ಕಾಲ್ನಡಿಗೆಯಲ್ಲಿ ಭಾರತ ಸುತ್ತುತ್ತಿರುವ ಯುವಕ; ಹಣವಿಲ್ಲದೇ ಸೈಬೀರಿಯಾ ಮುಟ್ಟುವ ಗುರಿ!
ಕಾರವಾರ, ಅಕ್ಟೋಬರ್ 25: ಕೇವಲ 19 ವರ್ಷದ ಯುವಕ, ಮಹಾರಾಷ್ಟ್ರದ ನಾಗ್ಪುರ ಮೂಲದ ರೋಹನ್ ಅಗರ್ವಾಲ್ ಪಾದಯಾತ್ರೆ ಮೂಲಕವೇ ದೇಶವನ್ನು ಸುತ್ತಬೇಕು, ಜೊತೆಗೆ ಪುರಾತನ ಕಾಲದಲ್ಲಿ ಆಚರಣೆಯಲ್ಲಿದ್ದ ಗುರುಕುಲ ಪದ್ಧತಿಯ ಬಗ್ಗೆ ಜನರಿಗೆ ತಿಳಿಸಬೇಕು ಎನ್ನುವ ಗುರಿಯೊಂದಿಗೆ ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾನೆ.
ಇನ್ನೂ 19 ವರ್ಷದ ಯುವಕನಾಗಿರುವ ರೋಹನ್, ಕಾಲೇಜು ಓದಿಕೊಂಡಿದ್ದ. ಆದರೆ ಈತನಿಗೆ ದೇಶ ಸುತ್ತಬೇಕು ಎನ್ನುವ ಭಾವನೆ ಬೆಳೆಯಿತು. ಬಳಿಕ ತಡಮಾಡದೇ ಪವಿತ್ರ ಧಾರ್ಮಿಕ ಕ್ಷೇತ್ರದಿಂದ ತನ್ನ ಪ್ರಯಾಣವನ್ನು ಆರಂಭಿಸಿದ ಈತ, ಒಂದು ವರ್ಷದಲ್ಲಿ ಪಾದಯಾತ್ರೆ ಮೂಲಕವೇ 15 ರಾಜ್ಯಗಳನ್ನು ಸುತ್ತಿದ್ದಾನೆ. ಇಡೀ ದೇಶವನ್ನು ಪಾದಯಾತ್ರೆ ಮೂಲಕವೇ ಸುತ್ತಬೇಕು ಎನ್ನುವ ಹಂಬಲವಿರುವ ರೋಹನ್, ತನ್ನ ಯಾತ್ರೆಗೆ ಯಾವುದೇ ಹಣವನ್ನು ವ್ಯಯಿಸುತ್ತಿಲ್ಲ.
ಬೆನ್ನಿನ ಮೇಲೆ ದೊಡ್ಡದಾದ ಬ್ಯಾಗು, ಆ ಬ್ಯಾಗಿನ ಮೇಲೆ ಬೋರ್ಡೋಂದನ್ನು ಹಾಕಿಕೊಂಡು ರಸ್ತೆ ಮೇಲೆ ನಡೆದುಕೊಂಡೇ ಹೋಗುವ ಈತನನ್ನು ಕಂಡು ಮಾತನಾಡಿಸುವ ಜನರು, ಈತನ ಕುರಿತು ತಿಳಿದು ಅಚ್ಚರಿ ಪಡುತ್ತಿದ್ದಾರೆ.
2020ರ ಆಗಸ್ಟ್ 25ರಂದು ವಾರಣಾಸಿಯಿಂದ ತನ್ನ ಪಾದಯಾತ್ರೆ ಆರಂಭಿಸಿರುವ ರೋಹನ್, 420 ದಿನಗಳಲ್ಲಿ ಉತ್ತರಪ್ರದೇಶ, ರಾಜಸ್ತಾನ, ಹರಿಯಾಣ, ದೆಹಲಿ, ಮದ್ಯಪ್ರದೇಶ, ಕೇರಳ ಸೇರಿದಂತೆ ಸುಮಾರು 15 ರಾಜ್ಯಗಳಿಗೆ ಭೇಟಿ ನೀಡಿದ್ದಾನೆ. ಇದೀಗ ಕರ್ನಾಟಕದ ಕರಾವಳಿ ಮಾರ್ಗವಾಗಿ ಗೋವಾದತ್ತ ಪ್ರಯಾಣ ಬೆಳೆಸಿದ್ದು, ಕೇವಲ ಕಾಲ್ನಡಿಗೆ ಮೂಲಕವೇ ತನ್ನ ಯಾತ್ರೆಯನ್ನು ಕೈಗೊಳ್ಳಬೇಕು ಎಂದು ಯಾವುದೇ ಹಣವನ್ನು ವ್ಯಯಿಸದೇ ಪಾದಯಾತ್ರೆಯನ್ನು ಮುಂದುವರೆಸಿದ್ದಾನೆ.
ಇನ್ನು ಬಿ.ಕಾಂ ವಿದ್ಯಾರ್ಥಿಯಾಗಿದ್ದ ರೋಹನ್ನಿಗೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಸುವುದಕ್ಕಿಂತ ಹೊರಗಡೆ ತಿರುಗಾಡುವುದರಿಂದಲೇ ಹೆಚ್ಚಿನ ಜ್ಞಾನ ಸಿಗುತ್ತದೆ ಎನ್ನುವ ಅರಿವಾಗಿತ್ತು. ಹಿಂದಿನ ಕಾಲದಲ್ಲಿ ಗುರುಕುಲ ಪದ್ಧತಿಯಲ್ಲಿ ಪರ್ಯಟಣೆ ಮಾಡುವುದನ್ನೂ ಶಿಕ್ಷಣದ ಭಾಗವಾಗಿ ರೂಢಿಸಿಕೊಂಡಿದ್ದು, ಇದರಿಂದಾಗಿ ಹೆಚ್ಚಿನ ಜ್ಞಾನಾರ್ಜನೆಗೆ ಅನುಕೂಲವಾಗುತ್ತಿತ್ತು.
ಆದರೆ ಗುರುಕುಲ ಪದ್ದತಿಯ ಹೆಚ್ಚಿನ ಅಂಶಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲದಿರುವುದರಿಂದ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಹಣ ವ್ಯಯಿಸದೇ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಮಾನವೀಯತೆ ಇಂದಿಗೂ ಜೀವಂತವಾಗಿದೆ ಎನ್ನುವುದನ್ನು ತೋರಿಸಬೇಕು ಎನ್ನುವ ನಿಟ್ಟಿನಲ್ಲಿ ರೋಹನ್ ಪಾದಯಾತ್ರೆ ನಡೆಸುತ್ತಿದ್ದಾನೆ.
ಮಾರ್ಗಮಧ್ಯೆ ಜನರು ನೀಡುವ ಆಹಾರ ಸೇವಿಸುತ್ತಾ, ಸಿಕ್ಕಲ್ಲಿ ಆಶ್ರಯವನ್ನು ಪಡೆದು ಯಾತ್ರೆ ಮುಂದುವರೆಸುತ್ತಿದ್ದು, ರಸ್ತೆಯಲ್ಲಿ ಸವಾರರು ಕರೆದಲ್ಲಿ ಅವರಿಂದ ಲಿಫ್ಟ್ ಪಡೆದುಕೊಂಡು ಪ್ರಯಾಣ ನಡೆಸುತ್ತಿದ್ದಾನೆ. ಇನ್ನು ದೇಶವನ್ನು ಸುತ್ತಿದ ಬಳಿಕ ಇದುವರೆಗೆ ಯಾವುದೇ ಭಾರತೀಯ ಭೇಟಿ ನೀಡದ ವಿಶ್ವದ ಅತ್ಯಂತ ಶೀತಲಪ್ರದೇಶ ಸೈಬೀರಿಯಾಕ್ಕೆ ಪಾದಯಾತ್ರೆ ಮೂಲಕವೇ ತೆರಳಬೇಕು ಎನ್ನುವ ಗುರಿಯನ್ನು ಯುವಕ ಹೊಂದಿದ್ದು, ಕಿರಿಯ ವಯಸ್ಸಿನ ಯುವಕನಲ್ಲಿನ ಜ್ಞಾನಾರ್ಜನೆಯ ಹಂಬಲಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಹಿಂದಿನ ಗುರುಕುಲ ಪದ್ಧತಿಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಯುವಕನೋರ್ವ ಪಾದಯಾತ್ರೆ ಆರಂಭಿಸಿರುವುದು ನಿಜಕ್ಕೂ ಅಚ್ಚರಿ ಪಡುವಂತದ್ದು. ರಸ್ತೆಯೇ ನನ್ನ ವಿಶ್ವವಿದ್ಯಾಲಯ ಎನ್ನುವ ಗುರಿಯೊಂದಿಗೆ ಯಾತ್ರೆ ಮಾಡುತ್ತಿರುವ ಯುವಕ ಯಶಸ್ವಿಯಾಗಿ ಗುರಿ ಮುಟ್ಟಲಿ ಎಂದು ನಾವೂ ಕೂಡಾ ಹಾರೈಸೋಣ.
Recommended Video