ಯಲ್ಲಾಪುರದಲ್ಲಿ ಹೊಸ ಜಾತಿ ಏಡಿ ಪತ್ತೆ: ಇದು ದೇಶದ 75ನೇ ಜಾತಿ ಏಡಿ!!
ಕಾರವಾರ, ಆಗಸ್ಟ್ 17: ಸಿಹಿ ನೀರಿನಲ್ಲಿ ಕಂಡು ಬರುವ ಹೊಸ ಜಾತಿಯ ಘಟಿಯಾನ ದ್ವಿವರ್ಣದ ಏಡಿಯೊಂದು ಯಲ್ಲಾಪುರದಲ್ಲಿ ಪತ್ತೆಯಾಗಿದೆ. ಇದು ದೇಶದಲ್ಲಿ ಕಂಡುಬರುವ ವಿವಿಧ ಏಡಿಗಳ ಪೈಕಿ ಇದು 75ನೇ ಜಾತಿಯ ಏಡಿಯಾಗಿದ್ದು, 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸಿಕ್ಕಿರುವುದು ಮತ್ತಷ್ಟು ವಿಶೇಷಕ್ಕೆ ಕಾರಣವಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ, ನಿಸರ್ಗ ತಜ್ಞರಾದ ಗೋಪಾಲಕೃಷ್ಣ ಹೆಗಡೆ, ಸಮೀರಕುಮಾರ ಪಾಟಿ ಮತ್ತು ತೇಜಸ್ ಥಾಕರೆ ತಂಡದವರು ಈ ಘಟಿಯಾನ ಪ್ರಭೇದದ ಹೊಸ ಜಾತಿಯ ಸಿಹಿನೀರಿನ ಏಡಿಯನ್ನು ಪತ್ತೆಹಚ್ಚಿ ಸಂಶೋಧನೆ ನಡೆಸಿದ್ದಾರೆ.
ಉತ್ತರ ಕನ್ನಡ: ಗ್ಯಾರೇಜ್ನಲ್ಲಿ ತುಕ್ಕು ಹಿಡಿಯುತ್ತಿರುವ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್
ವಿಜ್ಞಾನಿಗಳ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಈವರೆಗೆ 4 ಸಾವಿರ ಜಾತಿಯ ಏಡಿಗಳು ಇದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಭಾರತದಲ್ಲಿಯೇ 125 ವಿವಿಧ ಜಾತಿಯ ಏಡಿಗಳನ್ನು ಗುರುತಿಸಲಾಗಿದೆ. ಘಟಿಯಾನ ಪ್ರಭೇದದಲ್ಲಿ ಇಲ್ಲಿಯವರೆಗೆ 13 ವಿವಿಧ ಜಾತಿಯ ಸಿಹಿ ನೀರಿನ ಏಡಿಗಳನ್ನು ಗುರುತಿಸಲಾಗಿದ್ದು, ಇದೀಗ ಪತ್ತೆಮಾಡಿರುವ ಘಟಿಯಾನ ದ್ವಿವರ್ಣ 14ನೇ ಸಿಹಿನೀರಿನ ಏಡಿಯಾಗಿದೆ.
ವಿಶ್ವದಲ್ಲಿಯೇ ಜೀವವೈಧ್ಯದ ತಾಣವಾಗಿ ಖ್ಯಾತಿ ಹೊಂದಿರುವ ಭಾರತದ ಪಶ್ಚಿಮ ಘಟ್ಟಗಳಲ್ಲಿ ಒಟ್ಟು 74 ವಿವಿಧ ಜಾತಿಯ ಏಡಿಗಳನ್ನು ಗುರುತಿಸಲಾಗಿದೆ. ಆದರೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ 75ನೇ ಏಡಿ ಪತ್ತೆಹಚ್ಚಿರುವುದು ಇದೀಗ ಮತ್ತಷ್ಟು ವಿಶೇಷತೆಗೆ ಕಾರಣವಾಗಿದೆ.
ಘಟಿಯಾನ ಪ್ರಭೇದದ ಏಡಿಗಳು ವಿಶೇಷವಾದ ವರ್ಣಗಳಿಂದ ಕೂಡಿದ್ದು, ಆಕರ್ಷಣೀಯವಾಗಿರುತ್ತವೆ. ಸದ್ಯ ಪತ್ತೆಯಾಗಿರುವ ಏಡಿಯ ದೇಹದ ವರ್ಣ ಬಿಳಿ ಮತ್ತು ಕಾಲುಗಳು ಚಾಕಲೇಟ್ ವರ್ಣಗಳಿಂದ ಕೂಡಿರುವುದರಿಂದ ದ್ವಿವರ್ಣ ಎಂದು ನಾಮಕರಣ ಮಾಡಲಾಗಿದೆ. ಪಶ್ಚಿಮ ಘಟ್ಟದ ಎತ್ತರ ಪ್ರದೇಶದಲ್ಲಿರುವ ಬಂಡೆಗಳಲ್ಲಿನ ಅಡಿಯಲ್ಲಿರುವ ರಂದ್ರಗಳಲ್ಲಿ ಈ ಏಡಿಗಳು ಹೆಚ್ಚಾಗಿ ವಾಸ ಮಾಡುತ್ತವೆ. ಇವು ಸಣ್ಣಪುಟ್ಟ ಹುಳುಗಳು ಮತ್ತು ಪಾಚಿಗಳನ್ನು ತಿಂದು ಬದುಕುತ್ತವೆ ಎಂದು ಸಂಶೋಧನಾ ತಂಡದವರು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಪರಶುರಾಮ ಭಜಂತ್ರಿ ಸೇರಿದಂತೆ ಸಂಶೋಧನಾ ತಂಡವನ್ನು ಸಿಸಿಎಫ್ ವಸಂತರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ, ಯಲ್ಲಾಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತುರಾಜ, ಅಣಶಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ ಅಭಿನಂದಿಸಿದ್ದಾರೆ.
ಪಶ್ಚಿಮ ಘಟ್ಟವು ವಿಶಿಷ್ಟವಾದ ಅಸಂಖ್ಯಾತ ಜೀವರಾಶಿ ಹೊಂದಿದ್ದು, ವಿಶ್ವದ ಪ್ರಖ್ಯಾತ ಜೀವವೈವಿಧ್ಯ ತಾಣವಾಗಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹೆಚ್ಚಿನ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಆಹಾರ ಸರಪಳಿಯಲ್ಲಿ ಏಡಿಗಳು ಮಹತ್ವದ ಪಾತ್ರ ವಹಿಸುವುದರ ಮೂಲಕ ಪರಿಸರ ವವ್ಯಸ್ಥೆಯ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತವೆ. ಆವಾಸ ಸ್ಥಾನ ನಾಶದಿಂದಾಗಿ ಹಲವಾರು ಪ್ರಭೇದದ ಜೀವಿಗಳು ವಿನಾಶದಂಚು ತಲುಪುತ್ತಿವೆ. ಇವುಗಳ ಉಳಿವಿಗೆ ಪಶ್ಚಿಮಘಟ್ಟದ ಸಂರಕ್ಷಣೆ ಆಗಬೇಕು. ಈ ಸಂಶೋಧನೆಯು ಇಲಾಖೆಯ ಸಿಬ್ಬಂದಿಗೆ ಪ್ರೇರಣೆಯಾಗಿದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ತಿಳಿಸಿದ್ದಾರೆ.