ನಗುನಗುತ್ತಾ ಹೊಸ ವರ್ಷಾಚರಣೆಗೆ ಹೊರಟ ಮಗ ಮನೆಗೆ ಬಂದದ್ದು ಹೆಣವಾಗಿ
ಕೋಲಾರ, ಜನವರಿ 19: ಹೊಸ ವರ್ಷ ಹಾಗೂ ಹುಟ್ಟುಹಬ್ಬದ ಆಚರಣೆಗೆಂದು ನಗು ನಗುತ್ತಾ ಮನೆಯಿಂದ ಹೊರಟ ಮಗ ತಂದೆ ತಾಯಿ ಮುಂದೆ ಮತ್ತೆ ಬಂದದ್ದು ಹೆಣವಾಗಿ.
ಕೋಲಾರ ತಾಲೂಕಿನ ಶಾಪೂರು ಕ್ರಾಸ್ನ ಅಬ್ಬಣಿ ಗ್ರಾಮದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಎರಡು ದಿನಗಳ ಹಿಂದೆ ಯುವಕನ ಶವ ಪತ್ತೆಯಾಗಿದೆ. ಬೇವಿನ ಮರಕ್ಕೆ ಯುವಕನನ್ನು ನೇಣು ಬಿಗಿದಿದ್ದು, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕೋಲಾರ ತಾಲೂಕಿನ ಅರಳಕುಂಟೆ ಗ್ರಾಮದ 19 ವರ್ಷದ ಸುಹಾಸ್ ಆ ಯುವಕ ಎಂದು ತಿಳಿದುಬಂದಿದೆ.
ಕುಡಿಯಲು ಹಣ ಕೊಟ್ಟಿಲ್ಲವೆಂದು ಮಡಿಕೇರಿಯಲ್ಲಿ ತಂದೆಯನ್ನೇ ಕೊಲೆಗೈದ ಮಗ
ಡಿಸೆಂಬರ್ 31 ರಂದು ಹೊಸ ವರ್ಷ ಹಾಗೂ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಸ್ನೇಹಿತರೊಂದಿಗೆ ಹೋಗುವೆನೆಂದು ಮನೆಯಿಂದ ಹೊರಟಿದ್ದ ಸುಹಾಸ್. ಆದರೆ ಆತ ವಾಪಸ್ ಮನೆಗೆ ಬರಲೇ ಇಲ್ಲ. ಸಂಬಂಧಿಕರು, ಸ್ನೇಹಿತರ ಬಳಿ ವಿಚಾರಿಸಿದ ತಂದೆ ತಾಯಿಗೆ ಮಗನ ಯಾವ ಸುಳಿವೂ ಸಿಗಲಿಲ್ಲ. ನಂತರ ಯುವಕನ ತಂದೆ ರವೀಂದ್ರ ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದರು.
ಶೃಂಗೇರಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ ಗಲ್ಲು ಶಿಕ್ಷೆ
ಆದರೆ ಹದಿನೈದು ದಿನಗಳ ನಂತರ ಯುವಕನ ಶವ ಪತ್ತೆಯಾಗಿದೆ. ಆತನ ಮೊಬೈಲ್ ಹಾಗೂ ಬಟ್ಟೆಯಿಂದ ಗುರುತು ಸಿಕ್ಕಿದೆ. ಮಗನನ್ನು ಹೊಡೆದು ಕೊಲೆ ಮಾಡಿ ಮರಕ್ಕೆ ನೇಣು ಬಿಗಿಯಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಪೊಲೀಸರು ಯುವಕನದ್ದು ಸಹಜ ಸಾವೋ, ಕೊಲೆಯೋ ಎಂಬ ಕುರಿತು ತನಿಖೆ ಕೈಗೊಂಡಿದ್ದಾರೆ.