಕರಣಗಳಲ್ಲಿ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ಕೀರ್ತಿ ಕೋಲಾರ 2ನೇ ಜಿಲ್ಲಾ ಸತ್ರನ್ಯಾಯಾಲಯಕ್ಕೆ ಸಲ್ಲುತ್ತದೆ.
ರಾಜ್ಯ ಹಾಗೂ ದೇಶದಲ್ಲೇ ಅತಿ ಕಡಿಮೆ ಅವಧಿಯಲ್ಲಿ, ಅತಿ ಹೆಚ್ಚು ಪ್ರಕರಣಗಳಲ್ಲಿ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋಲಾರ 2ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್.ರೇಖಾ ಅತ್ಯಾಚಾರಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ.
ಉದ್ಘಾಟನೆಯಾಯಿತು ಮೊದಲ 'ದಿಶಾ' ಪೊಲೀಸ್ ಠಾಣೆ; ಏನು ವಿಶೇಷ?
ಕಳೆದ ಎರಡು ವರ್ಷಗಳಲ್ಲಿ 100 ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿದ್ದಾರೆ. 2017 ರಿಂದ 2020 ರವರೆಗೆ ನೂರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳಿಗೆ ತ್ವರಿತ ಶಿಕ್ಷೆ ವಿಧಿಸಿದ್ದಾರೆ.
3- ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆ, 2 ಪ್ರಕರಣಗಳಲ್ಲಿ ಜೀವಾವದಿ ಶಿಕ್ಷೆ, 1 ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ, 23 ಪ್ರಕರಣಗಳಲ್ಲಿ 10 ವರ್ಷ ಜೈಲು ಶಿಕ್ಷೆ, 41- ಪ್ರಕರಣಗಳಲ್ಲಿ 7 ವರ್ಷ ಜೈಲು ಶಿಕ್ಷೆ, 30 ಪ್ರಕರಣಗಳಲ್ಲಿ 5 ವರ್ಷಕ್ಕಿಂತ ಕಡಿಮೆ ಶಿಕ್ಷೆ ನೀಡಲಾಗಿದೆ.
ಇನ್ನು ಇದರ ಜೊತೆಗೆ ವಿಶೇಷವಾಗಿ 2018 ಆಗಸ್ಟ್ 1 ರಂದು ಮಾಲೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣವನ್ನು ಘಟನೆ ನಡೆದ 45 ದಿನಗಳಲ್ಲಿ ಪ್ರಕರಣ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಇತಿಹಾಸ ಕೂಡಾ ಇದೆ.
ಹೀಗೆ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ನೊಂದ ಸಂತ್ರಸ್ಥೆಯರಿಗೆ ಅನ್ಯಾಯವಾಗದೆ ಕೋಲಾರದ ರೀತಿಯಲ್ಲಿ ಎರಡನೇ ಜಿಲ್ಲಾಸತ್ರ ನ್ಯಾಯಾಲಯದ ತೀರ್ಪು ಜಿಲ್ಲೆಯಲ್ಲಿ ಕಾಮುಕರಿಗೆ ಸಿಂಹಸ್ವಪ್ನವಾಗಿದ್ದು. ಇಂಥಹ ತೀರ್ಪುಗಳಿಂದ ಜಾಗೃತರಾಗಿರುವ ಕಾಮುಕರು ಅಪರಾದ ಕೃತ್ಯ ಎಸಗಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳು ಕ್ರಮೇಣ ಕಡಿಮೆಯಾಗಿದೆ, ಹೀಗಾಗಿ ಜಿಲ್ಲಾಡಳಿತ ಕೂಡಾ ನ್ಯಾಯಾಧೀಶರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದೆ.