ತತ್ವಪದ ಗಾಯಕಿ, 112 ವರ್ಷದ ಸಾಕಲೋಳ್ಳ ವೆಂಕಟಮ್ಮ ನಿಧನ
ಶ್ರೀನಿವಾಸಪುರ (ಕೋಲಾರ ಜಿಲ್ಲೆ), ಮಾರ್ಚ್ 25: ಶತಾಯುಷಿ, ತತ್ವಪದ ಗಾಯಕಿ ಸಾಕಲೋಳ್ಳ ವೆಂಕಟಮ್ಮ ಮಾರ್ಚ್ 24ರ ರಾತ್ರಿ ಕಶೆಟ್ಟಿಪಲ್ಲಿಯ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. 112 ವರ್ಷ ತುಂಬು ಜೀವನ ನಡೆಸಿದ ಅವರು ಎರಡು ದಿನಗಳಿಂದ ತೀವ್ರ ಅಸ್ಥರಾಗಿದ್ದರು. ಮರಣ ಕಾಲದಲ್ಲಿಯೂ ನೆಮ್ಮದಿಯ ಬದುಕಿನ ನಾದ ಸಂಗಾತಿ ತಂಬೂರಿ ಅವರ ಬಳಿಯಲ್ಲಿಯೇ ಇತ್ತು.
ಬಾಲ ವಿಧವೆಯಾಗಿ ತವರು ಸೇರಿದ್ದ ಅವರು, ಊರಿನಲ್ಲಿ ಮಡಿವಾಳ ವೃತ್ತಿಯೊಂದಿಗೆ ಕೂಲಿ-ನಾಲಿ ಮಾಡಿಕೊಂಡು ಜೀವನವನ್ನು ಕಟ್ಟಿಕೊಂಡಿದ್ದರು. ತತ್ವಪದಗಳೊಂದಿಗೆ ಭಜನೆ ಗೀತೆಗಳನ್ನೂ ಹಾಡುತ್ತ ಮಠ, ದೇವಾಲಯಗಳಲ್ಲಿ ಗಾಯನ ಕೈಂಕರ್ಯ ನಡೆಸಿಕೊಂಡು ಬಂದಿದ್ದರು.
ನೂರಹತ್ತು ವರ್ಷದ ವನಸುಮ ಸಾಕಲೋಳ್ಳ ವೆಂಕಟಮ್ಮ
ಕೈವಾರ ತಾತಯ್ಯನವರಲ್ಲಿ ವಿಶೇಷ ಭಕ್ತಿ ಹೊಂದಿದ್ದ ವೆಂಕಟಮ್ಮ, ತಮ್ಮ ಸುಮಧುರ ಕೊರಳಿನಿಂದ ತಾತಯ್ಯವರ ತತ್ವಪದಗಳನ್ನು ಸುಮಾರು ತೊಂಬತ್ತು ವರ್ಷಗಳಿಂದ ಹಾಡಿಕೊಂಡು ಬಂದಿದ್ದರು. ತಾವು ಹಾಡುತ್ತಿದ್ದುದಲ್ಲದೆ ತಮ್ಮ ಮಗ ದೋಬಿ ಶ್ರೀನಿವಾಸು ಹಾಗು ಮಗಳು ಸಾವಿತ್ರಮ್ಮನವರಿಗೂ ಕಲಿಸಿದ್ದರು. ಒಂದು ಅರ್ಥದಲ್ಲಿ ತಮ್ಮ ಕುಟುಂಬವನ್ನೇ ತತ್ವಪದ, ಭಜನಾ ಗಾಯನ ಕಲೆಯ ನೆಲೆಯಾಗಿಸಿದ್ದರು.
ಸಾಯುವ ಮುನ್ನದ ನಾಲ್ಕಾರು ದಿನಗಳವರೆಗೂ ಹಾಡುತ್ತಲೇ ಇದ್ದ ವೆಂಕಟಮ್ಮ ತಮ್ಮ ಜೀವನವನ್ನೇ ಭಗವಂತನ ಕೀರ್ತನಾ ಸೇವೆಗೆ ಮೀಸಲಿಟ್ಟಿದ್ದರು. ತಮ್ಮ ಸಾತ್ವಿಕ ಗುಣಗಳಿಂದ ಊರಿನವರ ಗೌರವಕ್ಕೆ ಪಾತ್ರರಾಗಿದ್ದರು. ಇವರ ಬಗ್ಗೆ ಒನ್ಇಂಡಿಯಾ ಕನ್ನಡ ಜಾಲ ತಾಣ ವಿಶೇಷ ಲೇಖನವನ್ನು ಪ್ರಕಟಿಸಿತ್ತು.
ವೆಂಕಟಮ್ಮನವರನ್ನು ಶ್ರೀನಿವಾಸಪುರದ ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಅಭಿವೃದ್ಧಿ ಸಂಸ್ಥೆ ಹಿರಿಯ ನಾಗರಿಕರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿತ್ತು. ಸಾಹಿತಿ ಸ.ರಘುನಾಥ, ಡಾ. ವೈ.ವಿ.ವೆಂಕಟಾಚಲ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಶ್ವತ್ಥರೆಡ್ಡಿ, ಹಿರಿಯ ಜನಪದ ಗಾಯಕಿ ಮೇಲೂರಮ್ಮ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಕೆ.ವಿ.ರಮಣಾರೆಡ್ಡಿ, ಪೆದ್ದರೆಡ್ಡೋಳ್ಳ ಮುನಿರೆಡ್ಡಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಗಣೇಶ, ಕೆ.ಆರ್.ಬೀರೇಶ, ದೇವಮ್ಮ, ಅಂಗಡಿ ರತ್ನಮ್ಮ ಮುಂತಾದವರು ಅಂತಿಮ ದರ್ಶನ ಪಡೆದರು.
ಜಿಲ್ಲಾ ಸಂತಾನೋತ್ಪತ್ತಿ ಹಾಗೂ ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ. ಚಂದನ್ ಕುಮಾರ್, ಕೋಲಾರ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಎನ್.ಮುನಿವೆಂಕಟೇಗೌಡ, ಸಾಹಿತಿ ಆರ್.ಚೌಡರೆಡ್ಡಿ, ಹಸಿರು ಹೊನ್ನು ಬಳಗದ ಅಧ್ಯಕ್ಷ ಪಿ.ವಿ.ರಾಜಾರೆಡ್ಡಿ, ಬುರ್ರಕಥಾ ಕಲಾವಿದ ಎ.ಎಲ್.ವೆಂಕಟೇಶ ಮುಂತಾದವರು ವೆಂಕಟಮ್ಮನವರ ಆತ್ಮಕ್ಕೆ ಶಾಂತಿ ಕೋರಿದರು.