ಈ ಗ್ರಾಮದ ರಸ್ತೆ ಸಂಚಾರವೇ ದುಸ್ತರ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ
ಕಾರವಾರ, ಡಿಸೆಂಬರ್ 9: ಅನೇಕ ವರ್ಷಗಳ ಹೋರಾಟದ ಬಳಿಕ ಈ ಗ್ರಾಮದ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದರೂ, ಇಲ್ಲಿ ಸಮಪರ್ಕವಾಗಿ ರಸ್ತೆ ನಿರ್ಮಾಣವಾಗಿಲ್ಲ. ಅರೆಬರೆ ಕಾಮಗಾರಿಯಿಂದಾಗಿ ಇಲ್ಲಿನ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದ್ದು, ಇದರಿಂದಾಗಿ ಬೇಸತ್ತ ಗ್ರಾಮಸ್ಥರು ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ದಟ್ಟ ಅಡವಿಯಿಂದಲೇ ಕೂಡಿರುವ ತಾಲೂಕಾಗಿದೆ. ಇಲ್ಲಿನ ಹಲವು ಗ್ರಾಮಗಳಿಗೆ ಅದೆಷ್ಟೋ ವರ್ಷದ ಹೋರಾಟದ ಫಲವಾಗಿ ಮೂಲ ಸೌಕರ್ಯಗಳು ದೊರೆತಿವೆ. ಅದರಂತೆ ತಾಲೂಕಿನ ಹೆಬ್ಬಾಳದಿಂದ ಶಿವಪುರ ಸಂಪರ್ಕಿಸುವ ರಸ್ತೆಗಾಗಿ ಗ್ರಾಮಸ್ಥರು 25 ವರ್ಷಗಳ ಕಾಲ ನಡೆಸಿದ ಹೋರಾಟದಿಂದಾಗಿ ಐದಾರು ವರ್ಷದ ಹಿಂದೆ ಇಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ರಸ್ತೆ ಮಂಜೂರಾಗಿತ್ತು. ಈಗಿನ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ 11 ಕೋಟಿ ರೂ.ಗಳನ್ನು ಈ ರಸ್ತೆ ನಿರ್ಮಾಣಕ್ಕೆ ಮಂಜೂರಿಸಿದ್ದರು.
ಜೋಯಿಡಾ ಭಾಗದಿಂದ ಇರುವ ಏಕೈಕ ರಸ್ತೆ
ಜೋಯಿಡಾ ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರನ ಸನ್ನಿಧಾನಕ್ಕೆ ಬರುವ ಬಹುತೇಕರು ರಾಜ್ಯದ ಅತಿದೊಡ್ಡ ತೂಗುಸೇತುವೆ ಎನ್ನಲಾದ ಶಿವಪುರದ ಸೇತುವೆ ನೋಡಲೆಂದು ಬರುತ್ತಿದ್ದರು. ಹೀಗಾಗಿ, ಈ ಸೇತುವೆಗೆ ಹೋಗಲು ಜೋಯಿಡಾ ಭಾಗದಿಂದ ಇರುವ ಏಕೈಕ ರಸ್ತೆ ಇದಾಗಿದ್ದರಿಂದ, ಅನುದಾನ ಬಿಡುಗಡೆಯಾಗುತ್ತಿದ್ದಂತೆ ಇಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕಾಮಗಾರಿ ಕೈಗೆತ್ತಿಕೊಂಡಿದ್ದವರು ಸುಮಾರು 11 ಕಿಲೋಮೀಟರ್ ರಸ್ತೆಯಲ್ಲಿ ಎರಡು ಕಿಲೋಮೀಟರ್ ನಷ್ಟು ಕಾಂಕ್ರೀಟ್ ರಸ್ತೆ ನಿರ್ಮಿಸಿ, ಇನ್ನು ನಾಲ್ಕು ಕಿಲೋ ಮೀಟರ್ ನಲ್ಲಿ ಡಾಂಬರ್ ರಸ್ತೆ ನಿರ್ಮಿಸಿ ಹೊರಟವರು ಮತ್ತೆ ಇತ್ತ ತಲೆ ಹಾಕಿಯೇ ಇಲ್ಲ.
