ಕೊರೊನಾ ಕಡಿವಾಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೀಲ್ ಡೌನ್?
ಕಾರವಾರ, ಏಪ್ರಿಲ್ 10: ಕೊರೊನಾ ವೈರಸ್ ಕಡಿವಾಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಮಾಡಿದ್ದರೂ ಸೋಂಕು ತಗುಲುತ್ತಿರುವವರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವು ಜಿಲ್ಲೆಗಳನು ಸೀಲ್ ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯೂ ಇದೆ ಎನ್ನಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ 195 ದಾಟಿದೆ. ಒಟ್ಟು 18 ಜಿಲ್ಲೆಗಳಲ್ಲಿ ಸೋಂಕು ಕಂಡು ಬಂದಿದ್ದು, ಅದರಲ್ಲಿ 10 ಜಿಲ್ಲೆಗಳಲ್ಲಿ 6ಕ್ಕಿಂತ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಯಾವ ಜಿಲ್ಲೆಗಳಲ್ಲಿ 6ಕ್ಕಿಂತ ಹೆಚ್ಚು ಪ್ರಕರಣ ಕಂಡು ಬಂದಿದೆಯೋ ಅಂತಹ ಜಿಲ್ಲೆಗಳನ್ನು ಸೀಲ್ ಡೌನ್ ಮಾಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 9 ಸೋಂಕಿತರು
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9ಕ್ಕೆ ಏರಿದ್ದು, ಮಂಗಳೂರಿನಲ್ಲಿ ದಾಖಲಾಗಿದ್ದ ಭಟ್ಕಳದ ಯುವಕನನ್ನು ಸೇರಿಸಿದರೆ 10 ಆಗಲಿದೆ. ಈಗಾಗಲೇ ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಏಳು ಮಂದಿ ಆಸ್ಪತ್ರೆಯಲ್ಲೇ ಚಿಕಿತ್ಸ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಸಹ ಸೀಲ್ ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
"ಉತ್ತರ ಕನ್ನಡ ಜಿಲ್ಲೆ ರಿಲ್ಯಾಕ್ಸ್; ಆದರೂ ಲಾಕ್ ಡೌನ್ ಹಿಂಪಡೆಯಲ್ಲ"
ಸೀಲ್ ಡೌನ್ ನಿಂದ ಇನ್ನಷ್ಟು ಕಟ್ಟುನಿಟ್ಟು
ಏಪ್ರಿಲ್ 14ರವರೆಗೆ ದೇಶದಾದ್ಯಂತ ಲಾಕ್ ಡೌನ್ ಇದ್ದು, ಕೊರೊನಾ ಇನ್ನೂ ದೇಶದಲ್ಲಿ ಕಡಿವಾಣಕ್ಕೆ ಬರದ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಏಪ್ರಿಲ್ 30ರವರಗೆ ವಿಸ್ತರಿಸಲು ಕೇಂದ್ರ ಸಹ ಚಿಂತನೆ ನಡೆಸಿದೆ. ಕೊರೊನಾ ಸೋಂಕು ಕಂಡು ಬರದ ಜಿಲ್ಲೆಗೆ ಸ್ವಲ್ಪ ರಿಯಾಯಿತಿ ನೀಡಿ, ಉಳಿದ 10 ಜಿಲ್ಲೆಯಲ್ಲಿ ಸೀಲ್ ಡೌನ್ ಮಾಡಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.
ಏನಿದು ಸೀಲ್ ಡೌನ್?
ಒಂದೊಮ್ಮೆ ಜಿಲ್ಲೆಯಲ್ಲಿ ಸರ್ಕಾರ ಸೀಲ್ ಡೌನ್ ಮಾಡಿದರೆ ಜನರು ಮನೆಯಿಂದ ಹೊರ ಬರುವ ಅವಕಾಶ ಇರುವುದಿಲ್ಲ. ಹಾಲು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಲಿದೆ. ಜಿಲ್ಲೆಯ ಯಾರೊಬ್ಬರೂ ಹೊರ ಜಿಲ್ಲೆಗೆ ಹೋಗುವಂತಿಲ್ಲ, ಬೇರೆ ಜಿಲ್ಲೆಯಿಂದ ಯಾರೂ ಜಿಲ್ಲೆಗೆ ಬರದಂತೆ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತದೆ. ಸದ್ಯ ಲಾಕ್ ಡೌನ್ ಮುಕ್ತಾಯದ ಹಂತಕ್ಕೆ ಬರುತ್ತಿದೆ ಎಂದು ಖುಷಿಯಲ್ಲಿರುವ ಜಿಲ್ಲೆಯ ಜನರಿಗೆ ಸೀಲ್ ಡೌನ್ ಆದೇಶ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವುದರಲ್ಲಿ ಅನುಮಾನವಿಲ್ಲ.
ಉತ್ತರ ಕನ್ನಡದಲ್ಲಿ ಗರ್ಭಿಣಿಗೆ ಕೊರೊನಾ ಪಾಸಿಟಿವ್: ಹೇಗೆ ಬಂತು?
ಸಮರ್ಥವಾಗಿ ಎದುರಿಸಿದ್ದ ಜಿಲ್ಲಾಡಳಿತ
ಕೊರೊನಾ ಕಡಿವಾಣಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಈಗಾಗಲೇ ಸಮರ್ಥವಾಗಿ ಎದುರಿಸಿದೆ. ಜಿಲ್ಲೆಯ ಭಟ್ಕಳದಲ್ಲಿ ಮಾತ್ರ ಸೋಂಕು ಕಂಡು ಬಂದಿದ್ದು, ಅಲ್ಲಿ ಹೆಲ್ತ್ ಎಮರ್ಜೆನ್ಸಿಯನ್ನು ಸಹ ಘೋಷಿಸಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಅಗತ್ಯ ವಸ್ತು ಖರೀದಿಗೆ ಅಂಗಡಿಗಳಲ್ಲಿ ಅವಕಾಶ ಕೊಟ್ಟಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೀಲ್ ಡೌನ್ ಮಾದರಿಯಲ್ಲಿ ಲಾಕ್ ಡೌನ್ ಪ್ರಾರಂಭವಾದ ದಿನದಿಂದಲೂ ಮನೆ ಮನೆಗೆ ಅಗತ್ಯ ವಸ್ತು ಪೂರೈಸುವ ಕಾರ್ಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸೋಂಕು ಇರುವ ಭಟ್ಕಳವನ್ನು ಮಾತ್ರ ಸೀಲ್ ಡೌನ್ ಮಾಡಿ, ಉಳಿದ ಪ್ರದೇಶಕ್ಕೆ ವಿನಾಯಿತಿ ನೀಡಲಿ ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ.