ಕೋಲಾರದಲ್ಲಿ ಮಳೆಯಿಂದ ಗೋಡೆ ಕುಸಿದು ಬಾಲಕ ಸಾವು
ಕೋಲಾರ, ಅಕ್ಟೋಬರ್ 24: ರಾಜ್ಯದಲ್ಲಿ ವಾರದಿಂದ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಅವಾಂತರಗಳು ಸೃಷ್ಟಿಯಾಗುತ್ತಿವೆ. ಕೋಲಾರ ಜಿಲ್ಲೆಯಲ್ಲಿ ಕೂಡ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮನೆಯ ಗೋಡೆ ಕುಸಿದು ಬಾಲಕನೊಬ್ಬ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಾತಮುತ್ತಕಪಲ್ಲಿ ಗ್ರಾಮದಲ್ಲಿ ಈ ಘಟನೆ ಅ.23ರ ರಾತ್ರಿ ನಡೆದಿದೆ. ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಾಲಕ ಹರೀಶ್ (13) ಎಂಬುವನು ಮೃತಪಟ್ಟಿದ್ದಾನೆ. ನಿರಂತರ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಮೊದಲೇ ತೇವಗೊಂಡಿತ್ತು. ರಾತ್ರಿ ವೇಳೆ ಮಳೆ ಮತ್ತಷ್ಟು ಹೆಚ್ಚಾಗಿ ಏಕಾಏಕಿ ಗೋಡೆ ಕುಸಿದುಬಿದ್ದಿದೆ.
ರಾಜ್ಯದಲ್ಲಿ ಇನ್ನೂ ಮೂರು ದಿನ ಅಬ್ಬರಿಸಲಿದೆ ಮಳೆ
Recommended Video
ಆ ಸಂದರ್ಭ ಮನೆಯೊಳಗೆ ಮಲಗಿದ್ದ ಬಾಲಕನ ಮೇಲೆ ಗೋಡೆ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಲಕನ ತಾಯಿ ಆನಂದಮ್ಮ ಅವರಿಗೂ ಗಂಭೀರ ಸ್ಬರೂಪದ ಗಾಯಗಳಾಗಿವೆ. ಹಳೆಯ ಮನೆಯಾಗಿದ್ದರಿಂದ ತೀವ್ರ ತೇವವಾಗಿ ಗೋಡೆಯು ಕುಸಿದುಬಿದ್ದಿದೆ. ತೀವ್ರ ಗಾಯಗೊಂಡಿರುವ ಆನಂದಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.