ವಿಡಿಯೋ ವೈರಲ್: ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸದ ಚಾಲಕ, ಮಾರುದೂರ ಓಡಿದ ವಿದ್ಯಾರ್ಥಿಗಳು!
ಕಾರವಾರ, ಮಾರ್ಚ್ 2: ವಿದ್ಯಾರ್ಥಿಗಳು ಕಾಯುತ್ತ ನಿಂತಿದ್ದ ಸ್ಥಳದಲ್ಲಿ ಬಸ್ ನಿಲ್ಲಿಸದೆ, ಮಾರು ದೂರದಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳು ಓಡುವಂತೆ ಮಾಡಿದ ಸಾರಿಗೆ ಬಸ್ ಚಾಲಕನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಪೂಜಗೇರಿಯಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಪೂಜಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳ ಹಿಂದೆ ಬಸ್ ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಬಾಸಗೋಡ ಮೂಲಕ ಬಂದ ಬಸ್ಸನ್ನು ಚಾಲಕ ನಿಲುಗಡೆ ಜಾಗದಲ್ಲಿ ಬಸ್ ನಿಲ್ಲಿಸದೆ, ಮಾರು ದೂರದವರೆಗೆ ಮುಂದೆ ಸಾಗಿ ನಿಲ್ಲಿಸಿದ್ದಾರೆ. ಹೀಗಾಗಿ ಬಸ್ ಹತ್ತಲು ವಿದ್ಯಾರ್ಥಿಗಳು ಬಸ್ಸಿನ ಹಿಂದೆ ಓಡಿದ್ದಾರೆ.
ಉತ್ತರ ಕನ್ನಡ ಬಾಣಂತಿ ಸಾವಿನ ಪ್ರಕರಣ: ಮೀನುಗಾರರಿಂದ ಮತ್ತೆ ಪ್ರತಿಭಟನೆ
ಕೆಲವು ವಿದ್ಯಾರ್ಥಿಗಳು ಓಡಿ ಹೋಗಿ ಬಸ್ ಹಿಡಿದರೆ, ಕೆಲವರು ನಿರಾಶರಾಗಿ ವಾಪಸ್ ಬಂದು ಬೇರೆ ಬಸ್ ಗಾಗಿ ಕಾದಿದ್ದಾರೆ. ಈ ದೃಶ್ಯವನ್ನು ಕಾಲೇಜಿನ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದು, ಬಸ್ ಚಾಲಕನ ಈ ವರ್ತನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲೇಜಿನ ವಿದ್ಯಾರ್ಥಿಗಳು ಈ ರೀತಿಯ ತೊಂದರೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ತಾಲ್ಲೂಕಿನ ಬೇರೆಬೇರೆ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ಕೂಡ ಬಸ್ ಚಾಲಕರ ಕುರಿತು ಇದೇ ದೂರು ಹೇಳುತ್ತಾರೆ. ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಕಾಯುತ್ತ ನಿಂತಿದ್ದ ಸ್ಥಳದಲ್ಲಿ ಬಸ್ ನಿಲ್ಲಿಸದೆ, ಮಾರು ದೂರದಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳು ಓಡುವಂತೆ ಮಾಡಿದ ಸಾರಿಗೆ ಬಸ್ ಚಾಲಕನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಪೂಜಗೇರಿಯಲ್ಲಿ ನಡೆದಿದೆ.#UttaraKannada #Students pic.twitter.com/iXWfgyVoNc
— oneindiakannada (@OneindiaKannada) March 2, 2021
ಅಂಕೋಲಾ ತಾಲ್ಲೂಕು ಕೇಂದ್ರದಿಂದ 3 ಕಿಮೀ ದೂರದ ಪೂಜಗೇರಿಯಲ್ಲಿರುವ ಈ ಕಾಲೇಜಿನಲ್ಲಿ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತ್ತಕೋತ್ತರ ಕೇಂದ್ರ ವ್ಯಾಸಂಗ ಮಾಡುತ್ತಿದ್ದಾರೆ.
ಅರ್ಥಶಾಸ್ತ್ರ ಸ್ನಾತ್ತಕೋತ್ತರ ವಿಭಾಗ ಹೊಂದಿದ ಜಿಲ್ಲೆಯ ಏಕೈಕ ಕಾಲೇಜು ಕೂಡ ಇದಾಗಿದೆ. ಈ ಎಲ್ಲಾ ವಿದ್ಯಾರ್ಥಿಗಳ ಪೈಕಿ ಸುಮಾರು 500ಕ್ಕೂ ಅಧಿಕ ಮಂದಿ ನಿತ್ಯ ಬಸ್ ಗಳ ಮೂಲಕ ಕಾಲೇಜಿಗೆ ಬರುತ್ತಿದ್ದಾರೆ. ತಾಲ್ಲೂಕು ಕೇಂದ್ರದಿಂದ ಕಣಗಿಲ್, ಬೆಳಂಬಾರ, ಹೊನ್ನೆಬೈಲ್, ಮಂಜಗುಣಿಗೆ ಹೊರಡುವ ಬಸ್ ಗಳಲ್ಲಿ ಪ್ರಯಾಣಿಸಬೇಕು. ಆದರೆ ಈ ಬಸ್ ಗಳ ಸಂಖ್ಯೆ ಕಡಿಮೆ ಇದೆ. ಇರುವ ಕೆಲವೇ ಬಸ್ ಗಳಲ್ಲಿ ಸೀಟು ಪಡೆಯುವುದು ಹೋಗಲಿ ಒಳಗೆ ನಿಲ್ಲಲು ಸಹ ಜಾಗ ಇರುವುದಿಲ್ಲ.
Recommended Video
ಈಗ ಸಮಯಕ್ಕೆ ಸರಿಯಾಗಿ ಬಸ್ಗಳು ಬಾರದ ಕಾರಣ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಧಿಕ ಹಣ ನೀಡಿ ಆಟೊದಲ್ಲಿ ಸಂಚರಿಸಬೇಕಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.