ಅನರ್ಹ ಶಾಸಕರು ಈಗಾಗಲೇ ಗೆದ್ದಿದ್ದರೆ ಮತ್ಯಾಕೆ ಪ್ರಚಾರ: ದೇಶಪಾಂಡೆ
Recommended Video
ಉತ್ತರ ಕನ್ನಡ, ನವೆಂಬರ್ 25: ಉಪ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಗೆದ್ದಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೋದಲೆಲ್ಲಾ ಹೇಳುತ್ತಿದ್ದಾರೆ. ಹಾಗಾದರೆ ಮತ ಪ್ರಚಾರಕ್ಕೆ ಏಕೆ ಹೋಗಬೇಕೆಂದು ಪ್ರಶ್ನಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರಾರ್ಥ ಭಾಷಣದಲ್ಲಿ ಮಾತನಾಡಿ, ಪ್ರವಾಹ ಪೀಡಿತರಿಗೆ ನೆರೆ ಪರಿಹಾರವನ್ನು ಇನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ, ಮೊದಲು ಜನರನ್ನು ರಕ್ಷಿಸುವ ಕೆಲಸವಾಗಲಿ ಎಂದು ಸರ್ಕಾರಕ್ಕೆ ಛಾಟಿ ಬೀಸಿದರು
ಕಾಂಗ್ರೆಸ್- ಜೆಡಿಎಸ್ ನ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ಸಮ್ಮಿಶ್ರ ಸರ್ಕಾರ ಬಿದ್ದಿತು. ಆದರೆ ಅವರಿಗೆ ಅಂಟಿರುವ ಅನರ್ಹ ಎಂಬ ಹಣೆಪಟ್ಟಿ ಕಳಚುವುದಿಲ್ಲ. ಅವರಿಗೆ ಮತದಾರರು ಸೋಲಿನ ಶಿಕ್ಷೆ ಕೊಟ್ಟು ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದರು.
ಡಿಸೆಂಬರ್ 05 ರಂದು 15 ಕ್ಷೇತ್ರಗಳಿಗೆ ಉಪ ಚುನಾವಣೆಯ ಮತದಾನ ನಡೆಯಲಿದ್ದು, ಇದರ ಫಲಿತಾಂಶ ಡಿಸೆಂಬರ್ 09 ರಂದು ಪ್ರಕಟವಾಗಲಿದೆ.
ಸಿಎಂ ಪ್ರಚಾರ ಸಭೆಯ ಭಾಷಣಗಳಲ್ಲಿ ನಮ್ಮ ಅಭ್ಯರ್ಥಿಗಳು ಈಗಾಗಲೇ ಗೆದ್ದಿದ್ದು, ಗೆಲುವಿನ ಅಂತರ ಅಷ್ಟೇ ತಿಳಿಯಬೇಕು ಎನ್ನುತ್ತಾರೆ. ಹಾಗಿದ್ದರೆ ಪ್ರಚಾರಕ್ಕೆ ಬರದೇ ಸುಮ್ಮನೇ ಕುಳಿತುಕೊಳ್ಳಬಹುದಲ್ವಾ ಎಂದು ಪ್ರಶ್ನಿಸಿದ್ದಾರೆ.
ಅನರ್ಹರೆಂದು ಸುಪ್ರೀಂಕೋರ್ಟ್ ಹೇಳಿದೆ, ಅವರು ಯಾವ ಪಕ್ಷದಲ್ಲಿರಲು ಲಾಯಕ್ಕಿಲ್ಲ. ಈ ಉಪ ಚುನಾವಣೆಯಲ್ಲಿ ಮತದಾರರು ಸರಿಯಾದ ಪಾಠ ಕಲಿಸಬೇಕಿದೆ ಎಂದರು.