ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು; ಅನಸ್ತೇಶಿಯಾ ಓವರ್ ಡೋಸ್ ಆರೋಪ
ಕಾರವಾರ, ಸೆಪ್ಟೆಂಬರ್ 03: ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಹೆರಿಗೆಯಾಗಿದ್ದ ಬಾಣಂತಿ ಸಾವನ್ನಪ್ಪಿದ್ದು, ಸಂತಾನಹರಣ ಚಿಕಿತ್ಸೆಗೆ ವೈದ್ಯರು ನೀಡಿದ ಅನಸ್ತೇಶಿಯಾ ಓವರ್ ಡೋಸ್ ಆಗಿ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆಯ ಎದುರು ಪ್ರತಿಭಟನೆ ಕುಳಿತಿದ್ದಾರೆ.
Recommended Video
ನಗರದ ಸರ್ವೋದಯ ನಗರದ ಗೀತಾ ಬಾನಾವಳಿಕರ್ ಎನ್ನುವವರಿಗೆ ಮೂರು ದಿನಗಳ ಹಿಂದೆ ಹೆರಿಗೆ ಆಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಾಲ್ಕು ವರ್ಷದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಎರಡನೇ ಮಗುವಿಗೆ ಜನ್ಮ ನೀಡಿದ್ದರು.
ಬೆಂಗಳೂರಿನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಬಲಿ
ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಅನಸ್ತೇಶಿಯಾ ನೀಡಿ ಆಪರೇಷನ್ ಥಿಯೇಟರ್ ಗೆ ಕರೆದೊಯ್ದಿದ್ದ ವೈದ್ಯರು, ಮಧ್ಯಾಹ್ನ ಮೂರು ಗಂಟೆಯಾದರೂ ಬಾಣಂತಿಯನ್ನು ಹೊರ ತಂದಿರಲಿಲ್ಲ. ಆದರೆ, ಸಂಜೆ ವೇಳೆಗೆ ಬಾಣಂತಿ ಮೃತಪಟ್ಟಿದ್ದು, ಅನಸ್ತೇಶಿಯಾ ಅಟ್ಯಾಕ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದರಿಂದಾಗಿ ಮೃತ ಬಾಣಂತಿಯ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ಆರೋಗ್ಯಯುತವಾಗಿದ್ದ ಬಾಣಂತಿಯನ್ನು ವೈದ್ಯರೇ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆಸ್ಪತ್ರೆಯ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು, ಈ ಬಗ್ಗೆ ಮಾತನಾಡಿರುವ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಕುಡ್ತರಕರ್, ಅನಸ್ತೇಶಿಯಾ ಪರಿಣಾಮದಿಂದ ಆಕೆ ಮೃತಪಟ್ಟಿಲ್ಲ. ಆಕೆಗೆ ಹೃದಯ ಸ್ತಂಭನಗೊಂಡು ಮೃತಪಟ್ಟಿದ್ದಾರೆ. ಈ ರೀತಿ ಒಮ್ಮೊಮ್ಮೆ ಆಗುತ್ತದೆ ಎಂದು ತಿಳಿಸಿದ್ದಾರೆ.