'ಹತ್ಯಾಚಾರ'ಕ್ಕೊಳಗಾದ ರಕ್ಷಿತಾ ಪರ ಮಾಲೂರಿನಲ್ಲಿ ಜನ ಸಾಗರ
ಮಾಲೂರು, ಆಗಸ್ಟ್ 02: ನಿನ್ನೆ (ಆಗಸ್ಟ್ 01) ರಂದು ಕಿರಾತಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿರುವ ರಕ್ಷಿತಾಗೆ ನ್ಯಾಯ ಒದಗಿಸುವಂತೆ ಮಾಲೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆದಿದೆ.
ಮಾಲೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಸೇರಿದಂತೆ ಪಟ್ಟಣದ ಸಾರ್ವಜನಿಕರು ಪ್ರತಿಭಟನೆ ನಡೆಸಿ ರಕ್ಷಿತಾಳ ಹಂತಕರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ರಕ್ಷಿತಾ ಪರ ಹಲವರ ಮನ ಮಿಡಿದಿದೆ.
ಬಾಲಕಿಯ ಕೊಲೆ, ಅತ್ಯಾಚಾರ ಶಂಕೆ: ಮಾಲೂರಿನಲ್ಲಿ ಉಗ್ರ ಪ್ರತಿಭಟನೆ
ಪಟ್ಟಣದಲ್ಲಿ ಮುಂಜಾನೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಘೋಷಿತವಾಗಿ ಬಂದ್ ಮಾಡಲಾಗಿತ್ತು. ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ರಸ್ತೆ ತಡೆ ಸಹ ಮಾಡಿ ಪೊಲೀಸರ ಮೇಲೆ ಒತ್ತಡ ಹೇರಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಎಸ್ಪಿ ಆದಷ್ಟು ಶೀಘ್ರವಾಗಿ ಅಪರಾಧಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕವಷ್ಟೆ ಪ್ರತಿಭಟನಾಕಾರರು ರಸ್ತೆ ತಡೆ ಕೈಬಿಟ್ಟರು.
ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಾಲಕಿ ರಕ್ಷಿತಾಳಿಗೆ ನ್ಯಾಯ ಒದಗಿಸುವಂತೆ ಕೇಳಿಕೊಂಡರು.
10ನೇ ತರಗತಿ ಓದುತ್ತಿದ್ದ ರಕ್ಷಿತಾ ಮಾಲೂರಿನಲ್ಲೇ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಜೆ ಮನೆಗೆ ವಾಪಾಸಾಗುತ್ತಿದ್ದ ಬಾಲಕಿಯನ್ನು ಅಪಹರಿಸಿದ್ದ ಗುಂಪೊಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ತಲೆಗೆ ಆಯುಧದಿಂದ ಹೊಡೆದು ಕೊಲೆ ಮಾಡಿತ್ತು.