ಬಂಗಾರಪೇಟೆ ತಹಶೀಲ್ದಾರ್ ಸಾವು; ನಾಳೆ ತಾಲೂಕು ಬಂದ್
ಕೋಲಾರ, ಜುಲೈ 10: ಕೋಲಾರದ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರ ಕೊಲೆ ಖಂಡಿಸಿ ತಾಲೂಕಿನಲ್ಲಿ ನಾಳೆ ಬಂದ್ ಆಚರಿಸಲಾಗುತ್ತಿದೆ.
ನಿನ್ನೆ ಗುರುವಾರ ಬಂಗಾರಪೇಟೆಯ ಕಳವಂಚಿ ಗ್ರಾಮದಲ್ಲಿ ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಸುತ್ತಿದ್ದ ಸಂದರ್ಭ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರಿಗೆ ನಿವೃತ್ತ ಶಿಕ್ಷಕ ವೆಂಕಟಪತಿ ಎಂಬುವರು ಚಾಕುವಿನಿಂದ ಇರಿದಿದ್ದು, ತಹಶೀಲ್ದಾರ್ ಮೃತಪಟ್ಟಿದ್ದರು.
ತಹಶೀಲ್ದಾರ್ ನಿಧನ; ಬಂಗಾರಪೇಟೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ
ಇಂದು ಅವರ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಕೆಗೆ ಬಂಗಾರಪೇಟೆ ವ್ಯಾಪ್ತಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದರು. ಸರ್ಕಾರಿ ನೌಕರರು ತಹಶೀಲ್ದಾರ್ ಕೊಲೆಯನ್ನು ಖಂಡಿಸಿ ಕಚೇರಿಗಳನ್ನು ಬಂದ್ ಮಾಡಿಸಿ ಅಧ್ಯಕ್ಷ ಷಡಾಕ್ಷರಿ ಸೂಚನೆ ಮೇರೆಗೆ ಪ್ರತಿಭಟನೆಯನ್ನು ನಡೆಸಿದರು. ನಾಳೆ ಕೂಡ ಬಂಗಾರಪೇಟೆ ತಾಲೂಕಿನಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ. ಶಾಂತಿಯುತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದ್ದು, ನಾಳೆ ವ್ಯಾಪಾರ ವಹಿವಾಟು ಬಂದ್ ಮಾಡಲು ವರ್ತಕರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ.
ಬೆಳಗ್ಗೆ 10 ಗಂಟೆಗೆ ಶಾಂತಿಯುತ ಶ್ರದ್ಧಾಂಜಲಿ ಜಾಥಾ ಮೂಲಕ ಪ್ರಗತಿಪರ ಸಂಘಟನೆಗಳು ಬಂದ್ ಮಾಡಲು ನಿರ್ಧರಿಸಿವೆ.