ಜು. 26ಕ್ಕೆ ಉತ್ತರ ಕನ್ನಡಕ್ಕೆ ಸಿಎಂ; ಅಧಿಕಾರ ಕಳೆದುಕೊಳ್ಳಲಿದ್ದಾರಾ?
ಕಾರವಾರ, ಜುಲೈ 25; ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವುದರ ನಡುವೆಯೇ ಬಿ. ಎಸ್. ಯಡಿಯೂರಪ್ಪ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಹಲವು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಯಡಿಯೂರಪ್ಪರ ಉತ್ತರ ಕನ್ನಡ ಪ್ರವಾಸಕ್ಕೆ ಹಲವು ಬಾರಿ ದಿನ ನಿಗದಿಯಾಗಿದ್ದರೂ ಕಾರಣಾಂತರಗಳಿಂದ ರದ್ದುಪಡಿಸಿ, ಮುಂದೂಡಲಾಗುತ್ತಿತ್ತು. ತೀರಾ ಇತ್ತೀಚೆಗೆ ಜುಲೈ 16ರಂದು ಕೂಡ ಅವರು ಕಾರವಾರಕ್ಕೆ ಭೇಟಿ ನೀಡಿ, ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸ್ಥಳೀಯ ಬಿಜೆಪಿ ನಾಯಕರು ತಿಳಿಸಿದ್ದರು.
ಭಾರೀ ಮಳೆ; ಜನರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಚ್ಚರಿಕೆ
ಅದರಂತೆ ಅಧಿಕೃತವಾಗಿ ಸಿಎಂ ಕಚೇರಿಯಿಂದಲೂ ಯಡಿಯೂರಪ್ಪ ಭೇಟಿ ನೀಡಲಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಮುಖ್ಯಮಂತ್ರಿ ಸ್ವಾಗತಕ್ಕಾಗಿ ಬಹುತೇಕ ಸಿದ್ಧತೆ ಪೂರ್ಣಗೊಳಿಸಿಕೊಂಡಿದ್ದರು.
ಪಿಎಂ ಜೊತೆ ಸಭೆ ನಿಗದಿ; ಸಿಎಂ ಕಾರವಾರ ಭೇಟಿ ಮುಂದೂಡಿಕೆ
ಆದರೆ ಪ್ರಧಾನಿಯೊಂದಿಗೆ ಅಂದು ಸಭೆ ನಿಗದಿಯಾದ ಕಾರಣ ಸಿಎಂ ಪ್ರವಾಸ ನಿಗದಿಯಾಗಿದ್ದ ದಿನಕ್ಕೂ ಎರಡೇ ದಿನ ಮುಂಚೆ ಕಾರ್ಯಕ್ರಮ ಮುಂದೂಡಿ ಸಿಎಂ ಕಚೇರಿಯಿಂದ ಮಾಹಿತಿ ನೀಡಲಾಗಿತ್ತು. ಆದರೆ ಜುಲೈ 23ಕ್ಕೆ ಯಡಿಯೂರಪ್ಪ ಬರಲಿದ್ದಾರೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದರು.
ಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿ
ಅಂತಿಮವಾಗಿ ಅಂದು ಕೂಡ ಬರದೇ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸುದ್ದಿಯಲ್ಲಿರುವ ಕಾರಣ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ ಇಂದು ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಯಡಿಯೂರಪ್ಪ ದಿಢೀರ್ ಆಗಿ ಸುದ್ದಿಗೋಷ್ಠಿಯಲ್ಲಿ 'ಸಾಧ್ಯವಾದರೆ ಕಾರವಾರಕ್ಕೆ ಜುಲೈ 26ರಂದು ಮಧ್ಯಾಹ್ನ ಭೇಟಿ ನೀಡುತ್ತೇನೆ' ಎಂದು ತಿಳಿಸಿದ್ದಾರೆ.
ಸ್ಥಾನ ಕಳೆದುಕೊಳ್ಳುವ ಆತಂಕ; ಉತ್ತರ ಕನ್ನಡಕ್ಕೆ ಈ ಹಿಂದೆ ಭೇಟಿ ನೀಡಿದ್ದ ಬಹುತೇಕ ಮುಖ್ಯಮಂತ್ರಿಗಳು ಅಲ್ಪಾವಧಿಯ ಅಧಿಕಾರ ನಡೆಸಿ ಸ್ಥಾನ ಕಳೆದುಕೊಂಡಿರುವ ಇತಿಹಾಸವಿದೆ. ಜಗದೀಶ್ ಶೆಟ್ಟರ್, ಎಚ್. ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿ ತೆರಳಿದ ಕೆಲವೇ ದಿನ/ ತಿಂಗಳುಗಳಲ್ಲಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದರು.
ಒಂದಿಲ್ಲೊಂದು ವಿವಾದದಲ್ಲಿ ಸ್ಥಾನ ಕಳೆದುಕೊಂಡವರೇ ಹೆಚ್ಚು. ಯಡಿಯೂರಪ್ಪ ಕೂಡ ದಶಕಗಳ ಹಿಂದೆ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲೇ ಜಿಲ್ಲೆಗೆ ಭೇಟಿ ನೀಡಿ, ಕೆಲ ಸಮಯದಲ್ಲೇ ಅಧಿಕಾರ ಕಳೆದುಕೊಂಡಿದ್ದರು.
ಈಗಾಗಲೇ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ವಿಚಾರ ಸುದ್ದಿಯಲ್ಲಿದ್ದು, ಯಡಿಯೂರಪ್ಪ ಕೂಡ ಕಾರವಾರ ಭೇಟಿ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ತೆರಳಿದ ಬಳಿಕವೇ ರಾಜೀನಾಮೆ ನೀಡಲಿದ್ದಾರೆ ಅಥವಾ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಅಭಿಪ್ರಾಯ ಸ್ಥಳೀಯರದ್ದು.
ಅದೇನೆ ಆಗಲಿ, ಈವರೆಗೂ ಸಿಎಂ ಉತ್ತರ ಕನ್ನಡ ಪ್ರವಾಸ ದೃಢಪಟ್ಟಿಲ್ಲ. ದೃಢಪಟ್ಟು, ಭೇಟಿ ನೀಡಿದ ಬಳಿಕ ಮುಂದೇನಾಗಲಿದೆ? ಎಂಬುದನ್ನು ಕಾದು ನೋಡಬೇಕಿದೆ.
Recommended Video