ಸೋಂಕಿನ ಲಕ್ಷಣವಿದ್ದರೂ ಮದುವೆಗಾಗಿ ವಿಷಯ ಮುಚ್ಚಿಟ್ಟಿದ್ದೇ ತಪ್ಪಾಯ್ತು
ಕಾರವಾರ, ಜುಲೈ 1: ಮದುವೆಯಾದ ಕೆಲವೇ ದಿನಗಳಲ್ಲಿ ಮೃತಪಟ್ಟ ಭಟ್ಕಳ ಮೂಲದ ಯುವಕನಿಗೆ, ಕೊರೊನಾ ಸೋಂಕು ಇದ್ದುದಾಗಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.
Recommended Video
ಭಟ್ಕಳ ಮೂಲದ 25 ವರ್ಷದ ಯುವಕ ಓದಿದ್ದೆಲ್ಲ ಬೆಂಗಳೂರಿನಲ್ಲಿ. ಮಂಗಳೂರಿನಲ್ಲಿ ಅವರ ಕುಟುಂಬ ನೆಲೆಸಿತ್ತು. ಈತನ ವಿವಾಹ ಇತ್ತೀಚಿಗೆ ಭಟ್ಕಳದಲ್ಲಿ ನಡೆದಿತ್ತು. ವಾರದ ಹಿಂದೆ ಭಟ್ಕಳಕ್ಕೆ ಬಂದು ಮದುವೆಯ ಕಾರಣಕ್ಕೆ ನಾಲ್ಕೈದು ದಿನ ಇಲ್ಲೇ ಇದ್ದು, ಮದುವೆ ಬಳಿಕ ಎಲ್ಲರೂ ಮಂಗಳೂರಿಗೆ ತೆರಳಿದ್ದರು.
ಬಳಿಕ ಯುವಕ ಮಂಗಳೂರಿನ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಮೃತಪಟ್ಟಿದ್ದಾನೆ. ಈತನ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಆದರೆ ವರದಿ ಬರುವ ಮುನ್ನವೇ ಈತ ಸಾವನ್ನಪ್ಪಿದ್ದಾನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಂದ ಮೊದಲ ಸಾವು
ಈತನ ಸಂಪರ್ಕಕ್ಕೆ ಬಂದ ಹಲವರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಸೋಂಕಿನ ಲಕ್ಷಣವಿದ್ದೂ ವಿಷಯ ಮುಚ್ಚಿಟ್ಟು ಮದುವೆ ಕಾರ್ಯಕ್ರಮ ನಡೆಸಿದ್ದ ಕಾರಣಕ್ಕೆ ಮೃತ ಯುವಕನ ಕಡೆಯವರ ಮೇಲೆ ದೂರು ದಾಖಲಿಸಲಾಗುವುದು ಎಂದು ಹೇಳಿದ್ದಾರೆ. 25 ವರ್ಷದ ಯುವಕನಿಗೆ ಮದುವೆ ಬಿಟ್ಟು ಸೋಂಕಿನ ಮಾಹಿತಿ ನೀಡಿ ಚಿಕಿತ್ಸೆ ಕೊಡಿಸಿದ್ದರೆ ಆತ ಬದುಕುಳಿಯುವ ಅವಕಾಶ ಇತ್ತು. ಆದರೆ, ಅದನ್ನು ಮುಚ್ಚಿಟ್ಟು ಮದುವೆ ಮಾಡಿಸಿದ್ದಾರೆ. ಈ ಮೂಲಕ ಇತರರ ಜೀವವನ್ನು ಕೂಡ ಸಂಕಷ್ಟದಲ್ಲಿ ನೂಕಿದ್ದಾರೆ. ಈ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಅನ್ವಯ ಎಫ್ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.