ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಿಂದ ಅನಂತ್ಕುಮಾರ್ ಹೆಗ್ಡೆ ದೂರ: ಕಾರಣ ಬಹಿರಂಗ
ಕಾರವಾರ, ಡಿ 2: ರಾಜ್ಯ ಬಿಜೆಪಿಯ ಫೈರ್ ಬ್ರಾಂಡ್ ಮತ್ತು ವಿವಾದಕಾರಿ ಹೇಳಿಕೆ ನೀಡುವಲ್ಲೂ ಎತ್ತಿದ ಕೈಯಾಗಿರುವ ಉತ್ತರ ಕನ್ನಡದ ಸಂಸದ ಅನಂತ್ಕುಮಾರ್ ಹೆಗ್ಡೆ, ವಿಧಾನ ಪರಿಷತ್ ಚುನಾವಣಾ ಪ್ರಚಾರದಿಂದ ದೂರವಿರುವ ವಿಚಾರ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು.
ಅವರ ಕೆಲವು ಕಿಡಿಹಾರಿಸುವ ಹೇಳಿಕೆಯಿಂದ ಪಕ್ಷಕ್ಕೆ ಹಲವು ಬಾರಿ ಮುಜುಗರವಾಗಿತ್ತು, ಆ ಕಾರಣಕ್ಕಾಗಿ ಪಕ್ಷದ ಹಿರಿಯರೇ ಅವರನ್ನು ದೂರವಿಟ್ಟಿದ್ದರು ಎನ್ನುವ ಮಾತು ಚಾಲ್ತಿಯಲ್ಲಿತ್ತು. ಹಾಗಾಗಿ, ರಾಜ್ಯದ ಪ್ರಮುಖ ಮುಖಂಡರ ಜೊತೆಗೆ ಅನಂತ್ಕುಮಾರ್ ಹೆಗ್ಡೆ ಮುನಿಸುಕೊಂಡಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಪರಿಷತ್ ಚುನಾವಣೆಯಿಂದ ಅನಂತ್ಕುಮಾರ್ ಹೆಗ್ಡೆ ಅಂತರ; ಬಿಜೆಪಿ ವಿರುದ್ಧ ಮುನಿಸು?
ಇದಕ್ಕೆ ಪೂರಕ ಎನ್ನುವಂತೆ ವಿಧಾನ ಪರಿಷತ್ ಚುನಾವಣೆಯ ಯಾವುದೇ ಪ್ರಚಾರ, ಸಭೆಯಲ್ಲಿ ಅನಂತ್ಕುಮಾರ್ ಹೆಗ್ಡೆ ಗೈರಾಗಿದ್ದರು. ಇದು, ಚುನಾವಣೆಯ ವೇಳೆ ಉತ್ತರ ಕನ್ನಡದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ಮುಜುಗರವನ್ನು ತಂದೊಡ್ಡಿತ್ತು.
ಈಗ, ಅನಂತ್ಕುಮಾರ್ ಹೆಗ್ಡೆ ಸ್ಪಷ್ಟನೆಯನ್ನು ನೀಡಿದ್ದಾರೆ. ಯಾವ ಕಾರಣಕ್ಕಾಗಿ ವಿಧಾನ ಪರಿಷತ್ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದರ ಬಗ್ಗೆ ವಿವರಣೆಯನ್ನು ನೀಡಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ. ಅನಂತ್ಕುಮಾರ್ ಹೆಗ್ಡೆ ಹೇಳಿದಿಷ್ಟು..
ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಗಣಪತಿ ಉಳ್ವೇಕರ್, ಕಾಂಗ್ರೆಸ್ಸಿನಿಂದ ಭೀಮಣ್ಣ ನಾಯಕ್
ಉತ್ತರ ಕನ್ನಡದ ಒಂದು ವಿಧಾನ ಪರಿಷತ್ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಗಣಪತಿ ಉಳ್ವೇಕರ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ಸಿನಿಂದ ಭೀಮಣ್ಣ ನಾಯಕ್ ಕಣದಲ್ಲಿದ್ದಾರೆ. ಇಬ್ಬರೂ ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದರೂ ಕೂಡಾ ಪಕ್ಷದೊಳಗಿನ ಭಿನ್ನಮತ ಎರಡೂ ಪಕ್ಷಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇಂತಹ ಸಮಯದಲ್ಲಿ ಅನಂತ್ಕುಮಾರ್ ಹೆಗ್ಡೆ ಪ್ರಚಾರದಿಂದ ದೂರವಿರುವುದು ಬಿಜೆಪಿಗೆ ಹಿನ್ನಡೆಯೆಂದೇ ವ್ಯಾಖ್ಯಾನಿಸಲಾಗಿತ್ತು. ಈಗ ಅನಂತ್ಕುಮಾರ್ ಹೆಗ್ಡೆ ಹೇಳಿಕೆಯನ್ನು ನೀಡಿ, ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.
