ಕಾರವಾರ; ಸೈಬರ್ ವಂಚಕರ ಸೆರೆ, 24 ಬ್ಯಾಂಕ್ ಖಾತೆ ಪತ್ತೆ!
ಕಾರವಾರ, ಮಾರ್ಚ್ 15; ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ಸೈಬರ್ ಕ್ರೈಂ ವಂಚಕರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾವರ ತಾಲೂಕಿನ ಗುಣವಂತೆಯ ನಿವಾಸಿ ನೇತ್ರಾವತಿ ಗೌಡ ಎನ್ನುವವರಿಗೆ ಅಮೆರಿಕದಲ್ಲಿ ಉದ್ಯೋಗ ಕೊಡಿಸುವುದಾಗಿ ಇಮೇಲ್ ಕಳುಹಿಸಿ ನಂಬಿಕೆ ಹುಟ್ಟಿಸಿದ್ದರು. ವಿವಿಧ ಸುಂಕದ ಹೆಸರಿನಲ್ಲಿ ಕರ್ನಾಟಕ, ತ್ರಿಪುರಾ, ಆಸ್ಸಾಂ, ತಮಿಳುನಾಡು, ಮಣಿಪುರ, ಗುಜರಾತ್, ದೆಹಲಿ ರಾಜ್ಯದಲ್ಲಿರುವ ತಮ್ಮ ಒಟ್ಟು 17 ಬ್ಯಾಂಕ್ ಖಾತೆಗಳಿಗೆ ನೇತ್ರಾವತಿಯಿಂದ ಹಣ ಹಾಕಿಸಿಕೊಂಡಿದ್ದರು.
ಅಮೆರಿಕದಲ್ಲಿ ಉದ್ಯೋಗದ ಆಮಿಷ; ಯುವತಿಗೆ 57.14 ಲಕ್ಷ ರೂ. ವಂಚನೆ
ಒಟ್ಟು ರೂ. 57,14,749 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದ ದುಷ್ಕರ್ಮಿಗಳು ಬಳಿಕ ವಂಚಿಸಿದ್ದರು. ಈ ವಂಚನೆ ಪ್ರಕರಣದ ಬಗ್ಗೆ ನೇತ್ರಾವತಿ ಅವರು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಫೆಬ್ರವರಿ 10ರಂದು ದೂರು ನೀಡಿದ್ದರು.
ಸೈಬರ್ ಠಾಣೆ ಅಧಿಕಾರಿ ಹೆಸರಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ!
ದೂರು ದಾಖಲಿಸಿಕೊಂಡ ಸಿಇನ್ ಅಪರಾಧ ಠಾಣೆಯ ಇನ್ಸ್ಪೆಕ್ಟರ್ ಸೀತಾರಾಮ ಪಿ. ಹಾಗೂ ಅವರ ಸಿಬ್ಬಂದಿಗಳು ತನಿಖೆ ಆರಂಭಿಸಿದ್ದರು. ಕೋಲಾರ ಮೂಲದ ಅಶೋಕ ಎಂ. ಎನ್, ಅಸ್ಸಾಂ ಮೂಲದ ಬುಲ್ಲಿಯಂಗಿರ್ ಹಲಾಮ್, ತ್ರಿಪುರ ಮೂಲದ ದರ್ತಿನ್ಬೀರ್ ಹಲಾಮ್, ಮಣಿಪುರ ಮೂಲದ ವೊರಿಂಗಮ್ ಫುಂಗ್ಶೋಕ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ.
