ಐಪಿಎಸ್ ವರ್ಗಾವಣೆ; ಉತ್ತರಕನ್ನಡ, ಮಂಡ್ಯದ ಊಹಾಪೋಹಕ್ಕೆ ಬ್ರೇಕ್!
ಕಾರವಾರ, ಅಕ್ಟೋಬರ್ 30; ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದ ಮಂಡ್ಯ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗಳಿಗೆ ಅಂತೂ ವರ್ಗಾವಣೆ ಆದೇಶ ನೀಡಿ ಸರ್ಕಾರ ಊಹಾಪೋಹಗಳಿಗೆ ಬ್ರೇಕ್ ಹಾಕಿದೆ. ಕಳೆದ ಎರಡು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಪ್ರಕಾಶ್ ದೇವರಾಜು ಅವರನ್ನು ವರ್ಗಾಯಿಸಲು ಐದು ತಿಂಗಳ ಹಿಂದಿನಿಂದಲೂ ಪ್ರಯತ್ನ ನಡೆದಿತ್ತು.
2019ರ ಆಗಸ್ಟ್ ತಿಂಗಳಿನಲ್ಲಿ ಉತ್ತರ ಕನ್ನಡಕ್ಕೆ ನೇಮಕಗೊಂಡಿದ್ದ ಶಿವಪ್ರಕಾಶ್ ದೇವರಾಜು, ದಶಕಗಳಷ್ಟು ಹಳೆಯ ಪ್ರಕರಣಗಳ ಆರೋಪಿಗಳ ಬಂಧನ, ಅಕ್ರಮ ಜಾನುವಾರು ಸಾಗಾಟಕ್ಕೆ ಬ್ರೇಕ್ ಹಾಕುವ ಕಾರ್ಯ, ಓಸಿ ಮಟ್ಕಾಕ್ಕೆ ಕಡಿವಾಣ ಸೇರಿದಂತೆ ಹೀಗೆ ಹತ್ತು ಹಲವು ಕಾರ್ಯಗಳ ಮೂಲಕ ಗಮನ ಸೆಳೆದಿದ್ದರು.
ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಡ್ಯಕ್ಕೆ ಹೊಸ ಎಸ್ಪಿ
ಇದರ ನಡುವೆ ಅವರ ವರ್ಗಾವಣೆಗೆ ರಾಜಕೀಯವಾಗಿ ಐದು ತಿಂಗಳಿನಿಂದ ತೆರೆಮರೆಯ ಪ್ರಯತ್ನ ನಡೆದಿದ್ದು, ಈ ಬಗ್ಗೆ ಜುಲೈ 5ರಂದು 'ಒನ್ ಇಂಡಿಯಾ ಕನ್ನಡ'ದಲ್ಲಿ 'ಉತ್ತರಕನ್ನಡ ಎಸ್ಪಿ ವರ್ಗಾವಣೆಗೆ ತೆರೆಮರೆಯ ಪ್ರಯತ್ನ?' ಶೀರ್ಷಿಕೆಯಡಿ ಸುದ್ದಿ ಕೂಡ ಪ್ರಕಟವಾಗಿತ್ತು.
ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದು ಯಾಕೆ?
ಸುದ್ದಿ ಪ್ರಕಟಗೊಂಡ 10 ದಿನದಲ್ಲೇ, ಅಂದರೆ ಜುಲೈನಲ್ಲಿ ಅವರನ್ನು ವರ್ಗಾವಣೆ ಮಾಡಿ, ಉತ್ತರ ಪ್ರದೇಶ ಮೂಲದ, 2010ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿತ್ತು. ಆದರೆ ಆ ಆದೇಶದಲ್ಲಿ ಶಿವಪ್ರಕಾಶ್ ದೇವರಾಜು ಅವರನ್ನು ವರ್ಗಾಯಿಸಿ ಸ್ಥಳ ನಿಯುಕ್ತಿ ಮಾಡಿರಲಿಲ್ಲ.
ಅಂತಿಮವಾಗಿ ಆದೇಶ ಜಾರಿಯಾಗದೆ, ವರ್ತಿಕಾ ಅವರನ್ನು ಮಂಡ್ಯಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಶಿವಪ್ರಕಾಶ್ ದೇವರಾಜು ಉತ್ತರ ಕನ್ನಡದಲ್ಲೇ ಮುಂದುವರಿದಿದ್ದರು. ಇದೀಗ ಎರಡನೇ ಬಾರಿಗೆ ವರ್ಗಾವಣೆ ಆದೇಶವಾಗಿದ್ದು, ಈ ಬಾರಿ ಶಿವಪ್ರಕಾಶ್ ದೇವರಾಜು ಅವರನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಉತ್ತರ ಕನ್ನಡಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಯಾಗಿದ್ದ ಡಾ.ಸುಮನ್ ಡಿ.ಪೆನ್ನೇಕರ್ ಅವರನ್ನು ವರ್ಗಾಯಿಸಲಾಗಿದೆ.
ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಕಿಡಿ
ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ; ಇದೀಗ ಮಾಡಲಾದ ಆದೇಶದಂತೆ ನಿಯುಕ್ತಿಯಾದರೆ ಡಾ.ಸುಮನ್ ಡಿ.ಪೆನ್ನೇಕರ್ ಅವರು ಉತ್ತರ ಕನ್ನಡದ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಈವರೆಗೆ ಮಹಿಳಾ ಅಧಿಕಾರಿಗಳು ಎಸ್ಪಿಯಾಗಿ ನೇಮಕವಾಗಿರಲಿಲ್ಲ. ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಇಂಕಾಗ್ಲೋ ಜಮೀರ್ 2012ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಡಾ.ಸುಮನ್ ಮೊದಲ ಮಹಿಳಾ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಬಗೆಹರಿದ ಮಂಡ್ಯ ವಿವಾದ; ಇನ್ನು ಅಕ್ಟೋಬರ್ 20ರಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಎಂ.ಅಶ್ವಿನಿ ಅವರನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ, ಆ ಜಾಗಕ್ಕೆ ಸುಮನ್ ಡಿ.ಪೆನ್ನೇಕರ್ ಅವರನ್ನು ನೇಮಕ ಮಾಡಿತ್ತು. ಆದರೆ, ಸುಮನ್ ಡಿ.ಪನ್ನೇಕರ್ ಅವರಿಗೆ ವರಿಷ್ಠಾಧಿಕಾರಿಯಾಗಿ ಚಾರ್ಜ್ ತೆಗೆದುಕೊಳ್ಳದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಮೌಖಿಕ ಆದೇಶ ನೀಡಿದ್ದರಿಂದ ಕಳೆದ 1 ವಾರದಿಂದ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಖಾಲಿ ಇತ್ತು. ಮಂಡ್ಯಕ್ಕೆ ನೇಮಕಗೊಂಡರೂ ಅಲ್ಲಿ ಅಧಿಕಾರ ವಹಿಸಿಕೊಳ್ಳದೇ ಇದೀಗ ಡಾ.ಸುಮನ್ ಅವರು ನೇರವಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮಂಡ್ಯದಿಂದ ಉತ್ತರ ಕನ್ನಡಕ್ಕೆ; ಹಾಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಶಿವಪ್ರಕಾಶ್ ದೇವರಾಜು ಈ ಹಿಂದೆ ಮಂಡ್ಯದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅಲ್ಲಿಂದ ವರ್ಗಾವಣೆಗೊಂಡು ಉತ್ತರ ಕನ್ನಡಕ್ಕೆ ನೇಮಕೊಂಡಿದ್ದರು. ಜುಲೈನಲ್ಲಿ ಆಗಿದ್ದ ವರ್ಗಾವಣೆ ಆದೇಶದಲ್ಲಿ ಉತ್ತರ ಕನ್ನಡಕ್ಕೆ ವರ್ಗಾವಣೆಗೊಂಡಿದ್ದ ವರ್ತಿಕಾ ಕಟಿಯಾರ್, ಇಲ್ಲಿಗೆ ಆಗಮಿಸದೆ ಮಂಡ್ಯದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ವರ್ಗಾವಣೆಗೊಂಡಿರುವ ಡಾ.ಸುಮನ್ ಕೂಡ ಮಂಡ್ಯಕ್ಕೆ ವರ್ಗಾವಣೆಗೊಂಡು, ನಂತರ ಉತ್ತರ ಕನ್ನಡಕ್ಕೆ ನಿಯುಕ್ತಿಗೊಳ್ಳುತ್ತಿದ್ದಾರೆ.
ಸರಳ ವ್ಯಕ್ತಿತ್ವದ ಅಧಿಕಾರಿ ಡಾ. ಸುಮನ್; ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೀದಿ ಗ್ರಾಮದ ಡಾ.ಸುಮನ್, 2013ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ. ಆಯುರ್ವೇದಿಕ್ ವೈದ್ಯರಾಗಿದ್ದ ಅವರು 2009ರಿಂದ ಯುಪಿಎಸ ಸಿಗೆ ತಯಾರಿ ನಡೆಸಿದ್ದರು. 2018ನೇ ಸಾಲಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವೇಳೆ ಉಂಟಾಗಿದ್ದ ಭೂಕುಸಿತದ ಸಂದರ್ಭದಲ್ಲಿ ಅವರು ಮತ್ತವರ ತಂಡ ನಡೆಸಿದ್ದ ರಕ್ಷಣಾ ಕಾರ್ಯಕ್ಕೆ ಅಲ್ಲಿನ ಜನ ಮೆಚ್ಚಿದ್ದರು. ತಮ್ಮ ಮಗಳನ್ನು ಅಂಗನವಾಡಿಗೆ ದಾಖಲಿಸಿ ಸರಳತೆ ಮೆರೆದಿದ್ದರು. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ.