ಪ್ರಸಂಗ ಮುಗಿಸಿ ಹೊರಟ ಹೊಸ್ತೋಟ ಮಂಜುನಾಥ ಭಾಗವತರು
ಶಿರಸಿ, ಜನವರಿ 7: ನಡೆದಾಡುವ ಯಕ್ಷಗಾನದ ಕೋಶ ಎಂದೇ ಕರೆಸಿಕೊಂಡಿದ್ದ ಹೊಸ್ತೋಟ ಮಂಜುನಾಥ ಭಾಗವತರು (80) ಮಂಗಳವಾರ ತಮ್ಮ ಜೀವನ ಎಂಬ ಕೊನೆಯ ಪ್ರಸಂಗವನ್ನು ಮುಗಿಸಿ ಸ್ವರ್ಗಸ್ಥರಾದರು.
ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು ಮಂಗಳವಾರ ಮಧ್ಯಾಹ್ನ 2.45ಕ್ಕೆ ಚಿರನಿದ್ದೆಗೆ ತೆರಳಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶಿರಸಿ ತಾಲ್ಲೂಕಿನ ವಾನಳ್ಳಿ ಸಮೀಪದ ಮೋತಿಗುಡ್ಡದಲ್ಲಿ ನೆಲೆಸಿದ್ದರು. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚೇತರಿಸಿಕೊಂಡ ಬಳಿಕ ಸೋಂದಾ- ಹಳೆಯೂರಿನಲ್ಲಿರುವ ಶ್ರೀಪಾದ ಜೋಶಿ ಬಾಡಲಕೊಪ್ಪ ಅವರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು.
ಯಕ್ಷಗಾನ ಕ್ಷೇತ್ರದ ಖ್ಯಾತ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಇನ್ನಿಲ್ಲ
ಶಿರಸಿ ಸಮೀಪದ ಹನುಮಂತಿ ಗ್ರಾಮದಲ್ಲಿ ಜನಿಸಿದ ಅವರು ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. ಭಾಗವತಿಕೆಯನ್ನೇ ಉಸಿರಾಗಿಸಿಕೊಂಡಿದ್ದ ಅವರು ಕಾರವಾರದ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ಪ್ರಭಾನಂದ ಜೀ ಅವರಿಂದ ಅಧ್ಯಾತ್ಮಿಕ ದೀಕ್ಷೆ ಪಡೆದು ಒಂದು ವರ್ಷ ಆಶ್ರಮವಾಸ ಮಾಡಿದರು. ಮುಂದೆ ಹೊಸ್ತೋಟ ಮಂಜುನಾಥ ಭಾಗವತರು ಪರಿವ್ರಾಜಕರಾಗಿ ತಮ್ಮ ಸಂಪೂರ್ಣ ಸೇವೆಯನ್ನು ಯಕ್ಷಗಾನಕ್ಕೆ ಮುಡಿಪಾಗಿರಿಸಿದ್ದರು. ಭಾಗವತಿಕೆ, ನೃತ್ಯ, ಚಂಡೆ, ಮದ್ದಳೆ, ವೇಷಗಾರಿಕೆಯಲ್ಲಿ ಅವರು ಅಪಾರ ಅನುಭವ ಪಡೆದಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ, ಆಳ್ವಾಸ್ ನುಡಿಸಿರಿ ಪುರಸ್ಕಾರ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
ಶ್ರೀಗುರು ಭಾಗವತದ ಕನ್ನಡ ಅವತರಣಿಕೆ, ವಿಶೇಷ ಡೈರಿ ಲೋಕಾರ್ಪಣೆ
ಅವರ ಅಂತ್ಯಕ್ರಿಯೆಯನ್ನು ಶಿರಸಿ ನಗರದ ಹೊಟೇಲ್ ಸಾಮ್ರಾಟ್ ಎದುರುಗಡೆ ಇರುವ ಸದ್ಗತಿ - ವಿದ್ಯಾನಗರ ರುದ್ರಭೂಮಿಯಲ್ಲಿ ಇಂದು ರಾತ್ರಿ 9.30ಕ್ಕೆ ನೆರವೇರಿಸಲಾಗುವುದು.