ನೀವು ಸೈಬರ್ ವಂಚನೆಗೆ ಒಳಗಾಗಿದ್ದೀರಾ? ಹಾಗಾದರೆ 100ಕ್ಕೆ ಡಯಲ್ ಮಾಡಿ
ಎಲ್ಲಾ ಆರೋಪಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಹಣ ವರ್ಗಾವಣೆ ಮಾಡಿಸಿಕೊಂಡ ಎಲ್ಲಾ ಬ್ಯಾಂಕ್ ಖಾತೆಗಳಿಂದ 2,61,528 ರೂ.ಗಳನ್ನು ಪ್ರೀಜ್ ಮಾಡಿಸಿದ್ದು, ಸದರಿ ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ಪಡೆದುಕೊಂಡು ತಾಂತ್ರಿಕವಾಗಿ ವಿಶ್ಲೇಷಣೆ ಮಾಡಿ, ಆರೋಪಿತರ ಪತ್ತೆಗಾಗಿ ತಂಡವನ್ನು ರಚಿಸಿಕೊಂಡು ಫೆ.28ರಂದು ಬೆಂಗಳೂರಿಗೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ 24,000 ರೂ. ನಗದು, ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಥಂಬ್ ಮೆಶಿನ್, 24 ಬ್ಯಾಂಕ್ ಖಾತೆ, 24 ಎಟಿಎಮ್ ಕಾರ್ಡ್, 24 ಚೆಕ್ ಬುಕ್, 2 ಲ್ಯಾಪ್ಟಾಪ್, 23 ಮೊಬೈಲ್, 17 ಸಿಮ್, 1 ಟ್ಯಾಬ್, 2 ಪೆನ್ಡ್ರೈವ್, ಒಂದು ವೈಫೈ ರೂಟರ್ ಜಪ್ತಿ ಮಾಡಲಾಗಿದೆ.
"ಈ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ನೈಜೀರಿಯನ್ ದೇಶದ ಹಾಗೂ ಅಸ್ಸಾಂ ರಾಜ್ಯದ ಆರೋಪಿಗಳು ಶಾಮೀಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿತರು ಹೊರ ರಾಜ್ಯದವರಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಬೇಕಾಬಿಟ್ಟಿಯಾಗಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಈ ಬಗ್ಗೆ ಅವರ ಖಾತೆ ತೆರೆಯಲು ಯಾವುದೇ ರೀತಿಯ ಪರಿಶೀಲನೆ ಮಾಡದೇ ಖಾತೆಗಳನ್ನು ನೀಡಿ ನಿರ್ಲಕ್ಷತನ ತೋರಿರುವುದು ಕಂಡುಬಂದಿದೆ.
ಈ ಬಗ್ಗೆ ರಾಜ್ಯದ ಎಲ್ಲಾ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಪತ್ರ ವ್ಯವಹಾರ ಮಾಡಲಾಗುವುದು. ಯಾವುದೇ ಅಪರಿಚಿತ ಇ- ಮೇಲ್, ಮೊಬೈಲ್ ಕರೆಗಳು, ವಾಟ್ಸಪ್ ಸಂದೇಶ, ಫೇಸ್ ಬುಕ್ ಪೋಸ್ಟ್ ಗಳು, ಉದ್ಯೋಗ ನೀಡುವುದು, ಬಹುಮಾನ ಬಂದಿದೆ ಎಂಬ ಸಂದೇಶ, ಲಕ್ಕಿ ಡಿಪ್ ನಲ್ಲಿ ವಿಜೇತರಾಗಿದ್ದೀರಿ ಎಂಬ ಇತ್ಯಾದಿ ಸಂದೇಶಗಳ ಆಮಿಷಗಳಿಗೆ ಒಳಗಾಗಿ ಮೋಸ ಹೋಗದಿರಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಆರೋಪಿತರ ಪತ್ತೆ ಕಾರ್ಯದಲ್ಲಿ ಎಸ್ಪಿ ಶಿವಪ್ರಕಾಶ ದೇವರಾಜು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಿ.ಇ.ಎನ್ ಆಪರಾಧ ಮೋಲೀಸ್ ಠಾಣಾ ನಿರೀಕ್ಷಕ ಸೀತಾರಾಮ, ಸಿಬ್ಬಂದಿಗಳಾದ ಉಮೇಶ ನಾಯ್ಕ, ಸುದರ್ಶನ ನಾಯ್ಕ, ನಾಗರಾಜ ನಾಯ್ಕ, ಮಂಜುನಾಥ ಹೆಗಡೆ, ಹನುಮಂತ ಕಬಾಡಿ, ನಾರಾಯಣ ಎಮ್.ಎಸ್, ಚಂದ್ರಶೇಖ ಪಾಟೀಲ್, ಸುರೇಶ ನಾಯ್ಕ, ಸಂದೀಪ್ ನಾಯ್ಕ, ಶಿವಾನಂದ ತಾನಸಿ, ಭರತೇಶ ಸದಲಗಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ಸುಧೀರ ಮಡಿವಾಳ, ರಮೇಶ ನಾಯ್ಕ ಅವರು ಪಾಲ್ಗೊಂಡಿದ್ದರು.