ಕದ್ರಾ ಜಲಾಶಯದಿಂದ ಕಾಳಿ ನದಿಯತ್ತ ಹರಿಯಿತು ನೀರು
ಕಾರವಾರ, ಆಗಸ್ಟ್ 5: ತಾಲ್ಲೂಕಿನ ಕದ್ರಾ ಅಣೆಕಟ್ಟಿನಿಂದ ಭಾನುವಾರ ಸಂಜೆ 10,500 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಗಿದೆ. ಇದರಿಂದಾಗಿ ಸಮೀಪದ ಸೇತುವೆ ಮುಳುಗಡೆಯಾಗಿ ಕೆಲವು ಗ್ರಾಮಗಳ ನಡುವಿನ ಜನಸಂಪರ್ಕ ಕಡಿತಗೊಂಡಿದೆ.
ಕದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಭಾನುವಾರ ಐದು ಗೇಟ್ ಗಳ ಮೂಲಕ ನೀರನ್ನು ಹೊರ ಬಿಡಲಾಗಿದೆ. ಗರಿಷ್ಠ 34.50 ಮೀ. ಗರಿಷ್ಠ ಮಟ್ಟ ಹೊಂದಿರುವ ಈ ಅಣೆಕಟ್ಟಿನಲ್ಲಿ ಭಾನುವಾರ ನೀರಿನ ಮಟ್ಟ 33.85 ಮೀ.ಗೆ ತಲುಪಿತ್ತು.
ಬರದ ನಡುವೆ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು
ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನವರೆಗೂ ನೀರನ್ನು ಕಾಳಿ ನದಿಗೆ ಬಿಡಲಾಗಿದ್ದು, ಜಲಾಶಯದಲ್ಲಿ ನಿರಂತರವಾಗಿ ವಿದ್ಯುತ್ ಉತ್ಪಾದನೆ ಕೂಡ ಮುಂದುವರಿದಿರುವುದಾಗಿ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಮಾಹಿತಿ ನೀಡಿದ್ದಾರೆ.
ಈ ವೇಳೆ ಅಣೆಕಟ್ಟಿನಿಂದ ನೀರು ಬಿಟ್ಟಿರುವ ದೃಶ್ಯ ನೋಡಲು ಸಮೀಪದ ಗ್ರಾಮಗಳ ನೂರಾರು ಜನರು ಆಗಮಿಸಿದ್ದರು. ಅಣೆಕಟ್ಟಿನ ಎಡಭಾಗಗಳಲ್ಲಿ ನಿಂತು ಅಣೆಕಟ್ಟಿನ ಗೇಟುಗಳಿಂದ ನೀರು ಧುಮ್ಮಿಕ್ಕುವುದನ್ನು ಕಣ್ತುಂಬಿಕೊಂಡರು.