ಕಾರ್ಯಕರ್ತರಾಗಲಿ ನಮ್ಮ ಮುಖಂಡರಾಗಲಿ ಅಪಾರ್ಥ ಕಲ್ಪಿಸಿಕೊಳ್ಳುವುದು ಬೇಡ
"ಪೂರ್ವ ನಿಗದಿತ ಕಾರ್ಯಕ್ರಮಗಳು ಸಾಲುಸಾಲು ಇದ್ದಿದ್ದರಿಂದ ಪ್ರಚಾರಕ್ಕೆ ಹೋಗಲು ಸಾಧ್ಯವಾಗಿಲ್ಲ. ಇದರ ನಡುವೆ, ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಲ್ಲಿ ಹಾಜರಾತಿ ಮುಖ್ಯವಾಗಿರುವುದರಿಂದ ವಿಧಾನ ಪರಿಷತ್ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಇದಕ್ಕೆ, ಕಾರ್ಯಕರ್ತರಾಗಲಿ ನಮ್ಮ ಮುಖಂಡರಾಗಲಿ ಅಪಾರ್ಥ ಕಲ್ಪಿಸಿಕೊಳ್ಳುವುದು ಬೇಡ"ಎಂದು ಅನಂತ್ಕುಮಾರ್ ಹೆಗ್ಡೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಬೆಂಗಳೂರು, ಮೈಸೂರು ಮತ್ತು ತಮಿಳುನಾಡು ಪ್ರವಾಸದಲ್ಲಿದ್ದೆ
"ಬೆಂಗಳೂರು, ಮೈಸೂರು ಮತ್ತು ತಮಿಳುನಾಡು ಪ್ರವಾಸದಲ್ಲಿದ್ದೆ, ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರನ್ನು ಗೆಲ್ಲಿಸಲು ಪಕ್ಷದ ಮುಖಂಡರು ಸಾಮೂಹಿಕ ಜವಾಬ್ದಾರಿಯನ್ನು ಸ್ವೀಕರಿಸಲು ಸೂಚಿಸಿದ್ದೇನೆ. ನಮ್ಮ ಶಾಸಕರು ಮತ್ತು ಮುಖಂಡರು ಹಗಲಿರುಳು ನಮ್ಮ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದ ಮತ್ತು ಕೇಂದ್ರದ ಅಭಿವೃದ್ದಿ ಕಾರ್ಯಗಳೇ ನಮಗೆ ಶ್ರೀರಕ್ಷೆ"ಎಂದು ಅನಂತ್ಕುಮಾರ್ ಹೆಗ್ಡೆ ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
ಜನಸ್ವರಾಜ್ ಯಾತ್ರೆಯ ವೇಳೆಯೂ ಅವರು ಕಾಣಿಸಿಕೊಂಡಿರಲಿಲ್ಲ
ನಾಮಪತ್ರ ಸಲ್ಲಿಕೆಗಾಗಲಿ ಅಥವಾ ಅಭ್ಯರ್ಥಿ ಪರ ಪ್ರಚಾರದಲ್ಲಾಗಲಿ ಎಲ್ಲಿಯೂ ಅನಂತ್ಕುಮಾರ್ ಹೆಗ್ಡೆ ಕಾಣಿಸಿಕೊಂಡಿರಲಿಲ್ಲ. ಬಿಜೆಪಿ ಟಿಕೆಟ್ ನೀಡಿರುವ ಗಣಪತಿ ಉಳ್ವೇಕರ್, ಜಿಲ್ಲೆಯ ಅಂಕೋಲಾದ ಶಾಸಕಿ ರೂಪಾಲಿ ನಾಯ್ಕ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಅನಂತ್ಕುಮಾರ್ ಹೆಗಡೆ ಸೂಚಿಸಿದ್ದ ಅಭ್ಯರ್ಥಿಗೆ ಟಿಕೆಟ್ ಸಿಗದ ಹಿನ್ನೆಲೆ ಅವರು ಮುನಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಜನಸ್ವರಾಜ್ ಯಾತ್ರೆಯ ವೇಳೆಯೂ ಅವರು ಕಾಣಿಸಿಕೊಂಡಿರಲಿಲ್ಲ ಎಂದು ಸುದ್ದಿಯಾಗಿತ್ತು.