ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ; ವಿದ್ಯಾರ್ಥಿಗಳು 8 ಕಿ.ಮೀ. ನಡೆಯುವುದು ತಪ್ಪಿತು!
ಬೆಂಗಳೂರು, ಮಾ. 17: ಹೊನ್ನಾವರ ತಾಲೂಕಿನ ಮಹಿಮೆ ಮತ್ತು ಸುತ್ತಮುತ್ತಲ ಗ್ರಾಮಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯ ಸಾರಿಗೆ ಸಂಸ್ಥೆಯು ಮಹಿಮೆ ಗ್ರಾಮದ ಮೂಲಕ ಹಾದು ಹೋಗುವಂತೆ ಬಸ್ಗಳನ್ನು ಕಾರ್ಯಾಚರಿಸಲು ಆದೇಶಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ತಾವು ಮಹಿಮೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಗಮನಿಸಿದ್ದು, ಗ್ರಾಮದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ಸೌಲಭ್ಯ ಒದಗಿಸಬೇಕೆಂದು ಡಿಸಿಎಂ ಲಕ್ಷ್ಮಣ ಎಸ್. ಸವದಿ ಅವರಿಗೆ ಮನವಿ ಮಾಡಿದ ತಕ್ಷಣವೇ ಸ್ಪಂದಿಸಿ ಗ್ರಾಮಕ್ಕೆ ಬಸ್ ಕಾರ್ಯಾಚರಣೆಗೆ ಆದೇಶಿಸಿದ್ದಾರೆಂದು ಅವರು ತಿಳಿಸಿದ್ದಾರೆ.
ಚಾರ್ಮಾಡಿ ಘಾಟ್ನಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಒಪ್ಪಿಗೆ
ಈ ಕುರಿತು ಮಾಧ್ಯಮಗಳ ವರದಿಯನ್ನು ಸಾರಿಗೆ ಸಚಿವರ ಗಮನಕ್ಕೆ ತಂದಾಗ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಹೊನ್ನಾವರ ತಾಲೂಕಿನ ಮಹಿಮೆ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಒದಗಿಸಲು ಆದೇಶ ನೀಡುವುದಾಗಿ ತಿಳಿಸಿದ್ದರು. ಅದರಂತೆ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಿದ್ದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಸ್ ಗಾಗಿ 8 ಕಿ.ಮೀ. ನಡೆಯವುದು ತಪ್ಪಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಮೆ ಗ್ರಾಮದ ವಿದ್ಯಾರ್ಥಿಗಳು ಪ್ರೌಢಶಾಲೆಗಾಗಿ ದೂರದ ಅಳ್ಳಂಕಿ, (20 ಕಿ.ಮೀ.) ಜಲವಳಕರ್ಕಿ(25 ಕಿ.ಮೀ.), ಗೇರುಸೊಪ್ಪಕ್ಕೆ (16 ಕಿ.ಮೀ.) ಮತ್ತು ಪದವಿ ಪೂರ್ವ ಕಾಲೇಜಿಗೆ 40 ಕಿಮೀ ದೂರದ ಹೊನ್ನಾವರ ಪಟ್ಟಣಕ್ಕೆ ಹೋಗುತ್ತಾರೆ. ಆದರೆ ಅವರು ಬಸ್ ಗಾಗಿ ಮಹಿಮೆ ಕ್ರಾಸ್ ಗೆ 8 ಕಿ.ಮೀ. ದೂರ ನಡೆದುಕೊಂಡು ಹೋಗಬೇಕಿದೆ. ಹಾಗೆಯೇ ಮಳೆಗಾಲದಲ್ಲಿ ಮಹಿಮೆ ಗ್ರಾಮದ ಹಳ್ಳ ತುಂಬಿ ಹರಿಯುವುದರಿಂದ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿತಗೊಂಡು ನಡೆದು ಹೋಗಲೂ ಸಹ ತೊಂದರೆಯಾಗಿತ್ತು.
Recommended Video
ಸೋಮವಾರ ವಿಧಾನಪರಿಷತ್ತಿನ ಕಲಾಪದಲ್ಲಿ ವಿಷಯ ಪ್ರಸ್ತಾಪವಾದಾಗ ಈ ಕುರಿತು ಸಾರಿಗೆ ಸಚಿವರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹಿಮೆ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ನೀಡಿದ್ದ ಭರವಸೆ ಈಡೇರಿದಂತಾಗಿದೆ. ತಮ್ಮ ಮನವಿಗೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ ಡಿಸಿಎಂ ಲಕ್ಷ್ಮಣ ಎಸ್. ಸವದಿ ಅವರಿಗೆ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.