ಗೋ ರಕ್ಷಕರು ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿದ್ದು ಏಕೆ?
ಕಾರವಾರ, ಮೇ 21 : ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ತಪ್ಪು ಭಾವಿಸಿ, ಡೈರಿಗೆ ಗೋವುಗಳನ್ನು ಸಾಗಿಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಬಸ್ತಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಗೋಗಳ್ಳತನ ವಿರುದ್ದ ಅಮರಣಾಂತ ಉಪವಾಸ, ರಾಜಾರಾಂ ಭಟ್ ಆಸ್ಪತ್ರೆಗೆ
ಗಿರ್ ತಳಿಗೆ ಸೇರಿದ ಕರುಗಳನ್ನೂ ಒಟ್ಟುಗೂಡಿ 22 ಗೋವುಗಳನ್ನು ಗುಜರಾತ್ ನಿಂದ ಕೇರಳದ ಹಾಲಿನ ಡೈರಿಗೆ ಎರಡು ಲಾರಿಗಳಲ್ಲಿ ಭಟ್ಕಳದ ಮೂಲಕ ರಾತ್ರಿ ಸಾಗಾಟ ಮಾಡಲಾಗುತ್ತಿತ್ತು. ಇದನ್ನು ತಪ್ಪು ಭಾವಿಸಿದ ಸ್ಥಳೀಯ ಗೋ ರಕ್ಷಕರು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದರೆಂದು ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಲಾರಿಗಳಿಗೆ ಕಲ್ಲುಗಳನ್ನು ಹೊಡೆದು, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಹರಿಬಿಟ್ಟಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಗೋವುಗಳನ್ನು ಹಾಲಿನ ಡೈರಿಗೆ ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ.
ಕೇರಳದ ಅರುಣ ಕುಮಾರ್ ಎಂಬುವವರಿಗೆ ಸೇರಿದ ಡೈರಿಗೆ ಈ ಗೋವುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಹಲ್ಲೆ ನಡೆಸಿದ 20ಕ್ಕೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಿಸಿಕೊಂಡು, 11 ಮಂದಿಯನ್ನು ಬಂಧಿಸಿದ್ದೇವೆ ಎಂದು ಭಟ್ಕಳ ಸಿಪಿಐ ತಿಳಿಸಿದರು.