ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಸ್ತಾವನೆ ನಿರಾಕರಣೆ: ಉತ್ತರ ಕನ್ನಡಿಗರ ಹೋರಾಟಕ್ಕೆ ಮತ್ತೆ ನಿರಾಸೆ!
ಕಾರವಾರ, ಸೆಪ್ಟೆಂಬರ್ 15: ಉತ್ತರನ್ನಡ ಜಿಲ್ಲೆಯ ಬಹುವರ್ಷದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕನಸಿಗೆ ಮತ್ತೆ ರಾಜ್ಯ ಸರ್ಕಾರ ತಣ್ಣೀರೆರಚಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಂಜೂರಾತಿಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದ್ದು, ಜಿಲ್ಲೆಯ ಜನ ಮತ್ತೆ ಅತಿ ಅಗತ್ಯವಿದ್ದ ಆರೋಗ್ಯ ಸೇವೆಯಿಂದ ವಂಚಿತರಾಗುವಂತಾಗಿದೆ.
ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಸೌಲಭ್ಯಕ್ಕಾಗಿ ಅಗತ್ಯವಿರುವ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಇತ್ಯಾದಿ ಮೂಲ ಸೌಲಭ್ಯಗಳು ಹಾಗೂ ಅದಕ್ಕೆ ತಗಲುವ ಆರ್ಥಿಕ ಹೊರೆಯ ವಿವರಗಳ ಪ್ರಸ್ತಾವನೆ ಪಡೆದಿದ್ದ ರಾಜ್ಯ ಸರ್ಕಾರ ಆರ್ಥಿಕ ಇಲಾಖೆಗೆ ಸಲ್ಲಿಕೆ ಮಾಡಿತ್ತು. ಆದರೆ ಆರ್ಥಿಕ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ ಎಂದು ಗುರುವಾರ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಅಧಿವೇಶನದಲ್ಲಿ ಲಿಖಿತ ರೂಪದ ಉತ್ತರ ನೀಡಿದ್ದಾರೆ.
ಉತ್ತರ ಕನ್ನಡ ಜನತೆಗೆ ಭಾರಿ ನಿರಾಶೆ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸದ್ಯಕ್ಕಿಲ್ಲ
ಆಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ಆಸ್ಪತ್ರೆ ಮಂಜೂರಾತಿ ಮತ್ತೊಮ್ಮೆ ಕಡತವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿ ಕ್ರಮವಹಿಸಲಾಗುವುದು. ಇದಕ್ಕೆ ಸಹಮತ ಬಂದಲ್ಲಿ ಅನುದಾನ ಲಭ್ಯತೆಗೆ ಅನುಗುಣವಾಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಂಜೂರಾತಿಗೆ ಕ್ರಮವಹಿಸಲಾಗುವುದು ಅವರು ತಿಳಿಸಿದ್ದಾರೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಡೆಸಿದ ಎಲ್ಲಾ ಹೋರಾಟಕ್ಕೆ ತಣ್ಣೀರು
ಆದರೆ ಇದಕ್ಕೆ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೀರೋಧ ವ್ಯಕ್ತವಾಗತೊಡಗಿದೆ. ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿರುವ ಉತ್ತರಕನ್ನಡದಲ್ಲಿ ಸೂಕ್ತ ಆಸ್ಪತ್ರೆಗಳಿಲ್ಲ. ಕಳೆದ ಹಲವು ದಶಕಗಳಿಂದ ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ನಡೆಸಿದರೂ ಜಿಲ್ಲೆಯ ಜನರ ಮನವಿಗಳನ್ನು ಮತ್ತೆ ಮತ್ತೆ ತಳ್ಳಿಹಾಕಲಾಗುತ್ತಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಟ್ವಿಟ್ಟರ್ ಅಭಿಯಾನ, ಪ್ರಧಾನಿಗೆ ರಕ್ತದಲ್ಲಿ ಪತ್ರ, ಮೆರವಣಿಗೆ ಸೇರಿದಂತೆ ರಾಜ್ಯ ರಾಜಧಾನಿಯಲ್ಲಿಯೂ ಹೋರಾಟ ನಡೆಸಲಾಗಿತ್ತು.
ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ವಿದ್ಯುತ್ ದೀಪಗಳ ಕೊರತೆ; ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ
ಸಾರ್ವಜನಿಕರ ಆಕ್ರೋಶ
ಹೋರಾಟದ ಬೆನ್ನಲ್ಲೆ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತಿಂಗಳೊಳಗಾಗಿ ಬಂದು ಆಸ್ಪತ್ರೆ ಮಂಜೂರು ಮಾಡಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಆರ್ಥಿಕ ಇಲಾಖೆ ನಿರಾಕರಣೆ ಮಾಡಿದೆ. ಹೋರಾಟದ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಘು ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ದಿವಾಳಿಗೆ ಬಂದಂತೆ ಕಾಣುತ್ತಿದೆ
ಸದನದಲ್ಲಿ ಸಭಾಧ್ಯಕ್ಷರು ಸೇರಿದಂತೆ ಸಚಿವರು, ಶಾಸಕರುಗಳಿದ್ದರು ಜಿಲ್ಲೆಯ ಜನರ ಪರ ಧ್ವನಿ ಎತ್ತಿ ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳುವ ತಾಕತ್ತು ನಮ್ಮವರಿಗಿಲ್ಲ. ಕಾರವಾರದ ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ವೈದ್ಯರು ಸಲಕರಣೆಗಳನ್ನು ಪೂರೈಕೆ ಮಾಡಲಾಗುತ್ತಿಲ್ಲ. ಸರಕಾರ ದಿವಾಳಿಗೆ ಬಂದಂತೆ ಕಾಣುತ್ತಿದೆ. ಹೀಗಿರುವಾಗ ವೈದ್ಯಕೀಯ ಮಹಾವಿದ್ಯಾಲಯಕ್ಕಾದರೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಜನರ ಪ್ರಾಣ ರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
ಇನ್ನು ಸುಸಜ್ಜಿತ ಆಸ್ಪತ್ರೆಗಾಗಿ ಸದನದಲ್ಲಿ ಶಾಸಕಿ ರೂಪಾಲಿ ನಾಯ್ಕ ಧ್ವನಿ ಎತ್ತಿದಾಗ ಜಿಲ್ಲೆಯವರೇ ಆದ ಸಭಾಧ್ಯಕರು ಸಮಸ್ಯೆ ಪರಿಹಾರದ ಚರ್ಚೆಗೆ ಅವಕಾಶ ನೀಡದಿರುವುದು ಖೇದಕರ. ಎಲ್ಲ ಶಾಸಕರು ಸದನದಲ್ಲಿ ಧ್ವನಿ ಎತ್ತಿ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಆಸ್ಪತ್ರೆ ಮಂಜೂರಿಸಲು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆ ಮುಖಂಡ ಭಾಸ್ಕರ್ ಪಟಗಾರ ಆಗ್ರಹಿಸಿದ್ದಾರೆ.
ಧ್ವನಿ ಎತ್ತಿದ ರೂಪಾಲಿ ನಾಯ್ಕ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮಂಜೂರಿಗೆ ಆರ್ಥಿಕ ಇಲಾಖೆ ಸಹಮತ ನೀಡಿಲ್ಲ ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಲಿಖಿತ ಉತ್ತರಕ್ಕೆ ಶಾಸಕಿ ರೂಪಾಲಿ ನಾಯ್ಕ ಸದನದಲ್ಲಿ ಗಟ್ಟಿಯಾದ ಧ್ವನಿ ಎತ್ತಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ 24 ಮನವಿಗಳನ್ನು ನೀಡಿದ್ದೇನೆ. ಜಿಲ್ಲೆಯಲ್ಲಿ ಆಸ್ಪತ್ರೆ ಆಗಲೇಬೇಕು ಎಂದು ಆಗ್ರಹಿಸುವಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಇದು ಗಂಭೀರ ವಿಷಯ. ಈಗ ಸಚಿವರು ಇಲ್ಲದ ಕಾರಣ ಮುಂದಿನ ವಾರ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು. ಆದರೂ ಪಟ್ಟು ಬಿಡದೆ ಶಾಸಕಿ ಒತ್ತಾಯಿಸಿದರೂ ಈಗ ಪ್ರಶ್ನೋತ್ತರ ಅವಧಿ, ಚರ್ಚೆಗೆ ಅವಕಾಶ ಇಲ್ಲ. ಮುಂದಿನ ವಾರ ಅವಕಾಶ ಮಾಡಿಕೊಡುವುದಾಗಿ ಹೇಳಿ ಸಭಾಧ್ಯಕ್ಷರು ನಿರಾಕರಿಸಿದರು.