ಕೃಷಿ ಜೊತೆ ಕೋಳಿ ಸಾಕಣೆ; ಇದು ಕೋಲಾರ ರೈತನ ಯಶೋಗಾಥೆ
ಕೋಲಾರ, ಜನವರಿ 22: ಕೃಷಿಯಲ್ಲಿ ನಷ್ಟವಾದರೂ, ಕೃಷಿಯ ಉಪ ಕಸುಬಾಗಿ ರೈತರ ಜೀವನ ನಿರ್ವಹಣೆಗೆ ಕಂಡುಕೊಂಡಿದ್ದ ಉಪಾಯ ಇಂದು ರೈತರ ಕೈ ಹಿಡಿದಿದೆ. ಬೇಸಾಯದ ಜೊತೆಗೆ ಕೋಳಿ ಸಾಕಾಣಿಕೆ ಮಾಡಿ ಯಶಸ್ವಿಯಾದ ರೈತನ ಕುರಿತ ವರದಿ ಇಲ್ಲಿದೆ.
ಈ ರೈತನ ಹೆಸರು ಅಬ್ಬಣಿ ಶಿವಪ್ಪ. ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ಇವರು ಕೃಷಿಯ ಜೊತೆಗೆ ಕೋಳಿ ಸಾಕಾಣಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಅದರಲ್ಲಿ ಯಶಸ್ಸನ್ನೂ ಪಡೆದುಕೊಂಡಿದ್ದಾರೆ.
ಸ್ವಾವಲಂಬಿ ಜೀವನಕ್ಕೆ ಆಧಾರವಾದ ಅಣಬೆ ಬೇಸಾಯ
ಬರೀ ಕೃಷಿಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುವುದಕ್ಕಿಂತ ಕೋಳಿ, ಕುರಿ ಸಾಕಾಣಿಕೆಯಂತಹ ಉಪ ಕಸುಬು ಮಾಡಿದರೆ ರೈತರೂ ಲಾಭ ಗಳಿಸಬಹುದು. ಮಳೆಯಾಶ್ರಿತ ಪ್ರದೇಶಗಳಲ್ಲಿ ಇಂತಹ ಪ್ರಯೋಗ ಮಾಡುವುದರಿಂದ ಖರ್ಚನ್ನು ಸರಿದೂಗಿಸಬಹುದು. ರೈತ ಅಬ್ಬಣಿ ಶಿವಪ್ಪನವರ ಕೃಷಿ ಪಯಣ ಅವರ ಯಶಸ್ಸಿನ ಹಾದಿಯನ್ನೂ ತೆರೆದಿಡುತ್ತದೆ.
ರೈತನ ಮನಸೆಳೆದಿದ್ದ ಕೋಳಿ ಸಾಕಾಣಿಕೆ
ರೈತ ಸಮಾವೇಶವೊಂದರಲ್ಲಿ ಈ ನಾಟಿ ಕೋಳಿ ಸಾಕಾಣಿಕೆಯು ರೈತ ಶಿವಪ್ಪ ಅವರ ಮನಸ್ಸನ್ನು ಸೆಳೆದಿತ್ತು. ಅದರಂತೆ ಕೃಷಿಯ ಜೊತೆಗೆ ಕೋಳಿ ಸಾಕಾಣಿಕೆಯನ್ನು ಅಳವಡಿಸಿಕೊಂಡು ಇಂದು ಬೃಹತ್ ಉಪ ಕಸುಬಾಗಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಹೆಬ್ಬಾಳದಿಂದ ನಾಟಿ ಕೋಳಿ ಮರಿಗಳನ್ನು ತಂದಿರುವ ಇವರು 700 ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಅತ್ಯಾಧುನಿಕ ಶೆಡ್ ನಿರ್ಮಾಣ ಮಾಡಿ ಅದರಲ್ಲಿ ರಾಗಿ, ಜೋಳ ಸೇರಿದಂತೆ ಮೊಳಕೆ ಪೈರನ್ನು ಆಹಾರವಾಗಿ ನೀಡುವ ಮೂಲಕ ನಾಟಿ ಕೋಳಿಗಳ ಪೋಷಣೆ ಮಾಡುತ್ತಿದ್ದಾರೆ.
ಕೋಳಿ ಸಾಕಾಣಣಿಕೆ ಮಾಡಿ ಯಶಸ್ವಿಯಾದ ರೈತ ಸಹೋದರರು
ಕ್ಯಾಲಿ, ಟರ್ಕಿ, ಅಸೀಲ್, ಗಿರಿರಾಜ, ಸುವರ್ಣದಾರ, ಕಡಕ್ ನಾಥ್, ಜಾಯ್ ಸೇರಿದಂತೆ ಸಾಕಷ್ಟು ವೈರಿಟಿಯ ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದು, ರೈತ ಸಹೋದರರು ಕೃಷಿಯ ಜೊತೆಗೆ ಕೋಳಿ ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ.
ಇನ್ನೂ ನಾಟಿ ಕೋಳಿ ಜೊತೆಗೆ ಆಧುನಿಕ ಬೇಸಾಯ ಪದ್ದತಿಯಲ್ಲಿ ಶೆಡ್ ನಿರ್ಮಾಣ ಮಾಡಿ ಹೊಸ ತಳಿಯ ಕುರಿಗಳನ್ನು ಕೂಡಾ ಪೋಷಣೆ ಮಾಡುತ್ತಿದ್ದಾರೆ. ಅದರಿಂದ ಕೈ ತುಂಬಾ ಆದಾಯವನ್ನು ಪಡೆಯುತ್ತಿದ್ದಾರೆ.
ಕೋಲಾರದಲ್ಲಿ ಫೆಬ್ರವರಿ 11, 12ರಂದು ಉದ್ಯೋಗ ಮೇಳ
5 ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ
ಮಾರುಕಟ್ಟೆಯಲ್ಲಿ ಗುಣಮಟ್ಟದ ಕೋಳಿ ಮಾಂಸಕ್ಕೆ ಹೆಚ್ಚು ಬೇಡಿಕೆ, ಜೊತೆಗೆ ಮಳೆ ಇಲ್ಲದೆ ಬೇಸಾಯದಲ್ಲಿ ನಷ್ಟವಾದಾಗ ವ್ಯವಸಾಯವನ್ನೇ ಬಿಡುವ ಬದಲಿಗೆ, ಹೀಗೆ ಮಿಶ್ರ ಬೇಸಾಯ ಮಾಡುವ ಮೂಲಕ ರೈತ ಸಹೋದರರು ಮಾದರಿಯಾಗಿದ್ದಾರೆ.
ತಮಗಿರುವ 5 ಎಕರೆ ಜಮೀನಿನಲ್ಲಿ ಹಿಂದಿನಿಂದಲೂ ಟೊಮ್ಯಾಟೋ, ಆಲೂಗಡ್ಡೆ, ತರಕಾರಿಗಳನ್ನು ಬೆಳಯುತ್ತಿದ್ದಾರೆ, ಸದ್ಯ ಉಪ ಕಸುಬಾಗಿರುವ ಕೋಳಿಯನ್ನ ಪೋಷಣೆ ಮಾಡಿ ಕೃಷಿಯೊಂದಿಗೆ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.
ಇತರ ರೈತರಿಗೂ ಮಾದರಿಯಾದ ಕೋಳಿ, ಕುರಿ ಸಾಕಾಣಿಕೆ
ಇನ್ನೂ ಕೆಲವು ರೈತ ನಾಯಕರಿಗೆ ವ್ಯವಸಾಯದ ಗಾಳಿ, ಗಂಧವೇ ಗೊತ್ತಿರಲ್ಲ, ಆದರೆ ಈ ರೈತ ನಾಯಕ ಶಿವಪ್ಪ ವ್ಯವಸಾಯಕ್ಕೂ ಸೈ, ಹೋರಾಟಕ್ಕೂ ಜೈ ಎನ್ನುತ್ತಾರೆ. ಇದು ನಮ್ಮ ಹಿರಿಯರಿಂದ ಬಂದಿರುವ ಬಳುವಳಿ ಹಾಗಾಗಿ ವ್ಯವಸಾಯದ ಜೊತೆಗೆ ಕುರಿ, ಕೋಳಿ ಸಾಕಾಣಿಕೆ ಮಾಡುವುದು ಉಪ ಕಸುಬು ಅಂತಾರೆ ರೈತ ರಾಮಕೃಷ್ಣ.
ಒಟ್ಟಿನಲ್ಲಿ ಬೆಲೆ ಬಂದಾಗ ಬೆಳೆ ಇರಲ್ಲ, ಬೆಳೆ ಇದ್ದಾಗ ಬೆಲೆ ಇರಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳವ ರೈತರ ಮಧ್ಯೆ, ವ್ಯವಸಾಯದ ಜೊತೆಗೆ ಉಪ ಕಸುಬನ್ನು ಮಾಡಿಕೊಂಡು ನೆಮ್ಮದಿಯ ಜೀವನ ಕಟ್ಟಿಕೊಂಡ ರೈತ ಸಹೋದರರು ನಿಜಕ್ಕೂ ಮಾದರಿಯಾಗಿದ್ದಾರೆ.