ಕಾರವಾರ; ವೇದಿಕೆಯಲ್ಲಿಯೇ ಹಾಲಿ, ಮಾಜಿ ಶಾಸಕರ ಕಿತ್ತಾಟ
ಅಂಕೋಲಾ, ಮಾರ್ಚ್ 23: ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಎಲ್ಲರ ಮುಂದೆಯೇ ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಕಿತ್ತಾಟ ನಡೆಸಿದ್ದಾರೆ. ಇದರಿಂದಾಗಿ ಸ್ಥಳದಲ್ಲೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಹೋಟೆಲ್ ಮಾಲೀಕ ಪೇಚಿಗೆ ಸಿಲುಕುವಂತಾದ ಘಟನೆ ನಡೆದಿದೆ.
ಪಟ್ಟಣದ ಹೆದ್ದಾರಿ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೋಟೆಲ್ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರಿಗೆ ಹೋಟೆಲ್ ಮಾಲೀಕರು ಆಹ್ವಾನಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಅತಿಥಿಗಳ ಭಾಷಣದ ಅವಧಿಯಲ್ಲಿ ತಮ್ಮ ಸರದಿ ಬರುತ್ತಿದ್ದಂತೆ ಮಾಜಿ ಶಾಸಕ ಸತೀಶ್ ಸೈಲ್ ಮಾತು ಪ್ರಾರಂಭಿಸಿದರು.
ವೈರಲ್ ವಿಡಿಯೋ; ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಸಖತ್ ಡ್ಯಾನ್ಸ್!
"ಹೋಟೆಲ್ ನಿರ್ಮಾಣದಿಂದ ಪ್ರವಾಸೋದ್ಯಮ ಚಟುವಟಿಕೆ ಬೆಳವಣಿಗೆಗೆ ಸಹಕಾರಿಯಾಗಲಿದೆ. ನನ್ನ ಅವಧಿಯಲ್ಲಿ ಸಾಕಷ್ಟು ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಗಳನ್ನು ತಂದಿದ್ದೆ. ಕಾರವಾರ ತಾಲೂಕಿನ ಗೋವಾ ಗಡಿಯಲ್ಲಿನ ತೀಳ್ಮಾತಿ ಕಡಲತೀರಕ್ಕೆ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದೆವು. ಆದರೆ ಇಲ್ಲಿಯವರೆಗೂ ಯಾಕೆ ಕೆಲಸ ಆಗಿಲ್ಲ ಎಂದು ಗೊತ್ತಿಲ್ಲ?. ಒಬ್ಬ ಗುತ್ತಿಗೆದಾರ ಈ ಕಾಮಗಾರಿ ತೆಗೆದುಕೊಂಡು ಹಿಂದೆ ಸರಿದರು" ಎಂದರು.
ರೂಪಾಲಿ, ಸೈಲ್ ಬಹಿರಂಗ ವಾಕ್ಸಮರ; ಚುನಾವಣಾ ಬಳಿಕವೂ ಮುಂದುವರಿದ ಜಟಾಪಟಿ
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಶಾಸಕಿ ರೂಪಾಲಿ ನಾಯ್ಕ, "ನಿಮ್ಮ ಅವಧಿಯಲ್ಲಿ ಮಾಡಿದ್ದರೆ ಯಾವಾಗಲೋ ಕೆಲಸ ಆಗುತ್ತಿತ್ತು" ಎಂದು ಹೇಳಿ ಎಂದರು. ಇದಕ್ಕೆ ಸೈಲ್ ಪ್ರತಿಕ್ರಿಯೆ ನೀಡಿ, "ನಾವು ಮಾಡಿದ್ದೇವೆ, ನೀವು ಮಾಡಿದ್ದೇವೆ ಎಂದು ಹೇಳಬೇಡಿ. ರಾಜಕೀಯ ಚರ್ಚೆ ಮಾಡುವುದಕ್ಕೆ ಬೇರೆ ಒಂದು ದಿನ ನಿಗದಿ ಮಾಡಿ, ಅಲ್ಲಿ ಚರ್ಚೆ ಮಾಡೋಣ" ಎಂದರು.
ಮಾಜಿ ಶಾಸಕ ಸತೀಶ್ ಸೈಲ್ ಆಯ್ಕೆ ಅಕ್ರಮ: ಉಸ್ತುವಾರಿ ಸಚಿವರಿಗೆ ದೂರು
ಇದಕ್ಕೆ ಪ್ರತಿಕ್ರಿಯಿಸಿದ ರೂಪಾಲಿ, "ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಟೆಂಡರ್ ಆಗಿದ್ದರೂ ನಿಮ್ಮ ಅವಧಿಯಲ್ಲಿ ಯಾಕೆ ಕೆಲಸ ಆಗಿಲ್ಲ ಎಂದೂ ಸ್ಪಷ್ಟಪಡಿಸಿ ಎಂದಾಗ, ಕಾಂಗ್ರೆಸ್- ಬಿಜೆಪಿ ಪ್ರಶ್ನೆ ಬೇಡ. ಆಗ ಕಾಂಗ್ರೆಸ್ನಲ್ಲಿದ್ದವರೇ ಈಗ ನಿಮ್ಮ ಸಚಿವರಾಗಿದ್ದಾರೆ" ಎಂದು ಸೈಲ್ ತಿರುಗೇಟು ನೀಡಿದರು. ಆಗ ಸೈಲ್ ಅಭಿಮಾನಿಗಳು ಚಪ್ಪಾಳೆ ಹೊಡಿದರು. ಇದಕ್ಕೆ ರೂಪಾಲಿ, "ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿ ಬಂದ ನಂತರವೇ ಸಚಿವರಾಗಿದ್ದಾರೆ. ಅವರು ಕಾಂಗ್ರೆಸ್ ಸಚಿವರಲ್ಲ" ಎಂದು ಜೋರಾಗಿ ಕಿಡಿಕಾರಿದ್ದು, ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣ ಮಾಡಿತು.
ವೇದಿಕೆಯಲ್ಲಿ ಕುಳಿತಿದ್ದ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಹೋಟೆಲ್ ಮಾಲಿಕನಿಗೆ ಏನು ಹೇಳಬೇಕೋ ಎಂದು ತಿಳಿಯದೇ ಈ ಘಟನೆಯಿಂದ ಪೇಚಿಗೆ ಸಿಲುಕುವಂತೆ ಮಾಡಿತ್ತು. ಈ ಬಗ್ಗೆ ಚರ್ಚೆ ಬೇಡ ಎಂದು ಸೈಲ್ ಮಾತು ನಿಲ್ಲಿಸಿದಾಗ ಪರಿಸ್ಥಿತಿ ತಿಳಿಗೊಂಡಿತು. ಕಾರ್ಯಕ್ರಮ ಮುಗಿದ ನಂತರ ಹೋಟೆಲ್ ಮಾಲೀಕನಿಗೆ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್ರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಕಿತ್ತಾಟ ಇದೇ ಮೊದಲಲ್ಲ; ಶಾಸಕಿ ಹಾಗೂ ಸೈಲ್ ನಡುವಿನ ಕಿತ್ತಾಟ ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಬಳಿಯ ಐಆರ್ಬಿ ಟೋಲ್ ಗೇಟ್ನಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಕಿತ್ತಾಟ ನಡೆದಿತ್ತು. ಟೋಲ್ ಪ್ರಾರಂಭ ಮಾಡಿದ ನಂತರ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವಂತೆ ಪ್ರತಿಭಟನೆ ನಡೆಸಲಾಗಿತ್ತು. ಐಆರ್ಬಿ ಅಧಿಕಾರಿಗಳೊಂದಿಗೆ ಈ ಸಂಬಂಧ ಚರ್ಚೆ ನಡೆಸುವಾಗ ರೂಪಾಲಿ ನಾಯ್ಕ, ಮಾಜಿ ಶಾಸಕರಾದ ಸತೀಶ್ ಸೈಲ್ ಹಾಗೂ ಆನಂದ್ ಅಸ್ನೋಟಿಕರ್ ಮೂವರೂ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಇಬ್ಬರು ಕಿತ್ತಾಟ ನಡೆಸಿದ್ದರು. ಇದಲ್ಲದೇ ಕಾರವಾರ ತಾಲೂಕಿನ ಕೈಗಾದಲ್ಲಿ ಐದು ಮತ್ತು ಆರನೇ ಘಟಕ ನಿರ್ಮಾಣ ವಿರೋಧ ಪ್ರತಿಭಟನೆ ಮಾಡುವ ವೇಳೆಯಲ್ಲೂ ಮೂವರು ನಾಯಕರು ಒಟ್ಟಿಗೆ ಪಾಲ್ಗೊಂಡಿದ್ದು, ಆ ಸಂದರ್ಭದಲ್ಲೂ ಮಾತಿಗೆ ಮಾತು ಬೆಳೆದು ಸೈಲ್ ಹಾಗೂ ರೂಪಾಲಿ ಬಹಿರಂಗವಾಗಿ ಕಿತ್ತಾಟ ನಡೆಸಿದ್ದರು.
Recommended Video
ಇಬ್ಬರ ನಡುವಿನ ದ್ವೇಷ ರಾಜಕೀಯ ಈಗಲೂ ಮುಂದುವರೆದಿದೆ ಎನ್ನಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ಇದು ಯಾವ ರೂಪಕ್ಕೆ ತಿರುಗಲಿದೆ ಎಂದು ಕಾದು ನೋಡಬೇಕಾಗಿದೆ.