ಉತ್ತರ ಕನ್ನಡದ ಪ್ರಭಾವಿ ನಾಯಕ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ?
ಕಾರವಾರ, ಸೆಪ್ಟೆಂಬರ್ 12; ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ರಾಜಕೀಯದಲ್ಲಿ ಬದಲಾವಣೆಯ ಸುದ್ದಿ ಹಬ್ಬಿದೆ. ಮಾಜಿ ಶಾಸಕ, ಪ್ರಭಾವಿ ನಾಯಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.
ವಲಸಿಗರು ಮತ್ತು ಮೂಲ ಬಿಜೆಪಿಗರ ನಡುವಿನ ಕಾಳಗಕ್ಕೆ ಯಲ್ಲಾಪುರ ಸಾಕ್ಷಿಯಾಗಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಮಾಜಿ ಶಾಸಕ ವಿ. ಎಸ್. ಪಾಟೀಲ್ ಬಿಜೆಪಿ ತೊರೆದು ಕಾಂಗ್ರೆಸ್ನತ್ತ ಹೊರಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ ಎಂದು ಚರ್ಚೆಗಳು ನಡೆದಿವೆ.
Breaking; ಬಿಜೆಪಿ ತೊರೆದು ಕಾಂಗ್ರೆಸ್ಗೆ ಮರಳಿದ ಎಚ್. ಆರ್. ಗವಿಯಪ್ಪ
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ಶಿವರಾಮ್ ಹೆಬ್ಬಾರ್ಗೆ ವಿ. ಎಸ್. ಪಾಟೀಲ್ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಬಳಿಕ ಅವರಿಗೆ ಸರಿಯಾದ ಗೌರವ, ಸ್ಥಾನಮಾನ ಸಿಕ್ಕಿಲ್ಲ ಎಂಬುದು ಚರ್ಚೆಯ ವಿಚಾರವಾಗಿದೆ. ಇದರಿಂದಾಗಿ ಅವರ ಅಭಿಮಾನಿಗಳು ಸಹ ಬೇಸರಗೊಂಡಿದ್ದಾರೆ ಇದರಿಂದಾಗಿ ಕಾಂಗ್ರೆಸ್ ಕಡೆ ಜನರು ವಾಲುತ್ತಿದ್ದಾರೆ.
ಕಾರವಾರ- ಅಂಕೋಲಾ ಕ್ಷೇತ್ರ: ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ; ಆನಂದ್ ಅಸ್ನೋಟಿಕರ್
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದ ವಿ. ಎಸ್. ಪಾಟೀಲ್ ಅಧಿಕಾರ ರದ್ದುಪಡಿಸಿ ಆಗಸ್ಟ್ ತಿಂಗಳಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದರು. 2023ರ ಚುನಾವಣೆ ಮೇಲೆ ಕಣ್ಣಿಟ್ಟಿರುವ ವಿ. ಎಸ್. ಪಾಟೀಲರು ಕಾಂಗ್ರೆಸ್ ಸೇರಲಿದ್ದಾರೆ? ಎಂಬ ಸುದ್ದಿಗಳು ಈಗ ಬಲವಾಗಿ ಕೇಳಿ ಬರುತ್ತಿವೆ.
ಜೆಡಿಎಸ್ ನಿಂದ ಆನಂದ್ ಅಸ್ನೋಟಿಕರ್ ದೂರ ದೂರ!
2018ರ ಚುನಾವಣೆ ಫಲಿತಾಂಶ
2018ರ ವಿಧಾನಸಭೆ ಚುನಾವಣೆಯಲ್ಲಿ ಅರೆಬೈಲು ಶಿವರಾಮ್ ಹೆಬ್ಬಾರ್ ಯಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 66,290 ಮತಗಳನ್ನು ಪಡೆದು ಜಯಗಳಿಸಿದರು. ಆಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ. ಎಸ್. ಪಾಟೀಲ್ 64,807 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದ್ದರು.
ಆದರೆ 2019ರಲ್ಲಿ ರಾಜಕೀಯ ಚಿತ್ರಣ ಬದಲಾಯಿತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವರಾಮ್ ಹೆಬ್ಬಾರ್ ಬಿಜೆಪಿಗೆ ಬಂದರು. ಉಪ ಚುನಾವಣೆಯಲ್ಲಿ ವಿ. ಎಸ್. ಪಾಟೀಲ್ ಕ್ಷೇತ್ರ ಬಿಟ್ಟುಕೊಟ್ಟರು. ಉಪ ಚುನಾವಣೆ ಗೆದ್ದ ಹೆಬ್ಬಾರ್ ಸಚಿವರಾದರು. ಆದರೆ ಪಾಟೀಲ್ಗೆ ಸರಿಯಾದ ಗೌರವ ಸಿಗಲಿಲ್ಲ.
ಪ್ರಭಾವಿ ನಾಯಕ ಕಾಂಗ್ರೆಸ್ಗೆ
ಮಾಜಿ ಶಾಸಕ ವಿ. ಎಸ್. ಪಾಟೀಲ್ ಸಂಭಾವಿತ ರಾಜಕಾರಣಿ. ಮೊದಲ ಬಾರಿ ಶಾಸಕರಾಗಿದ್ದಾಗಲೇ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಶಿವರಾಮ್ ಹೆಬ್ಬಾರ್ಗೆ ಕ್ಷೇತ್ರ ತ್ಯಾಗ ಮಾಡಿದರೂ ಅವರಿಗೆ ಸರಿಯಾದ ಗೌರವ ಸಿಗಲಿಲ್ಲ ಎಂಬ ಅನುಕಂಪ ಜನರಲ್ಲಿದೆ.
ವಿ. ಎಸ್. ಪಾಟೀಲ್ ಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಅವರು 64,807 ಮತಗಳನ್ನು ಪಡೆದಿದ್ದು ಸಹ ಇದಕ್ಕೆ ಸಾಕ್ಷಿಯಾಗಿದೆ. ಈಗ ಅವರು ಕಾಂಗ್ರೆಸ್ ಸೇರಿದರೆ ಪಕ್ಷಕ್ಕೆ ಸಹ ಲಾಭವಾಗಲಿದೆ.
ಬಿಜೆಪಿಗೆ ಭಾರೀ ಹಿನ್ನಡೆ ನಿರೀಕ್ಷೆ
ಯಲ್ಲಾಪುರ ಕ್ಷೇತ್ರದ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಾರ್ಮಿಕ ಸಚಿವರು. ಒಂದು ವೇಳೆ ವಿ. ಎಸ್. ಪಾಟೀಲ್ ಕಾಂಗ್ರೆಸ್ ಸೇರಿದರೆ ಕ್ಷೇತ್ರದಲ್ಲಿ 2023ರ ಚುನಾವಣೆಯ ಬಿಜೆಪಿಗೆ ಭಾರೀ ಸವಾಲು ಎದುರಾಗಲಿದೆ.
ಹಳ್ಳಿ-ಹಳ್ಳಿಗಳಲ್ಲಿ ವಿ. ಎಸ್. ಪಾಟೀಲ್ ಉತ್ತಮ ಸಂಪರ್ಕ ಹೊಂದಿದ್ದಾರೆ. 2019ರ ಡಿಸೆಂಬರ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ ಗೆಲುವಿನಲ್ಲೂ ಪಾಟೀಲ್ ಪ್ರಭಾವ ಇತ್ತು ಎಂಬುದನ್ನು ಜನರು ಸಹ ಅಲ್ಲೆಗಳೆಯುತ್ತಿಲ್ಲ. ಆದ್ದರಿಂದ ಕ್ಷೇತ್ರದ ರಾಜಕೀಯ ಈಗ ಕುತೂಹಲ ಹುಟ್ಟುಹಾಕಿದೆ.
ಅನುಕಂಪ, ಅಭಿಮಾನದ ಮತಗಳು
ವಿ. ಎಸ್. ಪಾಟೀಲ್ಗೆ ಅಭಿಮಾನ ಮತ್ತು ಅನುಕಂಪದ ಮತಗಳು ಸಿಗುತ್ತವೆ. ಅಲ್ಲದೇ ಕ್ಷೇತ್ರದ ಲಿಂಗಾಯತ ಮತಗಳು ಮುಂದಿನ ಸಲ ಬಿಜೆಪಿಗೆ ಹೋಗುವುದು ಅನುಮಾನ ಎಂಬುದು ಸದ್ಯ ಚಾಲ್ತಿಯಲ್ಲಿರುವ ಮಾತು. ವಿ. ಎಸ್. ಪಾಟೀಲ್ ಕಾಂಗ್ರೆಸ್ ಸೇರಿ ಟಿಕೆಟ್ ಘೋಷಣೆಯಾದರೆ ಯಲ್ಲಾಪುರದ ಚಿತ್ರಣವೇ ಬದಲಾಗಲಿದೆ ಎನ್ನುತ್ತಾರೆ ಜನರು.
ಸಚಿವ ಶಿವರಾಮ್ ಹೆಬ್ಬಾರ್ ಮೇಲೆ ಮುನಿಸಿಕೊಂಡ ಅನೇಕರು ಇದ್ದಾರೆ, ಅವರು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. ವಿ. ಎಸ್. ಪಾಟೀಲರು ಕಾಂಗ್ರೆಸ್ ಸೇರಿದರೆ, ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ.