ಉತ್ತರ ಕನ್ನಡದಲ್ಲಿ 'ಅನಂತ'? 'ಆನಂದ'?
ಕಾರವಾರ, ಮೇ 23: ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಇನ್ನೇನು ಆರಂಭವಾಗಬೇಕಿದೆ. ಇದೀಗ ಎಲ್ಲರ ಚಿತ್ತ ಮತ ಎಣಿಕೆ ಕೇಂದ್ರದತ್ತ ನೆಟ್ಟಿದೆ.
1996ರಿಂದ ಇಲ್ಲಿಯವರೆಗೆ ಅನಂತಕುಮಾರ ಹೆಗಡೆ ನಿರಂತರವಾಗಿ ಗೆಲುವು ದಾಖಲಿಸಿ, ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮಾರ್ಪಡಿಸಿದ್ದಾರೆ. 90ರ ದಶಕದಲ್ಲಿ ಕಾಂಗ್ರೆಸ್ ಪಾರಮ್ಯವಿದ್ದ ಇಲ್ಲಿ, ಅನಂತಕುಮಾರ್ ಹೆಗಡೆ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಈಗ ಏಳನೇ ಚುನಾವಣೆ ಎದುರಿಸಿರುವ ಅವರು, ಒಮ್ಮೆ ಸೋತು ಈಗ 'ಸಿಕ್ಸರ್' ಬಾರಿಸುವ ತವಕದಲ್ಲಿದ್ದಾರೆ.
ಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVE:ಮೈತ್ರಿ ಅಭ್ಯರ್ಥಿ ನಿಖಿಲ್ ಮುನ್ನಡೆ
ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟೂ 8 ವಿಧಾನಸಭಾ ಕ್ಷೇತ್ರಗಳು ಇವೆ. ಶಿರಸಿ- ಸಿದ್ದಾಪುರ, ಯಲ್ಲಾಪುರ- ಮುಂಡಗೋಡ, ಹಳಿಯಾಳ- ಜೊಯಿಡಾ, ಕಾರವಾರ- ಅಂಕೋಲಾ, ಕುಮಟಾ- ಹೊನ್ನಾವರ, ಭಟ್ಕಳ- ಹೊನ್ನಾವರ, ಕಿತ್ತೂರು ಹಾಗೂ ಖಾನಾಪುರ. ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ 3 ಹಾಗೂ ಬಿಜೆಪಿ ತಲಾ 5 ಕ್ಷೇತ್ರಗಳಲ್ಲಿ ಗೆಲುವು ಪಡೆದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯತ್ತ ಹೆಚ್ಚಿನ ಒಲವು ತೋರಿದ್ದ ಮತದಾರರು, ಲೋಕಸಭೆಯಲ್ಲೂ ಬಿಜೆಪಿಗೆ ಬೆಂಬಲಿಸಿರುವ ಸಾಧ್ಯತೆ ಹೆಚ್ಚಿದೆ.
ಮತಗಳ ಅಂತರ ಲೆಕ್ಕಾಚಾರ: 2014ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ 5,46,939 ಮತಗಳನ್ನು ಪಡೆದು, ಕಾಂಗ್ರೆಸ್ನ ಪ್ರಶಾಂತ್ ದೇಶಪಾಂಡೆಯನ್ನು (4,06,239) ಸೋಲಿಸಿದ್ದರು. ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಸ್ಪರ್ಧಿಸಿದ್ದು, ಜಿಲ್ಲೆಯಲ್ಲಿ ಈ ಬಾರಿ ಬದಲಾವಣೆ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಮೂರೂವರೆ ಲಕ್ಷಗಳ ಮತಗಳ ಅಂತರದಿಂದ ಗೆದ್ದು ಬರುವ ವಿಶ್ವಾಸ ಅನಂತಕುಮಾರರಲ್ಲಿದ್ದರೆ, ಮತದಾನದ ದಿನ ಮೂರು ಲಕ್ಷ ಮತಗಳ ಅಂತರದ ವಿಶ್ವಾಸದಲ್ಲಿದ್ದ ಆನಂದ ಈಗ ಒಂದು ಮತದಿಂದಾದರೂ ಗೆದ್ದು ಬರುತ್ತೇನೆ ಎನ್ನುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚು ಮತದಾನವಾಗಿದ್ದು, ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತವೆ ಎಂದಿವೆ ಹಲವು ಸಮೀಕ್ಷೆಗಳು.
ಪಕ್ಷೇತರರು ಲೆಕ್ಕಕ್ಕಿಲ್ಲ: ಕ್ಷೇತ್ರದಲ್ಲಿ 13 ಅಭ್ಯರ್ಥಿಗಳಿದ್ದರೂ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಹಾಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ನಡುವೆಯೇ ನೇರ ಪೈಪೋಟಿ ಇತ್ತು. ಇಬ್ಬರೂ ಅಭ್ಯರ್ಥಿಗಳ ನಡುವಿನ ವಾಕ್ಸಮರ ಕಣವನ್ನು ರಂಗೇರಿಸಿತ್ತು.
ಈ ಹಿಂದೆ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿ ಜಿ.ದೇವರಾಯ ನಾಯ್ಕ ಅವರು ಗೆದ್ದಿದ್ದು ಬಿಟ್ಟರೆ, ಅವರ ನಂತರದ ಸಾಧನೆ ಅನಂತಕುಮಾರ ಹೆಗಡೆಯವರದ್ದು. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ರಾಹ್ಯ ಸಚಿವರಾಗಿರುವ ಅವರಿಗೆ ಈ ಬಾರಿಯ ಚುನಾವಣೆ ಮಹತ್ವ ಪಡೆದುಕೊಂಡಿದೆ. ಆನಂದ ಅಸ್ನೋಟಿಕರ್ ಗೆದ್ದರೆ ಉತ್ತರ ಕನ್ನಡ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್ನ ಮೊದಲ ಸಂಸದ ಎನಿಸಿಕೊಳ್ಳಲಿದ್ದಾರೆ. ಅಷ್ಟಕ್ಕೂ ಈ ಎಲ್ಲ ಅಂತೆ- ಕಂತೆಗಳು, ನಿರೀಕ್ಷೆಗಳಿಗೆ 12 ಗಂಟೆಯ ನಂತರ ಸ್ಪಷ್ಟ ಉತ್ತರ ಸಿಗಲಿದೆ.