'ಕೋವಿಡ್ ವರ್ಷ'ದಲ್ಲೂ ಇಳಿಕೆಯಾಗದ ಅಪರಾಧ'; ಹೆಚ್ಚಿದ ಡ್ರಗ್ಸ್ ಪ್ರಕರಣಗಳ ಸದ್ದು
ಜಲ್ಲಿ ಕಲ್ಲುಗಳನ್ನು ಸುರಿಯಲಾಗಿದೆ
ಇತ್ತ ಡಾಂಬರೀಕರಣಗೊಂಡ ರಸ್ತೆ ಕೂಡ ಕಳಪೆ ಕಾಮಗಾರಿಯಿಂದಾಗಿ ಕಿತ್ತು ಹೋಗಿದ್ದು, ಮಿಕ್ಕುಳಿದ ರಸ್ತೆಯ ಕಾಮಗಾರಿಗಾಗಿ ಘಟ್ಟ ಪ್ರದೇಶದಲ್ಲಿ ಜಲ್ಲಿ ಕಲ್ಲುಗಳನ್ನು ಕಳೆದೆರಡು ವರ್ಷಗಳ ಹಿಂದೆ ಸುರಿದಿಡಲಾಗಿದೆ. ಇದರಿಂದಾಗಿ ಅಂದಾಜು ಆರೇಳು ಕಿಲೋಮೀಟರ್ ರಸ್ತೆಯಲ್ಲಿ ಸಂಚಾರವೇ ಸಾಧ್ಯವಿಲ್ಲವೆಂಬಂತಾಗಿದೆ.
ಕರೆ ಮಾಡಿದರೂ ಆಂಬ್ಯುಲೆನ್ಸ್ ಬರುವುದಿಲ್ಲ
ಸುಮಾರು ಎಂಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಜೋಯಿಡಾದಿಂದ ಯಲ್ಲಾಪುರದ ನಡುವಿನ ಸಂಪರ್ಕ ರಸ್ತೆಯಾಗಿದೆ. ಈ ಭಾಗದಲ್ಲಿ ಬೆಳೆಯುವ ಅಡಿಗೆ, ತೆಂಗು, ಬಾಳೆಯಂಥ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ರೈತರು ಹರಸಾಹಸ ಪಡಬೇಕಿದೆ. ಇನ್ನು, ರಸ್ತೆಯ ದುರವಸ್ಥೆಯಿಂದಾಗಿ ತುರ್ತು ಸಂದರ್ಭದಲ್ಲಿ ಕರೆ ಮಾಡಿದರೂ, ಆಂಬ್ಯುಲೆನ್ಸ್ ಬರುವುದಿಲ್ಲ. ಹೀಗಾಗಿ ಅನಾರೋಗ್ಯದ ಸಂದರ್ಭದಲ್ಲಿ ರೋಗಿಗಳನ್ನು ಕಂಬಳಿಯಲ್ಲಿ ಸುತ್ತಿಕೊಂಡು ಗ್ರಾಮಸ್ಥರೇ ಎತ್ತಿಕೊಂಡು ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ.
Recommended Video
ಅನುದಾನ ಮಂಜೂರಾದರೂ ರಸ್ತೆ ಕಾಮಗಾರಿ ಅಪೂರ್ಣ
ಇನ್ನು, ಅನುದಾನ ಮಂಜೂರಾದರೂ ರಸ್ತೆ ಕಾಮಗಾರಿ ಪೂರ್ಣಗೊಳಿಸದೇ ಇರುವುದು ಇಲ್ಲಿನ ಗ್ರಾಮಸ್ಥರಿಗೆ ಬೇಸರ ತಂದಿದೆ. ರಸ್ತೆ ಮಾಡಿಕೊಡುವಂತೆ ಎಷ್ಟೇ ಒತ್ತಾಯಿಸಿದರೂ ಇಲ್ಲಿನ ಜನರ ಅಳಲನ್ನು ಕೇಳುವವರೇ ಇಲ್ಲವಾಗಿದ್ದಾರೆ. ಈ ಗ್ರಾಮಗಳ ರಸ್ತೆ ಸಂಚಾರ ಬಹು ಕಠಿಣವಾಗಿದೆ. ಚುನಾವಣೆ ಸಂದರ್ಭದಲ್ಲಿ ರಸ್ತೆ ಮಾಡಿಕೊಡುತ್ತೇವೆಂದು ಜನಪ್ರತಿನಿಧಿಗಳು ಮತ ಕೇಳಲು ಬರುತ್ತಾರೆ. ಆದರೆ, ಅವು ಆಶ್ವಾಸನೆಯಾಗಿಯೇ ಉಳಿಯುತ್ತಿವೆ ಬಿಟ್ಟರೆ ಯಾವುದೂ ಈಡೇರುತ್ತಿಲ್ಲ. ಹೀಗಾಗಿ, ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಿದ್ದು, ಮತಪೆಟ್ಟಿಗೆಯನ್ನೂ ವಾಪಸ್ ಕಳುಹಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.