ಕಾಮಗಾರಿ ಮುಗಿಸಿದ ಬಳಿಕ ಟೆಂಡರ್ ಕರೆದ ಕಾರವಾರ ನಗರಸಭೆ: ಅವ್ಯವಹಾರದ ಶಂಕೆ
ಕಾರವಾರ, ಜೂ30: ಸಾಮಾನ್ಯವಾಗಿ ಯಾವುದೇ ಸರ್ಕಾರಿ ಕಾಮಗಾರಿ ಕೈಗೊಳ್ಳುವ ಮೊದಲು ಟೆಂಡರ್ ಕರೆಯಲಾಗುತ್ತದೆ. ಆ ಬಳಿಕವೇ ಕೆಲಸ ನೀಡಲಾಗುತ್ತದೆ. ಆದರೆ ಕಾರವಾರ ನಗರಸಭೆಯಲ್ಲಿ ಸುಮಾರು 179 ಕಾಮಗಾರಿಗಳನ್ನು ಬಹುತೇಕ ಕೆಲಸ ಪೂರ್ಣಗೊಂಡ ಬಳಿಕ ಟೆಂಡರ್ ಕರೆಯಲಾಗಿದ್ದು ಅವ್ಯವಹಾರದ ಶಂಕೆ ವ್ಯಕ್ತವಾಗಿದೆ.
ಹೌದು, ನಗರಸಭಾ ಕಾರ್ಯಾಲಯದಿಂದ ಏಪ್ರಿಲ್ 5 ರಂದು ಮತ್ತು ಮೇ 9 ರಂದು ಎರಡು ಟೆಂಡರ್ ಕರೆಯಲಾಗಿತ್ತು. ಸುಮಾರು 179 ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದಿದೆ. ಅಸಲಿಗೆ ಟೆಂಡರ್ ಕರೆದಿರುವ ಕಾಮಗಾರಿಗಳು ಈಗಾಗಲೇ ಮುಗಿದಿವೆ. ಇದು ವಿವಾದಕ್ಕೆ ಕಾರಣವಾಗಿದೆ. ಕಾಮಗಾರಿಗಳ ಮೂಲಕ ವ್ಯಾಪಕ ಅವ್ಯವಹಾರ ನಡೆಸಲಾಗಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ನಗರಸಭೆಯಲ್ಲಿ ಧರಣಿ ನಡೆಸಿ ಜಿಲ್ಲಾಡಳಿತಕ್ಕೂ ದೂರು ನೀಡಿದ್ದಾರೆ.
ಅಪರಿಚಿತ ವ್ಯಕ್ತಿಯ ನೆರವಿಗೆ ಬಂದ ಪೊಲೀಸರು, ಮಾನವೀಯ ಕಾರ್ಯಕ್ಕೆ ಮೆಚ್ಚುಗೆ
ಇನ್ನು ಕಾರವಾರ ನಗರದಲ್ಲಿ ರಸ್ತೆಗಳ ಕಾಮಗಾರಿ, ಗಾರ್ಡ್ ಗಳ ನಿರ್ಮಾಣ, ಚರಂಡಿ ಕಾಮಗಾರಿ, ಸ್ವಚ್ಛತಾ ಕೆಲಸ, ಪುಟ್ ಪಾತ್ ಗಳ ನಿರ್ಮಾಣ, ರಸ್ತೆಗಳಿಗೆ ರ್ಯಾಂಪ್, ಕಟ್ಟಡಗಳ ನಿರ್ಮಾಣ, ಹುಳು ತೆಗೆಯುವುದು ಹೀಗೆ ಸುಮಾರು 179 ಕಾಮಗಾರಿಗಳಿಗೆ ಯಾವುದೇ ತರಹದ ಟೆಂಡರ್ ಕರಿಯದೆ ತಮಗೆ ಬೇಕಾದವರಿಗೆ ಕೆಲಸ ನೀಡಿ ಕೆಲಸಗಳನ್ನ ಈಗಾಗಲೇ ಮುಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಧಿಕಾರಿಗಳು ಸರ್ಕಾರಕ್ಕೂ ವಂಚಿಸುತ್ತಿದ್ದಾರೆ
ಟೆಂಡರ್ ಪ್ರಕಟಣೆಯ 179 ಕೆಲಸಗಳಲ್ಲಿ ಸುಮಾರು 37 ಕೆಲಸಗಳು ಇ-ಪ್ರೊಕ್ಯೂರ್ ಮೆಂಟ್ ನಲ್ಲಿ ಕರೆಯಲಾಗಿದೆ. ಇನ್ನುಳಿದವಗಳನ್ನು ಟೆಂಡರ್ ಎಂದು ಮಾಡಲಾಗಿದೆ. ಆದರೆ ಈ 179 ಕಾಮಗಾರಿಗಳಲ್ಲಿ ಶೇ. 90 ರಷ್ಟು ಕೆಲಸಗಳು ಈಗಾಗಲೇ ಮುಗಿದಿವೆ. ನಿಯಮಾವಳಿ ಪ್ರಕಾರ ಪ್ರತಿ ಕಾಮಗಾರಿಗಳು ಬಾಕ್ಸ್ ಟೆಂಡರ್ ಮತ್ತು ಇ - ಟೆಂಡರ್ ಮೂಲಕ ಕರೆದು, ಕಾಂಟ್ರಾಕ್ಟರ್ ಮಾಡುವ ಬಿಡ್ ಆದರದ ಮೇಲೆ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಮ್ಮತದ ಮೇರೆಗೆ ಅಗ್ರಿಮೆಂಟ್ ಮಾಡುವ ಮೂಲಕ ಕೆಲಸಗಳನ್ನ ನೀಡಲಾಗುತ್ತದೆ. ಆದರೆ ಕಾರವಾರ ನಗರ ಸಭೆಯಲ್ಲಿ ಯಾವುದೇ ತರಹದ ನಿಯಮಾವಳಿಗಳು ಪಾಲನೆ ಆಗಿಲ್ಲ. ಟೆಂಡರ್ ಓಪನ್ ಮಾಡದೆ ಮತ್ತು ಇ - ಟೆಂಡರ್ ಓಪನ್ ಮಾಡದೆ ಕಮೀಷನ್ ಆಸೆಗೆ ತಮಗೆ ಬೇಕಾದವರಿಗೆ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ, ಹಸಿರು ಗಾರ್ಡನ್ ಹೀಗೆ ವಿವಿಧ ಕಾಮಗಾರಿಗಳು ಪೌರಾಯುಕ್ತ ಆರ್.ಪಿ.ನಾಯ್ಕ ಅವರು ಕೆಲಸ ನೀಡಿ ಕಾಮಗಾರಿಗಳನ್ನು ಪೂರ್ಣ ಮಾಡಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ವಂಚನೆ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ಮಾಜಿ ಶಾಸಕ ಸತೀಶ್ ಸೈಲ್ ಆಗ್ರಹಿಸಿದ್ದಾರೆ.
ಕರ್ನಾಟಕ ಕರಾವಳಿಯಲ್ಲಿ ಮೂರು ಸೇನಾ ಪೂರ್ವ ತರಬೇತಿ ಶಾಲೆ ಆರಂಭ
ಕಾಮಗಾರಿ ಮುಗಿದ ಬಳಿಕ ಟೆಂಡರ್
ಸುಮಾರು 179 ಕಾಮಗಾರಿಗಳಿಗೆ ಯಾವುದೇ ತರಹದ ಟೆಂಡರ್ ಕರಿಯದೆ ತಮಗೆ ಬೇಕಾದವರಿಗೆ ಕೆಲಸ ನೀಡಿ ಕೆಲಸಗಳನ್ನ ಈಗಾಗಲೇ ಮುಗಿಸಲಾಗಿದೆ. ಆದರೆ ಇದೀಗ ಈ ಕಾಮಗಾರಿಗಳಿಗೆ ಟೆಂಡರ್ ಕರಿಯಲು ನಗರಸಭೆ ತಯಾರಿ ಮಾಡಿದೆ. ಇದರಿಂದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ನಗರಸಭೆ ಹಣವನ್ನು ಅಧಿಕಾರಿಗಳು ಮನಸ್ಸೋ ಇಚ್ಚೆ ಬಳಕೆ ಮಾಡಿ ಜನರಿಗೆ ಮಂಕು ಬುದಿ ಎರಚುವ ಕೆಲಸ ಮಾಡಲಾಗುತ್ತಿದೆ. ಪೌರಾಯುಕ್ತ ದೊಡ್ಡ ಕಳ್ಳ, ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದಿದೆ. ಹಣ ಲೂಟಿ ಮಾಡಿದ್ದಾರೆ ಈ ಕುರಿತು ಸೂಕ್ತ ತನಿಖೆ ಆಗಬೇಕು. ಪೌರಾಯುಕ್ತರನ್ನು ಸಸ್ಪೆಂಡ್ ಮಾಡಬೇಕು ಎಂದು ಮಾಜಿ ಶಾಸಕ ಸತೀಶ್ ಸೈಲ್ ಪೌರಾಯುಕ್ತರ ವಿರುದ್ಧ ಹರಿಹಾಯ್ದಿದ್ದಾರೆ.
ತನಿಖೆ ಮಾಡಿದರು ನಾನು ಸಿದ್ಧ ಪೌರಾಯುಕ್ತ
ಇನ್ನು ಈ ಕುರಿತು ಪೌರಾಯುಕ್ತರನ್ನು ಕೇಳಿದರೆ ಈ ಕಾಮಗಾರಿಗಳು ತುರ್ತಾಗಿ ಆಗಿದ್ದು, ಕಳೆದ ಒಂದು ವರ್ಷದಲ್ಲಿ ಆಗಿರುವ ಕಾಮಗಾರಿಗಳು ಇದಾಗಿದೆ. ಆದರೆ ಇದರಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಈ ಕುರಿತು ಯಾವ ತನಿಖೆ ಮಾಡಿದರು ನಾನು ಸಿದ್ದನಿದ್ದೇನೆ. ಯಾವುದೇ ಆರೋಪಗಳಿಗೆ ನಾನು ತೆಲೆ ಕೆಡಿಸುವುದಿಲ್ಲ ಎಂದಿದ್ದಾರೆ. ಈಗಾಗಲೇ ಆರೋಪಿಸಲಾಗುತ್ತಿರುವ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು ಹೆಚ್ಚುವರಿ ಕೆಲಸ ಮಾಡಿದ್ದಕ್ಕೆ ಟೆಂಡರ್ ಕರೆಯಲಾಗಿದೆ. ಅದು ನಿಯಮದಂತೆಯೇ ಆಗಿದೆ. ಈ ಮೊದಲು ಪೂರ್ಣಗೊಂಡ ಕಾಮಗಾರಿಗಳಲ್ಲಿ ಹೆಚ್ಚುವರಿ ಕೆಲಸಗಳಿಗೆ ವರ್ಕ್ ಸ್ಲಿಪ್ ನೀಡಲಾಗುತಿತ್ತು. ಆದರೆ ಕಳೆದ ಎರಡು ವರ್ಷದಿಂದ ಅದು ರದ್ದಾಗಿದೆ. ಇದಕ್ಕೆ ಹೊಸ ಟೆಂಡರ್ ಕರದೆ ಮಾಡಬೇಕಾಗಿದೆ. ಅದರಂತೆ ನಗರಸಭೆಯಲ್ಲಿ ಕೆಲಸ ಮಾಡಲಾಗಿದೆ ಎಂದು ಪೌರಾಯುಕ್ತ ಆರ್.ಪಿ.ನಾಯಕ್ ಸ್ಪಷ್ಟನೆ ನೀಡಿದ್ದಾರೆ.
ಕುಡಿಯುವ ನೀರು ಪೂರೈಕೆ - ಸ್ವಚ್ಛತೆ ಕಾಮಗಾರಿ
ಕುಡಿಯುವ ನೀರು ಪೂರೈಕೆ ಮತ್ತು ಭಾವಿ ಸ್ವಚ್ಛತೆ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ನಗರಸಭೆ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಒಟ್ಟಿನಲ್ಲಿ ನಿಯಮಾವಳಿ ಪ್ರಕಾರ ಕಾಮಗಾರಿಗಳಿಗೆ ಟೆಂಡರ್ ಕರೆದು ಕೆಲಸ ಕೊಡಬೇಕಿತ್ತು. ಆದರೆ ಯಾವುದೇ ತರಹದ ನಿಯಮ ಪಾಲನೆ ಮಾಡದೆ ತಮಗೆ ಇಷ್ಟು ಬಂದಂತೆ ತಮ್ಮವರಿಗೆ ಕೆಲಸ ನೀಡಿ ಹಣ ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಈ ಕುರಿತು ಸೂಕ್ತ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕಿದೆ.
Recommended Video