ಯಲ್ಲಾಪುರ ಭೂಕುಸಿತ: ಯುವತಿಯ ಮದುವೆ ಕನಸು "ಮಣ್ಣು'ಪಾಲು
ಕಾರವಾರ, ಮಾರ್ಚ್ 8: ಆಕೆಯ ಮದುವೆಗೆಂದು ಮನೆಯವರು ಬೆಳಿಗ್ಗೆಯಷ್ಟೇ ಕೊಲ್ಲಾಪುರಕ್ಕೆ ತೆರಳಿ, ಹುಡುಗನ ಮನೆಯಲ್ಲಿ ಮಾತುಕತೆ ನಡೆಸಿ ಬಂದಿದ್ದರು. ಏಪ್ರಿಲ್ನಲ್ಲಿ ಮದುವೆಗೆ ದಿನ ನಿಗದಿಪಡಿಸಿದ್ದಲ್ಲದೇ, ಆಕೆಯ ಮದುವೆಗಾಗಿ ಆಭರಣಗಳನ್ನೂ ಖರೀದಿಸಿಟ್ಟಿದ್ದರು. ಆದರೆ ವಿಧಿಯ ಆಟವೇ ಬೇರೆ ಇತ್ತು. ಕೂಲಿ ಕೆಲಸಕ್ಕೆಂದು ಇತರ ಏಳು ಮಂದಿ ಕಾರ್ಮಿಕರೊಂದಿಗೆ ಕೆಲಸಕ್ಕೆ ತೆರಳಿದಾಕೆ ಧರೆ ಕುಸಿದು ಮಸಣದ ಹಾದಿ ಹಿಡಿದಿದ್ದಾಳೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಇಡಗುಂದಿಯ ಸಂತೇಬೈಲ್ನಲ್ಲಿ ಸೋಮವಾರ (ಮಾ.8) ತೋಟದ ಕೆಲಸ ಮಾಡುವಾಗ ಧರೆ ಕುಸಿದು ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಪೈಕಿ ಭಾಗ್ಯಶ್ರೀ ಎಡಗೆ ತನ್ನ ಕುಟುಂಬದ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡಿಕೊಂಡಿದ್ದವಳಾಗಿದ್ದು, ಇದೀಗ ಈಕೆಯ ಸಾವಿನಿಂದಾಗಿ ಕುಟುಂಬದ ಆಧಾರ ಸ್ತಂಭವನ್ನೇ ಕಳೆದುಕೊಂಡಂತಾಗಿದೆ.
ಯಲ್ಲಾಪುರದಲ್ಲಿ ಧರೆ ಕುಸಿದು ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವು!
ನೀರು ಕುಡಿಯಲು ಕುಳಿತಿದ್ದರು
ಕಳೆದ ಹದಿನೈದು ದಿನಗಳಿಂದ ಯಲ್ಲಾಪುರ ತಾಲೂಕಿನ ಇಡಗುಂದಿ ಸಂತೇಬೈಲ್ನ ಮಂಜುನಾಥ ಭಟ್ಟ ಎನ್ನುವವರ ತೋಟದಲ್ಲಿ ಈ ಏಳು ಮಂದಿ ಕೆಲಸ ಮಾಡುತ್ತಿದ್ದರು. ಪ್ರತಿ ದಿನ ಬೆಳಿಗ್ಗೆ ಗೌಳಿವಾಡದಿಂದ ಜೀಪಿನಲ್ಲಿ ಬಂದು ತೋಟದಲ್ಲಿ ಕೆಲಸ ಮಾಡಿ ವಾಪಸ್ಸು ಅದೇ ಜೀಪಿನಲ್ಲಿ ಮನೆಗಳಿಗೆ ತೆರಳುತ್ತಿದ್ದರು. ಸೋಮವಾರ ಕೆಲಸಕ್ಕೆ ಬಂದವರಲ್ಲಿ ಮೂವರು ಧರೆಯಿಂದ ಸ್ವಲ್ಪವೇ ದೂರದಲ್ಲಿ ಕುಳಿತಿದ್ದರೆ, ನಾಲ್ವರು ತೆರವು ಮಾಡಿದ್ದ ಧರೆಯಲ್ಲಿ ಉಳಿದಿದ್ದ ಅಲ್ಪಸ್ವಲ್ಪ ಗುಡ್ಡದ ಮಣ್ಣಿನ ಕೆಳಗೆ ನೀರು ಕುಡಿದು, ಬಿಸಿಲಿನಿಂದ ಆಶ್ರಯ ಪಡೆಯಲೆಂದು ಕುಳಿತಿದ್ದರು. ಇದೇ ವೇಳೆಗೆ ಧರೆ ಏಕಾಏಕಿ ನಾಲ್ವರ ಮೇಲೂ ಕುಸಿದಿದೆ.
ಒಂದೇ ಕುಟುಂಬದ ಮೂವರು ಸಾವು
ಗೌಳಿವಾಡದ ಬಡ ಗೌಳಿ ಸಮುದಾಯದವರು ಹೆಚ್ಚೇನೂ ವಿದ್ಯಾಭ್ಯಾಸ ಬಲ್ಲವರಲ್ಲ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವವರು. ಅದರಂತೆ ತೋಟಕ್ಕೆ ಕೆಲಸಕ್ಕೆಂದು ಬಂದಿದ್ದ ಏಳು ಮಂದಿಯಲ್ಲಿ ಮೃತಪಟ್ಟ ಲಕ್ಷ್ಮೀ (38), ಸಂತೋಷ್ (18) ಹಾಗೂ ಮಾಳು ಡೋಯಿಪಡೆ (21) ಮೂವರೂ ಒಂದೇ ಕುಟುಂಬದವರು. ಮಂಗಳವಾರ ಗೌಳಿವಾಡದ ಗ್ರಾಮ ದೇವರಾದ ವಿಠಲ ರುಕ್ಮಾಯಿ ಜಾತ್ರೆ ಇತ್ತು. ಸಂಪ್ರದಾಯದ ಪ್ರಕಾರ ಯಾರೂ ಕೂಡ ಕೆಲಸಕ್ಕೆ ಅಥವಾ ಊರಿನಿಂದ ಹೊರ ಹೋಗದೆ, ಜಾತ್ರೆಯ ಸಿದ್ಧತೆಯಲ್ಲಿ ಭಾಗಿಯಾಗಬೇಕಿತ್ತು. ಆದರೂ ಇಂದು ಕೆಲಸಕ್ಕೆಂದು ಏಳು ಮಂದಿಯೂ ಬಂದಿದ್ದರು.
ಸಚಿವ ಶಿವರಾಮ ಹೆಬ್ಬಾರ್ ಸಂತಾಪ
ಕೂಲಿ ಕಾರ್ಮಿಕರ ಸಾವಿಗೆ ಕಾರ್ಮಿಕ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ನಾಲ್ವರು ಕಾರ್ಮಿಕರು ಸಾವನ್ನಪ್ಪಿದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಮೃತರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬ ವರ್ಗದವರಿಗೆ ಅಗಲಿಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಅವರು ತಿಳಿಸಿದ್ದಾರೆ.
Recommended Video
ಮೂವರು ಚಿಕ್ಕ ವಯಸ್ಸಿನವರು
ಧರೆ ಕುಸಿತದಿಂದ ಮೃತಪಟ್ಟವರಲ್ಲಿ ಮೂವರು ಚಿಕ್ಕ ವಯಸ್ಸಿನವರಾಗಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಪಾಲಕರು ಹೆಚ್ಚು ಪ್ರಯತ್ನಿಸಬೇಕೇ ಹೊರತು ಅವರಿಂದ ಕೂಲಿ ಕೆಲಸ ಮಾಡಿಸಬಾರದು. ಕೂಲಿಯ ಸಮಯದಲ್ಲೂ ಮಾಲೀಕರು ಕಾರ್ಮಿಕರ ಸುರಕ್ಷತೆಗೆ ಕ್ರಮ ವಹಿಸಿರಬೇಕು ಎಂದು ಕಿರವತ್ತಿ ಗ್ರಾಮ ಪಂಚಾಯತಿ ಹೊಸಾಳಿ ವಾರ್ಡ್ ಸದಸ್ಯ ಸುನೀಲ್ ಕಾಂಬ್ಳೆ ಆಗ್ರಹಿಸಿದ್ದಾರೆ.